ಸರಪ್ರೈಸ್ ಕೊಡಲು ಹೋಗಿ ವಿವಾದ ಎಳೆದುಕೊಂಡ ಯುವ ಜೋಡಿ

ಪ್ರಗತಿವಾಹಿನಿ ಸುದ್ದಿ, ಮೈಸೂರು – ಅಭಿಮಾನಿಗಳಿಗೆ ಸರಪ್ರೈಸ್ ಕೊಡಲು ಹೋದ ಸಿಲೆಬ್ರಿಟಿ ಜೋಡಿ ಈಗ ವಿವಾದಕ್ಕೊಳಗಾಗಿದೆ. ಖ್ಯಾತ ಗಾಯಕ ಚಂದನ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿ ಈಗ ಸಂಕಷ್ಟಕ್ಕೆ ಸಿಲುಕಿದ್ದು, ಏನೋ ಮಾಡಲು ಹೋಗಿ ಇನ್ನೇನೋ ಆಗಿದೆ.

ನಿನ್ನೆ ರಾತ್ರಿ ಮೈಸೂರಲ್ಲಿ ಯುವದಸರಾ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡಗೆ ಮದುವೆ ಪ್ರಫೋಸ್ ಮಾಡಿದರು. ಅಷ್ಟೇ ಅಲ್ಲ ಉಂಗುರವನ್ನೂ ತೊಡಿಸಿದರು. ಈ ವೇಳೆ ಅಲ್ಲಿದ್ದವರಿಗೆಲ್ಲ ಭಾರೀ ಆಶ್ಚರ್ಯವಾಯಿತು. ಅನಿರೀಕ್ಷಿತವಾದ ಈ ಘಟನೆಯಿದ ಇಡೀ ವಾತಾವರಣ ಹಬ್ಬದ ಸಂಭ್ರಮದಂತಾಗಿತ್ತು.

ಚಂದನ ಶೆಟ್ಟಿ, ನಿವೇದಿತಾ ಗೌಡ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಬಹಳ ದಿನದಿಂದ ಇತ್ತು. ಆದರೆ ಅವರು ಅದನ್ನು ಅಲ್ಲಗಳೆಯುತ್ತಲೇ ಬಂದಿದ್ದರು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇಬ್ಬರೂ ಒಟ್ಟಿಗಿದ್ದರು. ಆದರೆ ನಿನ್ನೆ ಯುವದಸರಾ ವೇದಿಕೆಯಲ್ಲಿ ಸೇರಿದ್ದ ಸಹಸ್ರ ಸಹಸ್ರ ಜನರಿಗೆ ಅವರು ಶಾಕ್ ನೀಡಿದರು.

ಯುವದಸರಾ ನಿಗದಿಯಂತೆ 11 ಗಂಟೆಗೆ ಮುಗಿಯಬೇಕಿತ್ತು. ಆದರೆ ಚಂದನ ಶೆಟ್ಟಿ ತಾವು ಇನ್ನೂ ಹಾಡುವುದಾಗಿ ಹೇಳಿ ಕಾರ್ಯಕ್ರಮವನ್ನು ವಿಸ್ತರಿಸಿದರು. ಆ ವೇಳೆ ನಿವೇದಿತಾ ಗೌಡ ಅವರನ್ನೂ ವೇದಿಕೆಗೆ ಕರೆದು, ಮದುವೆಯ ಪ್ರಫೋಸ್ ಮಾಡಿದರು. ನಿವೇದಿತಾ ಕೂಡ ಐ ಲವ್ ಯೂ ಚಂದನ್ ಎನ್ನುವ ಮೂಲಕ ಒಪ್ಪಿಗೆ ಸೂಚಿಸಿದರು. ಆ ವೇಳೆ ಕಿಸೆಯಲ್ಲಿದ್ದ ಉಂಗುರ ತೆಗೆದ ಚಂದನ್ ಶೆಟ್ಟಿ ವೇದಿಕೆಯ ಮೇಲೇ ನಿವೇದಿತಾಗೆ ತೊಡಿಸಿದರು. ಅಲ್ಲಿದ್ದವರೆಲ್ಲ ಚಪ್ಪಾಳೆಯೊಂದಿಗೆ ಸಂಭ್ರಮಿಸಿದರು.

ನಾನು ಶುಕ್ರವಾರ ಬೆಳಗ್ಗೆ ಈ ಬಗ್ಗೆ ಯೋಚಿಸಿ, ಈ ನಿರ್ಧಾರಕ್ಕೆ ಬಂದಿದ್ದೆ. ಬೇರೆ ಯಾರಿಗೂ ಇದು ಗೊತ್ತಿರಲಿಲ್ಲ ಎಂದಿದ್ದಾರೆ. ಚಂದನ್ ಮತ್ತು ನಿವೇದಿತಾ ಅವರ ತಂದೆ- ತಾಯಿ ಕೂಡ ಅಲ್ಲಿ ಉಪಸ್ಥಿತರಿದ್ದರು.

ಆದರೆ ಶನಿವಾರ ಬೆಳಗಾಗುತ್ತಿದ್ದಂತೆ ಇದು ವಿವಾದಕ್ಕೊಳಗಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದರು. ಸರಕಾರ ಕಾರ್ಯಕ್ರಮದಲ್ಲಿ ಖಾಸಗಿ ಎಂಗೇಜ್ ಮೆಂಟ್ ಸರಿಯಲ್ಲ ಎಂದು ಕಿಡಿಕಾರಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕೂಡ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ಅಕ್ಷಮ್ಯ ಅಪರಾಧ ಎಂದಿದ್ದಾರೆ. ಇದು ದಸರಾ ಸಮಿತಿಗೆ ಗೊತ್ತಿರಲಿಲ್ಲ. ತಪ್ಪು ಮಾಡಿದವರಿಗೆ ದೇವಿಯೇ 6 ತಿಂಗಳಲ್ಲಿ ಶಿಕ್ಷೆ ನೀಡಲಿದೆ ಎಂದೂ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ವಿವಾದವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಚಂದನ ಶೆಟ್ಟಿ, ಇದು ಎಂಗೇಜ್ ಮೆಂಟ್ ಅಲ್ಲ. ಸುಮ್ನೆ ಅಭಿಮಾನಿಗಳಿಗೆ ಖುಷಿಪಡಿಸುವುದಕ್ಕೋಸ್ಕರ ಮಾಡಿರುವುದು. ಆದಾಗ್ಯೂ ಇದು ತಪ್ಪು ಎಂದಾದರೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button