Belagavi NewsBelgaum NewsKannada NewsKarnataka NewsNationalPolitics

*ಆಟೋ ರಿಕ್ಷಾಗಳಿಗೆ ಮೀಟರ್ ಕಡ್ಡಾಯ: ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಸೂಚನೆ* *ಬೆಳಗಾವಿಯಲ್ಲಿ ಹಾಸ್ಯಾಸ್ಪದವಾಗಿರುವ ಆಟೋ ಮೀಟರ್!*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುವಂತಹ ಸ್ಥಳಗಳನ್ನು ಗುರುತಿಸಿ ಅಂತಹ ಸ್ಥಳಗಳ‌ ದುರಸ್ತಿಗೆ ಕ್ರಮ ವಹಿಸುವ ಮೂಲಕ ಅಪಘಾತಗಳ‌‌ ನಿಯಂತ್ರಣಕ್ಕೆ ಕ್ರಮ‌ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ (ಸೆ.25) ಜರುಗಿದ ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ‌ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ‌ ಮೂರು ವರ್ಷಗಳಲ್ಲಿ ಆದಂತಹ ಅಪಘಾತಗಳ ಸಂಖ್ಯೆ, ಅಪಘಾತದಿಂದ ಮೃತರ ಸಂಖ್ಯೆ ಹಾಗೂ ಬ್ಲ್ಯಾಕ್ ಸ್ಪಾಟ್(ಅಪಘಾತ ಸ್ಥಳ) ಗಳ ಕ್ರೋಢಿಕೃತ ವರದಿಯನ್ನು ಸಲ್ಲಿಸಲು ತಿಳಿಸಿದರು.  ಈಗಾಗಲೇ ಗುರುತಿಸಲಾದ ಬ್ಲ್ಯಾಕ್ ಸ್ಪಾಟ್ ಗಳಲ್ಲಿ ಅಪಘಾತಗಳ‌ ನಿಯಂತ್ರಣಕ್ಕೆ ಕ್ರಮ ವಹಿಸಬೇಕು.  

ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗ ಹಾಗೂ ಲೊಕೊಪಯೋಗಿ ಇಲಾಖೆಗಳು ಜಂಟಿಯಾಗಿ ಸಮಿಕ್ಷೆ ಜರುಗಿಸಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತ ಸಂಭವಿಸುವಂತಹ ಸ್ಥಳಗಳ ಹಾಗೂ ಬ್ಲ್ಯಾಕ್ ಸ್ಪಾಟ್ ಗಳ ವರದಿ ನೀಡಲು ಸೂಚಿಸಿದರು.

ಬೆಳಗಾವಿ‌ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಿರುವ ಸಿ.ಸಿ.‌ಕ್ಯಾಮೆರಾಗಳು ಸುಸ್ಥಿತಿಯಲ್ಲಿರುವ ಕುರಿತು ಖಾತರಿಪಡಿಸಿಕೊಳ್ಳಬೇಕು. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ವಾಹನಗಳ ವೇಗವನ್ನು ನಿಯಂತ್ರಿಸಲು ವೇಗ ನಿಯಂತ್ರಣಗಳನ್ನು ಅಳವಡಿಸಬೇಕು.

ರಸ್ತೆಯಲ್ಲಿನ ಗುಂಡಿಗಳ ದುರಸ್ತಿಗೆ ಕೂಡಲೇ‌ ಕ್ರಮ‌ ವಹಿಸಬೇಕು. ಈ ಸಂಬಂಧ ಸಂಬಂಧಿಸಿದ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಬಳಸುವಂತೆ ಜಾಗೃತಿ ಮೂಡಿಸಬೇಕು. ಹೆಲ್ಮೆಟ್ ಬಳಸದ ದ್ವಿಚಕ್ರ ವಾಹನ ಸವಾರರ ವಿರುದ್ಧ ದಂಡ‌ ಹಾಗೂ ಪ್ರಕರಣ ದಾಖಲಿಸಬೇಕು. ಆಟೋ ರಿಕ್ಷಾಗಳಲ್ಲಿ ಮಿತಿಗಿಂತ ಹೆಚ್ಚಾಗಿ ಶಾಲಾ ಮಕ್ಕಳನ್ನು‌ ಕರೆದೊಯ್ಯುವಂತಹ ಆಟೋ ಚಾಲಕರ ಚಾಲನಾ ಪರವಾನಿಗೆ ರದ್ದುಪಡಿಸಲು ಕ್ರಮ‌ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ನಗರದಲ್ಲಿ ಈಗಾಗಲೇ ಆಟೋ ರಿಕ್ಷಾಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೊಸ ಆಟೋ ರಿಕ್ಷಾಗಳ ನೊಂದಣಿ ಕಾರ್ಯ ಸ್ಥಗಿತಗೊಳಿಸುವ ಕುರಿತು ಆಟೋ‌ ಅಸೋಷಿಯನ್ ಮುಖಂಡರ ಮನವಿಗೆ ಸಂಬಂಧಿಸಿದಂತೆ ಮಾತನಾಡಿದ ಜಿಲ್ಲಾಧಿಕಾರಿಗಳು ಈ ಕುರಿತು ಪರಿಶೀಲಿಸಿ ಶೀಘ್ರವೆ ಕ್ರಮ‌ ಜರುಗಿಸಲಾಗುವುದು ಎಂದರು.  

ಮುಂದಿನ‌ ಮಾಹೆಯಿಂದ ನಗರದ ಎಲ್ಲ‌ ಆಟೋ ರಿಕ್ಷಾಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಲಾಗುವದು. ಈ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಹಾಗೂ ಪೋಲಿಸ್ ಇಲಾಖೆ ವತಿಯಿಂದ ಆಟೋ ರಿಕ್ಷಾ ಅಸೊಸಿಯೇಶನ್ ಮುಖಂಡರುಗಳೊಂದಿಗೆ ಸಭೆ ಜರುಗಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ಮಾತನಾಡಿ, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರದ್ದಾಗಿರುವ ಚಾಲನಾ ಪರವಾನಿಗೆಗಳ ವಿವರವನ್ನು ಒದಗಿಸುವದರ ಜೊತೆಗೆ ಆ  ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಲು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅತೀಯಾದ ವೇಗದಿಂದ ಹೆಚ್ಚಿನ ಅಫಘಾತಗಳು ಸಂಭವಿಸುತ್ತಿದ್ದು, ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಸರಕು ಸಾಗಾಣಿಕೆ ವಾಹನಗಳಲ್ಲಿ ಮೀತಿಗಿಂತ ಹೆಚ್ಚಿಗೆ ಸರಕು ಸಾಗಾಣಿಕೆ ನಿಯಂತ್ರಿಸಬೇಕು. 

ಮದ್ಯಪಾನ ಮಾಡಿ ವಾಹನ ಚಾಲನೆ, ಚಾಲನಾ ಸಂದರ್ಭದಲ್ಲಿ ಮೊಬೈಲ್ ಬಳಕೆ, ವಾಹನ  ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ದಂಡ‌ ವಸೂಲಿ ಮಾಡಬೇಕು.  ಇದರ ಜೊತೆಗೆ ವಾಹನಗಳ ದಾಖಲೆಗಳ ಪರಿಶೀಲನೆ ಜರುಗಿಸುವಂತೆ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶೃತಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ.ಸೊಬರದ,  ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೇರಿದಂತೆ  ಸಮಿತಿಯ ಸದಸ್ಯರುಗಳು ಹಾಜರಿದ್ದರು.

—————

ಹೊಸ ಜಿಲ್ಲಾಧಿಕಾರಿಗಳು ಬಂದಾಗಲೊಮ್ಮೆ ಆಟೋ ಮೀಟರ್ ಕಡ್ಡಾಯ ಎನ್ನುತ್ತಾರೆ, ಆದರೆ ಕೆಲವೇ ದಿನದಲ್ಲಿ ಮರೆತುಬಿಡುತ್ತಾರೆ. ಜನರ ಬವಣೆ ಮಾತ್ರ ತಪ್ಪುವುದಿಲ್ಲ. ಆಟೋ ಮೀಟರ್ ವಿಷಯ ಬೆಳಗಾವಿ ಜನರಿಗೆ ಹಾಸ್ಯಾಸ್ಪದವಾಗಿ ಮಾರ್ಪಟ್ಟಿದೆ, ಈಗಿನ ಜಿಲ್ಲಾಧಿಕಾರಿಗಳು ಏನು ಮಾಡುತ್ತಾರೆ ಕಾದು ನೋಡಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button