
ಪ್ರಗತಿವಾಹಿನಿ ಸುದ್ದಿ: ಸಬ್ ಇನ್ಸ್ ಪೆಕ್ಟರ್ ಪತ್ನಿಯ್ರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೆಚ್.ಬಿ.ಆರ್ ಬಡಾವಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆ.ಜಿ.ಹಳ್ಳಿ ಸಬ್ ಇನ್ಸ್ ಪೆಕ್ಟರ್ ನಾಗರಾಜ್ ಪತ್ನಿ ಶಾಲಿನಿ ಆತ್ಮಹತ್ಯೆಗೆ ಶರಣಾದವರು. ಸಬ್ ಇನ್ಸ್ ಪೆಕ್ಟರ್ ನಾಗರಾಜ್ ಅವರನ್ನು ಎರಡನೆ ಮದುವೆಯಾಗಿದ್ದ ಶಾಲಿನಿ ಇದೀಗ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದು ಅನುಮಾನಕ್ಕೆ ಕಾರಣವಾಗಿದೆ.
ಮೃತ ಶಾಲಿನಿ ಹಾಗೂ ನಾಗರಾಜ್ ಇಬ್ಬರೂ ಇಳಕಲ್ ಮೂಲದವರು. ಹೈಸ್ಕೂಲಿನಲ್ಲಿ ಟ್ಯೂಷನ್ ಮೇಟ್ಸ್ ಆಗಿದ್ದರು. ನಂತರ ಶಾಲಿನಿ ಎಂಎಸ್ ಸಿ ಹಾಗೂ ನಾಗರಾಜ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. ಬಳಿಕ ನಾಗರಾಜ್ ಬೆಂಗಳೂರಿನಲ್ಲಿ ಪಿಎಸ್ ಐ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಶಾಲಿನಿ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಡುತ್ತಿದ್ದರು. ನಾಗರಾಜ್ ಗೆ ಪಿಎಸ್ ಐ ಪರೀಕ್ಷೆಗೆ ಆರ್ಥಿಕ ಸಹಾಯವನ್ನೂ ಮಾಡಿದ್ದರು ಎನ್ನಲಾಗಿದೆ. ಇಬ್ಬರ ನಡುವೆ ಸ್ನೇಹ ಪ್ರೀತಿಗೆ ತಿರುಗಿತ್ತು. ಶಾಲಿನಿ ನಾಗರಾಜ್ ಗಾಗಿ ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿದ್ದರು. ಬಳಿಕ ಮನೆಯವರ ವಿರೋಧದ ನಡುವೆಯೂ ಸಬ್ ಇನ್ಸ್ ಪೆಕ್ಟರ್ ನಾಗರಾಜ್ ಅವರನ್ನು ಮದುವೆಯಾಗಿದ್ದರು.
ಕಳೆದ ಕೆಲ ತಿಂಗಳಿಂದ ಶಾಲಿನಿ ಹಾಗೂ ನಾಗರಾಜ್ ನಡುವೆ ಜಗಳವಾಗಿ, ವೈಮನಸ್ಸು ಮೂಡಿತ್ತು ಎನ್ನಲಾಗಿದೆ. ಪತಿ ಮನೆಗೆ ಬರುತ್ತಿಲ್ಲವೆಂದು ಶಾಲಿನಿ ನೊಂದಿದ್ದರು. ಇದೇ ವಿಚಾರವಗಿ ನಿನ್ನೆ ರಾತ್ರಿ ಕರೆ ಮಾಡಿದ್ದ ಶಾಲಿನಿ ರೈಲಿಗೆ ಸಿಲುಕಿ ಸಾಯುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಈ ವೇಳೆ ಹೊಯ್ಸಳ ಸಿಬ್ಬಂದಿ ಶಾಲಿನಿಯವರನ್ನು ರಕ್ಷಿಸಿ ಮನೆಗೆ ಬಿಟ್ಟು ತೆರಳಿದ್ದರಂತೆ. ಹೊಯ್ಸಳ ಸಿಬ್ಬಂದಿ ಮನೆಯಿಂದ ತೆರಳಿದ ಬಳಿಕ ಶಾಲಿನಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.