
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಚಿನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ಘಟನೆ ನೆನೆದು ಡಿಸಿಎಂ ಡಿ.ಕೆ.ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ.
ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಈ ಘಟನೆ ನಮ್ಮ ಮನೆಯಲ್ಲಿಯೇ ನಡೆದಿದೆ. ನಮ್ಮ ರಾಜ್ಯದಲ್ಲಿ ಇಂತಹ ಘಟನೆ ನಡೆಯಬಹುದು ಎಂದು ನಿರೀಕ್ಷಿಸಿಯೂ ಇರಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ.
ಮೃತಪಟ್ಟವರೆಲ್ಲರೂ ಸಣ್ನ ವಯಸ್ಸಿನವರು. ತುಂಬಾ ನೋವಾಗಿದೆ. ಅವರ ಕುಟುಂಬದವರ ನೋವು, ಕಣ್ಣೀರು ನೋಡಲು ಆಗುತ್ತಿಲ್ಲ ಎಂದು ದು:ಖಿತರಾಗಿದ್ದಾರೆ.
ನಾನು ಸ್ಟೇಡಿಯಂ ಬಳಿ ಹೋದಾಗ ಇಂತಹ ಘಟನೆ ನಡೆದ ಬಗ್ಗೆ ನನಗೆ ಗೊತ್ತಿರಲಿಲ್ಲ. ಕೆಲ ಮಾಧ್ಯಮದವರು ಹೇಳಿದರು. ಬಳಿಕ ಕಮಿಷ್ನರ್ ಮಾಹಿತಿ ನೀಡಿದರು. ನಾನು ತಕ್ಷಣ ಮ್ಯಾನೇಜ್ಮೆಂಟ್ ಗೆ ಹೇಳಿ ಕೂಡಲೇ ನನ್ನ ಕಾರಿನಲ್ಲಿಯೇ ಅವರನ್ನು ಕರೆದುಕೊಂಡು ಹೋದೆ ಎಂದಿದ್ದಾರೆ.
ಯಾರು ಏನೇ ಹೇಳಲಿ, ವಿಪಕ್ಷಗಳು ಟೀಕೆ ಮಾಡಲಿ ಅವರು ರಾಜಕೀಯಕ್ಕಾಗಿ ಆರೋಪ ಮಾಡುತ್ತಿದ್ದಾರೆ. ಅವರ ಅವಧಿಯಲ್ಲಿ ಏನಾಗಿದೆ ಎಂಬುದು ಗೊತ್ತಿದೆ. ರಾಜ್ ಕುಮಾರ್ ಅವರು ಅಗಲಿದ ವೇಳೆ ಏನಾಯಿತು ಎಂಬುದು ಎಲ್ಲರೀಗೂ ಗೊತ್ತಿದೆ. ನಮಗೂ ಜವಾಬ್ದಾರಿ ಇದೆ. ನಮ್ಮ ಮನೆಯಲ್ಲಿಯೇ ಈ ದುರಂತ ಸಂಭವಿಸಿದೆ ಎಂಬ ನೋವಿದೆ ಎಂದು ಹೇಳಿದರು.
ಬದುಕಿ ಬಾಳಬೇಕಿದ್ದ ನಮ್ಮ ಮನೆಯ ಮಕ್ಕಳು ಕಾಲ್ತುಳಿತಕ್ಕೆ ಬಲಿಯಾಗಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಭಾವುಕ
ಹೆಣದ ಮೇಲೆ ರಾಜಕೀಯ ಮಾಡುವುದೇ ಕುಮಾರಸ್ವಾಮಿ, ಬಿಜೆಪಿ ನಾಯಕರ ವೃತ್ತಿ
ಶೋಕದ ಸಮಯದಲ್ಲಿ ಅವರಂತೆ ನೀಚ ರಾಜಕಾರಣ ಮಾಡಲ್ಲ, ಅಧಿವೇಶನದಲ್ಲಿ ಚರ್ಚೆಗೆ ಬಂದಾಗ ಅವರ ಆಡಳಿತದಲ್ಲಿನ ಘಟನೆಗಳ ಬಗ್ಗೆ ಚರ್ಚೆ ಮಾಡುತ್ತೇನೆ
“ಬದುಕಿ ಬಾಳಬೇಕಿದ್ದ ನಮ್ಮ ಮನೆಯ ಮಕ್ಕಳು ಕಾಲ್ತುಳಿತಕ್ಕೆ ಬಲಿಯಾಗಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ದುರ್ಘಟನೆಯಿಂದ ಜೀವಹಾನಿಯಾಗಿದೆ. ಬೆಂಗಳೂರು ಹಾಗೂ ಕರ್ನಾಟಕ ರಾಜ್ಯದ ಘನತೆಗೆ ಧಕ್ಕೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮಾಡಿ ಲೋಪದೋಷ ಸರಿಪಡಿಸಲಾಗುವುದು. ಇದರಿಂದ ನಾವು ಪಾಠವನ್ನು ಕಲಿಯಬೇಕಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾವುಕರಾದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಬುಧವಾರ ನಡೆದ ದುರ್ಘಟನೆ ಬಗ್ಗೆ ಕೇಳಿದಾಗ, “ನಮ್ಮ ರಾಜ್ಯದಲ್ಲಿ ಇಂತಹ ದುರ್ಘಟನೆ ನಡೆಯುತ್ತದೆ ಎಂದು ನಾವ್ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆರ್ ಸಿಬಿ ತಂಡ ಬೆಂಗಳೂರಿಗೆ ಬರುತ್ತಿರುವುದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ನಮ್ಮ ಸರ್ಕಾರದ ಮುಂದೆ ಬೇರೆ ಆಯ್ಕೆ ಇರಲಿಲ್ಲ. ಈ ದುರ್ಘಟನೆ ನಡೆದಿರುವುದು ನಮ್ಮ ಕುಟುಂಬದಲ್ಲೇ ಎಂದು ಭಾವಿಸಿದ್ದೇವೆ. ದುರ್ಘಟನೆಯಲ್ಲಿ ಮೃತಪಟ್ಟವರು ನಮ್ಮ ಮನೆಯವರೇ ಮೃತಪಟ್ಟಿದ್ದಾರೆ ಎಂಬ ನೋವು ರಾಜ್ಯದಲ್ಲಿ ತುಂಬಿದೆ. ಈ ನೋವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಸತ್ತವರು ನಮ್ಮ ಕುಟುಂಬದ ಸದಸ್ಯರು. ಈ ಪರಿಸ್ಥಿತಿಯಲ್ಲಿ ನಾವು ಸಂತಾಪ ಸೂಚಿಸಬೇಕು. ರಾಜಕೀಯ ಮಾಡಬಾರದು. ಈ ದುರ್ಘಟನೆಯ ಹೊಣೆಯನ್ನು ಒಬ್ಬರೂ ಇಬ್ಬರ ಮೇಲೆ ಹಾಕಲು ಆಗುವುದಿಲ್ಲ” ಎಂದು ತಿಳಿಸಿದರು.
“18 ವರ್ಷಗಳ ಕಾಲ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಲ್ಲಿ ಸಂತೋಷ ಕಟ್ಟೆಯೊಡೆದಿತ್ತು. ಹೀಗಾಗಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದರು ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ನಿನ್ನೆ ಆಸ್ಪತ್ರೆಯಲ್ಲಿ ಮೃತರ ಪೋಷಕರು ಮರಣೋತ್ತರ ಪರೀಕ್ಷೆ ಮಾಡಬೇಡಿ. ನಮ್ಮ ಮಗುವಿನ ಮೃತದೇಹ ನಮಗೆ ಕೊಡಿ ಎಂದು ಅಂಗಲಾಚಿದರು. ನಾವು ಆ ರೀತಿ ಪರೀಕ್ಷೆ ಮಾಡದೇ ಮೃತದೇಹವನ್ನು ಹಸ್ತಾಂತರ ಮಾಡಲು ಹೇಗೆ ಸಾಧ್ಯ? ಇದರಿಂದ ನಾಳೆ ಕಾನೂನಾತ್ಮಕ ಸಮಸ್ಯೆಗಳು ಎದುರಾಗುತ್ತವೆ. ಈ ಸಾವು ಯಾವ ಕಾರಣಕ್ಕೆ ಆಗಿದೆ ಎಂಬ ವೈಜ್ಞಾನಿಕ ವರದಿ ಬೇಕು” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ರಾಜಕೀಯ ಮಾಡುವುದರಲ್ಲಿ ಅವರು ಮಾಸ್ಟರ್ ಮೈಂಡ್:
ಬಿಜೆಪಿಯವರ ಟೀಕೆ ಬಗ್ಗೆ ಕೇಳಿದಾಗ, “ಈ ವಿಚಾರದಲ್ಲಿ ನಾನು ರಾಜ್ಯದ ಜನತೆಗೆ ಉತ್ತರ ನೀಡಬೇಕೇ ಹೊರತು, ಬಿಜೆಪಿಯವರ ಹೇಳಿಕೆಗೆ ಉತ್ತರಿಸುವ ಅಗತ್ಯವಿಲ್ಲ. ಅವರ ಹೇಳಿಕೆಗಳು ಅಸಂಬದ್ಧ, ರಾಜಕೀಯ ಮಾಡುವುದರಲ್ಲಿ ಅವರು ಮಾಸ್ಟರ್ ಮೈಂಡ್ ಗಳು” ಎಂದು ತಿಳಿಸಿದರು.
“ಕುಮಾರಸ್ವಾಮಿ ಹಾಗೂ ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಇದೇ ಅವರ ವೃತ್ತಿ. ಅವರ ಆಡಳಿತ ಅವಧಿಯಲ್ಲಿ ಏನೆಲ್ಲಾ ಆಗಿದೆ ಎಂದು ಪಟ್ಟಿ ನೀಡಬಹುದು. ಆದರೆ ಅವರ ಮಟ್ಟಕ್ಕೆ ಇಳಿದು ರಾಜಕಾರಣ ಮಾಡಲು ನನಗೆ ಇಚ್ಛೆ ಇಲ್ಲ. ಆದರೆ ಬಾಳಿ ಬದುಕಬೇಕಾಗಿದ್ದ 14-15 ವರ್ಷದ ಮಕ್ಕಳು ಸತ್ತಿರುವುದನ್ನು ಕಣ್ಣಾರೆ ನೋಡಿದ್ದೇನೆ. ಇದನ್ನು ಯಾವುದೇ ಕುಟುಂಬ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಪೊಲೀಸ್ ಆಯುಕ್ತರು ಈ ಕಾರ್ಯಕ್ರಮವನ್ನು 10 ನಿಮಿಷಗಳಲ್ಲಿ ಮುಗಿಸಿ ಎಂದು ಹೇಳಿದರು. ನಾನು ಕೂಡ ಆರ್ ಸಿಬಿ ತಂಡದ ಜೊತೆ ಮಾತನಾಡಿ ಕಾರ್ಯಕ್ರಮವನ್ನು ಮೊಟಕುಗೊಳಿಸಲಾಯಿತು” ಎಂದು ಭಾವುಕರಾದರು.
“ಕೆಎಸ್ ಸಿಎ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕೆಎಸ್ ಸಿಎಗೆ ಹೋಗಲು ಸಾಧ್ಯವಾದಾಗ ನನ್ನ ಕಾರಿನಲ್ಲೇ ಅವರನ್ನು ಕರೆದುಕೊಂಡು ಹೋಗಬೇಕಾಯಿತು. ಕ್ರೀಡಾಂಗಣಕ್ಕೆ ಹೋಗುವಾಗ ಈ ರೀತಿ ದುರ್ಘಟನೆ ನಡೆದಿದೆ ಎಂದು ಮಾಧ್ಯಮ ಸ್ನೇಹಿತರು ನನಗೆ ಮಾಹಿತಿ ನೀಡಿದರು. ನಂತರ ಆಯುಕ್ತರು ನನಗೆ ಮಾಹಿತಿ ನೀಡಿದರು” ಎಂದರು.
ಅಧಿವೇಶನದಲ್ಲಿ ಚರ್ಚೆಗೆ ಬಂದಾಗ ಅವರ ಕಾಲದ ಘಟನೆಗಳ ಬಗ್ಗೆ ಪ್ರಸ್ತಾಪಿಸುತ್ತೇನೆ:
“ಈ ಘಟನೆ ಬಗ್ಗೆ ರಾಜಕೀಯದವರು ಏನೇ ಟೀಕೆ ಮಾಡಿದರೂ ಲೆಕ್ಕ ಇಲ್ಲ. ಅವರ ಚೇಷ್ಟೆ ಇದ್ದಿದ್ದೆ. ಸಿ.ಟಿ ರವಿ, ಕುಮಾರಸ್ವಾಮಿ, ಅಶೋಕ್ ಸೇರಿದಂತೆ ಎಲ್ಲರದ್ದು ಕೇವಲ ರಾಜಕಾರಣ. ಇದೆಲ್ಲದಕ್ಕೂ ಬೇರೆ ಸಮಯದಲ್ಲಿ ಚರ್ಚೆ ಮಾಡುತ್ತೇನೆ. ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೆ ಬಂದಾಗ ಅವರ ಕಾಲದಲ್ಲಿ ಏನಾಗಿತ್ತು ಎಂದು ನಾನು ಪ್ರಸ್ತಾಪ ಮಾಡುತ್ತೇನೆ. ಈಗ ರಾಜಕಾರಣ ಮಾಡುವುದಿಲ್ಲ. ಮಾಧ್ಯಮದವರು ಕೂಡ ಈ ಸಂದರ್ಭದಲ್ಲಿ ರಾಜಕೀಯ ವಿಚಾರಗಳನ್ನು ಪ್ರಸ್ತಾಪ ಮಾಡಬೇಡಿ. ರಾಜಕುಮಾರ್ ಅವರು ಸತ್ತಾಗ ಏನೆಲ್ಲಾ ಆಯಿತು ಎಂದು ನಾನು ಈಗ ಮಾತನಾಡಲು ಬಯಸುವುದಿಲ್ಲ. ಅಂತಹ ನೀಚ ರಾಜಕಾರಣ ಮಾಡಲು ನನಗೆ ಇಷ್ಟವಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಸದಾ ಹೆಣದ ಮೇಲೆ ರಾಜಕೀಯ ಮಾಡುತ್ತಾರೆ. ಇದೇ ಅವರ ರಾಜಕೀಯ ಅಜೆಂಡಾ” ಎಂದು ತಿರುಗೇಟು ನೀಡಿದರು.
ಈ ಸಾವಿಗೆ ನೀವೇ ಹೊಣೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ಕೇಳಿದಾಗ, “ಕುಮಾರಸ್ವಾಮಿಗೆ ನಾನು ಆಮೇಲೆ ಉತ್ತರ ನೀಡುತ್ತೇನೆ. ನಾನು ಕನಕಪುರದಲ್ಲಿ ನ್ಯಾಯಾಲಯ ವಿಚಾರಣೆ ಹಾಜರಾಗಿದ್ದೆ. ಪೊಲೀಸ್ ಅಧಿಕಾರಿಗಳು ಮೆರವಣಿಗೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದ ತಕ್ಷಣವೇ ನಾನು ಬೆಂಗಳೂರಿನತ್ತ ಧಾವಿಸಿದೆ. ಜನ ಬರುವುದನ್ನು ತಡೆಯಲು ಮೆಟ್ರೋ ಸಂಚಾರವನ್ನೇ ಸ್ಥಗಿತಗೊಳಿಸಲಾಯಿತು” ಎಂದು ತಿಳಿಸಿದರು.
ಆಕಸ್ಮಿಕವಾಗಿ ಆದ ದುರ್ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಬೇಕೇ ಹೊರತು ರಾಜಕೀಯ ಮಾಡಬಾರದು: ನಿಕಟಪೂರ್ವ ಸಂಸದ ಡಿ.ಕೆ. ಸುರೇಶ್
ರಾಜಕೀಯ ಮಾಡುವುದಾದರೆ ಬೇರೆ ದುರಂತಗಳ ಬಗ್ಗೆಯೂ ಚರ್ಚೆ ಮಾಡಬೇಕಾಗುತ್ತದೆ
ತನಿಖೆ ನಡೆಸಿ ಲೋಪದೋಷ ಸರಿಪಡಿಸುವಂತೆ ಸರ್ಕಾರಕ್ಕೆ ಮನವಿ
“ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಿಂದ 11 ಜನ ಮೃತಪಟ್ಟಿರುವ ದುರ್ಘಟನೆ ಆಕಸ್ಮಿಕವಾಗಿ ನಡೆದಿದೆ. ಈ ದುರ್ಘಟನೆಗೆ ವಿಷಾದ ವ್ಯಕ್ತಪಡಿಸಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಬೇಕೇ ಹೊರತು ಇದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು” ಎಂದು ನಿಕಟಪೂರ್ವ ಸಂಸದರಾದ ಡಿ.ಕೆ. ಸುರೇಶ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.
ಆರ್ ಸಿವಿ ಗೆಲುವಿನ ಸಂಭ್ರಮದಲ್ಲಿನ ಕಾಲ್ತುಳಿತಕ್ಕೆ ಸರ್ಕಾರವೇ ಹೊಣೆ ಎಂಬ ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ, “ಈ ದುರಂತಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಸಂಭ್ರಮಾಚರಣೆ ವೇಳೆ ಇಂತಹ ದುರಂತ ಸಂಭವಿಸಬಾರದಿತ್ತು. 18 ವರ್ಷಗಳಲ್ಲಿ ಮೂರು ಬಾರಿ ಐಪಿಎಲ್ ಫೈನಲ್ ತಲುಪಿದ್ದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಮಾತ್ರವಲ್ಲ ದೇಶದಾದ್ಯಂತ ಈ ಗೆಲುವಿಗೆ ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದರು. ಆರ್ ಸಿಬಿ ತಂಡ ಗೆಲುವಿನ ಸಂಭ್ರಮಾಚರಣೆಯಲ್ಲಿ 11 ಮಂದಿ ಮೃತಪಟ್ಟಿರುವುದು ಅವರ ಕುಟುಂಬಕ್ಕೆ ಕರಾಳ ದಿನವಾಗಿದ್ದು, ಕ್ರೀಡಾ ಕ್ಷೇತ್ರಕ್ಕೆ ಕಪ್ಪು ಚುಕ್ಕೆ. ಈ ಕಾರ್ಯಕ್ರಮಕ್ಕೆ ಸ್ವಲ್ಪ ಕಾಲಾವಕಾಶ ಪಡೆದು ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಆಯೋಜಿಸಬೇಕಿತ್ತು. ಆತುರದಲ್ಲಿ ಆದ ಸಂಭ್ರಮಾಚರಣೆ ದುರ್ಘಟನೆಗೆ ಕಾರಣವಾಗಿದೆ. ಇದರ ತನಿಖೆ ಮಾಡಿ ಲೋಪದೋಷಗಳನ್ನು ಸರಿಪಡಿಸಬೇಕು” ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ.
ರಾಜಕೀಯ ಮಾಡುವುದಾದರೆ ಬೇರೆ ದುರಂತಗಳ ಬಗ್ಗೆಯೂ ಚರ್ಚೆ ಮಾಡಬೇಕಾಗುತ್ತದೆ
ಜನರ ದಟ್ಟಣೆ ಊಹಿಸುವಲ್ಲಿ ಸರ್ಕಾರ ವಿಫಲವಾಯಿತೇ ಎಂದು ಕೇಳಿದಾಗ, “ಇಷ್ಟೇ ಜನ ಬರುತ್ತಾರೆ ಎಂದು ಊಹಿಸಲು ಯಾರಿಗೂ ಸಾಧ್ಯವಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯವೇ 35 ಸಾವಿರ. ಆದರೆ ನಿನ್ನೆ ಕ್ರೀಡಾಂಗಣದ ಬಳಿ 2 ಲಕ್ಷ ಜನ ಸೇರಿದ್ದರು. ಹೀಗಾಗಿ ಯಾರ ನಿಯಂತ್ರಣಕ್ಕೂ ಸಿಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಷ್ಟೇ ಜನ ಪೊಲೀಸರನ್ನು ನಿಯೋಜಿಸಿದರೂ ನಿಯಂತ್ರಣ ಕಷ್ಟ. ಮಾಧ್ಯಮಗಳ ವರದಿ ಪ್ರಕಾರ 4-5 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಇದು ಆಕಸ್ಮಿಕವಾದ ಘಟನೆ. ಈ ಘಟನೆಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಉತ್ತರ ಪ್ರದೇಶದ ಪ್ರಯಾಗರಾಜ್ ಕಾಲ್ತುಳಿತ ಘಟನೆ ನಡೆದಾಗ ನಾವು ರಾಜಕೀಯ ಮಾಡಲಿಲ್ಲ. ಎಲ್ಲಾ ಮುಂಜಾಗೃತ ಕ್ರಮ ಕೈಗೊಂಡಿದ್ದರೂ ಆದ ದುರ್ಘಟನೆ ನಡೆದಾಗ ಕಾಂಗ್ರೆಸ್ ರಾಜಕೀಯ ಮಾಡಲಿಲ್ಲ. ಈ ದುರಂತದಲ್ಲಿ ಸರ್ಕಾರದ ಪಾಲುದಾರಿಕೆ ಇದ್ದರೆ ಇವರು ಟೀಕೆ ಮಾಡುವುದು ಸರಿ. ಸರ್ಕಾರದ ಪಾಲುದಾರಿಕೆ ಇಲ್ಲದಿರುವಾಗ ಟೀಕೆ ಮಾಡುವುದು ಎಷ್ಟು ಸರಿ? ಸರ್ಕಾರ ಅಭಿಮಾನಿಗಳಿಗೆ ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಒಟ್ಟಾರೆ ಈ ದುರ್ಘಟನೆ ಆಗಿದ್ದು, ಇದಕ್ಕೆ ವಿಷಾದ ವ್ಯಕ್ತಪಡಿಸಿ, ಮುಂದೆ ಎಲ್ಲರೂ ಸೇರಿ ಈ ರೀತಿ ನಡೆಯದಂತೆ ಎಚ್ಚರ ವಹಿಸಬೇಕಾಗುತ್ತದೆ. ಅದು ನಮ್ಮ ಕರ್ತವ್ಯ. ರಾಜಕೀಯವನ್ನೇ ಮಾಡುತ್ತೇನೆ ಎನ್ನುವುದಾದರೆ, ದೇಶದಲ್ಲಿ ನಡೆದಿರುವ ಇತರೆ ದುರ್ಘಟನೆಗಳ ಬಗ್ಗೆಯೂ ಚರ್ಚೆ ಮಾಡಬೇಕಾಗುತ್ತದೆ. ದೇಶದ ಪ್ರಧಾನಮಂತ್ರಿಗಳು ಸಂತಾಪ ಸೂಚಿಸಿದ್ದಾರೆ. ಅಭಿಮಾನಿಗಳ ಸಂತೋಷ, ದುಃಖ, ಮೃತರ ಕುಟುಂಬದ ನೋವಿನಲ್ಲಿ ನಾವು ಇರಬೇಕಾಗುತ್ತದೆ” ಎಂದು ತಿಳಿಸಿದರು.
ಇದು ಸಚಿವರ ಕುಟುಂಬ ಸದಸ್ಯರ ಕಾರ್ಯಕ್ರಮವಾಗಿತ್ತು ಎಂದು ಕೇಳಿದಾಗ, “ಬಿಜೆಪಿಯವರಿಗೆ ಕೆಲಸ ಇಲ್ಲ, ಇಷ್ಟು ದಿನ ಮಲಗಿದ್ದವರು ಈಗ ಎದ್ದಿದ್ದಾರೆ” ಎಂದು ತಿಳಿಸಿದರು.
ಶಿವಕುಮಾರ್ ಬಗ್ಗೆ ಮಾತನಾಡಲು ಕುಮಾರಸ್ವಾಮಿಗೇನು ನೈತಿಕತೆ ಇದೆಯೇ?
ಡಿ.ಕೆ. ಶಿವಕುಮಾರ್ ಅವರ ಪ್ರಚಾರದ ಗೀಳಿಗೆ ಈ ದುರಂತ ಸಂಭವಿಸಿದೆ ಎಂಬ ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ನಾಲಿಗೆ ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ. ಅವರು ರಾತ್ರಿ ಒಂದು ಹೇಳಿದರೆ, ಬೆಳಗ್ಗೆ ಒಂದು ಹೇಳುತ್ತಾರೆ. ಅವರಿಗೆ ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡುವ ನೈತಿಕತೆ ಏನಿದೆ? ನೈತಿಕತೆ ಇಲ್ಲದ ವ್ಯಕ್ತಿ ಹೇಳಿಕೆ ಬಗ್ಗೆ ಮಾತನಾಡುವುದು ಅಸಂಬದ್ಧ. ಕುಮಾರಸ್ವಾಮಿ ಅವರು ಮಾಡಿರುವ ಅನಾಹುತಗಳಿಗೆ ಮೊದಲು ರಾಜೀನಾಮೆ ನೀಡಲಿ, ಆಮೇಲೆ ಬೇರೆಯವರ ರಾಜೀನಾಮೆ ಕೇಳಲಿ. ಮೋದಿ ಅವರು ಮೊದಲು ಕುಮಾರಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡಲಿ. ನೈತಿಕತೆ, ಪ್ರಾಮಾಣಿಕತೆ ಭಾಷಣ ಮಾಡುವುದಾದರೆ, ಮೊದಲು ಅವರು ರಾಜೀನಾಮೆ ಕೊಟ್ಟು ಮಾತನಾಡಲಿ. ಕೇವಲ ಗೀಳಿಗಾಗಿ ಮಾತನಾಡುವುದಲ್ಲ. ಅವರು ಬೆಂಗಳೂರು ಮುಳುಗಿ ಹೋಯಿತು ಎಂದಿದ್ದರು, ಈಗ ಅವರು ಕೂತ ಮೇಲೆ ದೆಹಲಿ ಮುಳುಗಿತು, ಬಾಂಬೆ ಮುಳುಗಿಲ್ಲವೇ. ರಾಜ್ಯದಲ್ಲಿ ಏನೇ ಆದರೂ ಅದಕ್ಕೆ ಡಿ.ಕೆ. ಶಿವಕುಮಾರ್ ಕಾರಣವೇ? ಬೇರೆಯವರ ಮನೆಯಲ್ಲಿ ಏನಾದರೂ ಶಿವಕುಮಾರ್ ಕಾರಣ ಎಂದು ಹೇಳುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು. ಅವರನ್ನು ಪ್ರಮುಖ ನಾಯಕ ಎಂದು ಪರಿಗಣಿಸಿ, ಅವರ ಹೇಳಿಕೆ ಬಗ್ಗೆ ಚರ್ಚಿಸುವುದೇ ವ್ಯರ್ಥ” ಎಂದು ತಿರುಗೇಟು ನೀಡಿದರು.