ಜಾಗತಿಕ ಮಟ್ಟದ ಕೌಶಲಾಭಿವೃದ್ಧಿ ಕೇಂದ್ರಗಳ ಸ್ಥಾಪನೆಗೆ ಕೈಜೋಡಿಸಲು ಸಂತೋಷ್ ಲಾಡ್ ಮನವಿ

ಪ್ರಗತಿವಾಹಿನಿ ಸುದ್ದಿ: ಜಾಗತಿಕವಾಗಿ ವಿಜ್ಞಾನ, ತಂತ್ರಜ್ಞಾನವು ವೇಗವಾಗಿ ಬದಲಾಗುತ್ತಿದ್ದು ಅದಕ್ಕೆ ತಕ್ಕಂತೆ ತರಬೇತಿ, ಹೆಚ್ಚುವರಿ ಕೌಶಲ್ಯಗಳನ್ನು ಕಲಿಯುವುದು ಕಾಲದ ಅಗತ್ಯ. ಈ ನಿಟ್ಟಿನಲ್ಲಿ ಕೈಗಾರಿಕಾ ಕ್ಷೇತ್ರದ ಅಗತ್ಯಗಳಗೆ ತಕ್ಕಂತೆ ಮೈಸೂರು ಮತ್ತು ಧಾರವಾಡಗಳಲ್ಲಿ ಜಾಗತಿಕ ಮಟ್ಟದ ವೃತ್ತಿ ತರಬೇತಿ ಮತ್ತು ಕೌಶಲ್ಯ ಉನ್ನತೀಕರಣ, ಕಾರ್ಮಿಕರ ನೈಪುಣ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಎಂದು ಕಾರ್ಮಿಕ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ತಿಳಿಸಿದರು.
ಉದ್ದೇಶಿತ ತರಬೇತಿ ಕೇಂದ್ರಗಳ ಸ್ಥಾಪನೆ ಹಿನ್ನೆಲೆಯಲ್ಲಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ವಿಕಾಸಸೌಧದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತರಬೇತಿ ಕೇಂದ್ರಗಳ ಸ್ಥಾಪನೆಯ ಹಿಂದೆ ಕಟ್ಟಡ ಕಾರ್ಮಿಕರ ಮಕ್ಕಳು ಕಟ್ಟಡ ಕಾರ್ಮಿಕರಾಗಿಯೇ ಮುಂದುವರಿಯದಂತೆ, ಅವರನ್ನು ಕಾಲದ ಬೇಡಿಕೆಗೆ ತಕ್ಕಂತೆ ಸಜ್ಜುಗೊಳಿಸುವ ಉದ್ದೇಶವಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉನ್ನತೀಕರಿಸಿದ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಲಿದೆ. ಇಲ್ಲಿ 26 ರೀತಿಯ ಕೈಗಾರಿಕೆಗಳಿಗೆ ಬೇಕಾದ 60 ರೀತಿಯ ತರಬೇತಿಯನ್ನು ಒಂದೇ ಸೂರಿನಡಿ ಒದಗಿಸಲಾಗುವುದು. ಈ ಪ್ರಯತ್ನಕ್ಕೆ ಉದ್ಯಮಿಗಳು, ಕೈಗಾರಿಕೆಗಳ ಮುಖ್ಯಸ್ಥರು ಮತ್ತು ಕಾರ್ಮಿಕರ ಕಲ್ಯಾಣ ಬಯಸುವ ಎಲ್ಲರೂ ತಮ್ಮ ಅಭಿಪ್ರಾಯ, ಸಲಹೆ ನೀಡುವುದರ ಜೊತೆಗೆ ದೊಡ್ಡ ಮಟ್ಟದಲ್ಲಿ ಕಟ್ಟಲು ಮತ್ತು ವಿಸ್ತರಿಸಲು ಮುಂದೆ ಬರಬೇಕೆಂದು ಮನವಿ ಮಾಡಿದರು.
ಈ ಸಂಬಂಧ ಆಹ್ವಾನಿತರಾಗಿದ್ದ ವಿವಿಧ ಕೈಗಾರಿಕಾ ವಲಯಗಳ ಸ್ಥಳೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು ಹಾಗೂ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದು ಸರ್ಕಾರದ ಪ್ರಯತ್ನವನ್ನು ಶ್ಲಾಘಿಸಿದರಲ್ಲದೆ ಜಾಗತಿಕವಾಗಿ ವಿವಿಧ ಕ್ಷೇತ್ರಗಳಲ್ಲಿರುವ ಬೇಡಿಕೆ, ಕೌಶಲ್ಯದ ಕೊರತೆ ಮತ್ತು ತಾವು ನೀಡಬಹುದಾದ ಸಹಕಾರವನ್ನು ಸಭೆಗೆ ಮನವರಿಕೆ ಮಾಡಿಕೊಟ್ಟರು.
ಜರ್ಮನಿ, ಜಪಾನ್ ಹಲವು ದೇಶಗಳಲ್ಲಿ ವೃದ್ದರ ಸಂಖ್ಯೆ ಹೆಚ್ಚಾಗಿದ್ದು ದೊಡ್ಡ ಸಂಖ್ಯೆಯ ದಾದಿಯರ ಅಗತ್ಯವಿದೆ. ಹಾಗೆಯೇ, ಪೂರ್ಣ ಜ್ಞಾನವಿರುವ ಮಾನವ ಸಂಪನ್ಮೂಲ ಕೆಲಸಗಾರರು, ದತ್ತಾಂಶಗಳ ವಿಶ್ಲೇಷಣೆ, ಅಕೌಂಟ್ಸ್ ಮುಂತಾದ ಹೊಸ ಕಂಪನಿಗಳಿಗೆ ಬೇಕಾದ ಪ್ರಾಥಮಿಕ ಮತ್ತು ಅತ್ಯಗತ್ಯ ಕೆಲಸಗಾರರನ್ನು ಒದಗಿಸಲು ಮತ್ತು ಮೀನುಗಾರಿಕೆ, ಕಟ್ಟಡ ತಂತ್ರಜ್ಞಾನ, ಕಬ್ಬಿಣ ಮತ್ತು ಉಕ್ಕು ಮುಂತಾದ ಕ್ಷೇತ್ರಗಳ ಅಗತ್ಯಗಳನ್ನು ಪೂರೈಸಲು ಈ ಕೇಂದ್ರಗಳು ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಸಮಾರೋಪ ಭಾಷಣ ಮಾಡಿದ ಸಚಿವರು ಕೃಷಿ, ಪಶುಸಂಗೋಪನೆ, ಬಡಗಿತನ, ಕುಂಬಾರಿಕೆ ಮುಂತಾದ ಪಾರಂಪರಿಕ ಕೆಲಸಗಳನ್ನು ಸುಸ್ಥಿರವಾಗಿ ನಡೆಸಲು ಮತ್ತು ಅವರಲ್ಲಿ ಉದ್ಯಮೀಕರಣವನ್ನು ಉತ್ತೇಜಿಸಲು ನೆರವಾಗಬೇಕು. ಈ ತರಬೇತಿ ಕೇಂದ್ರಗಳು, ಕೇವಲ ಕೈಗಾರಿಕೆಗಳಿಗೇ ಬೇಕಾದ ಕೌಶಲ್ಯಯುತ ಮಾನವ ಸಂಪನ್ಮೂಲವನ್ನು ಒದಗಿಸಲು ಸೀಮಿತವಾಗದೆ, ವಲಸೆ ತಪ್ಪಿಸಲು ಸ್ಥಳೀಯವಾಗಿ ಗೃಹ ಕೈಗಾರಿಕೆಗಳು ಮತ್ತು ಮಹಿಳಾ ಸಬಲೀಕರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ತರಬೇತಿಯ ಪಠ್ಯಕ್ರಮವನು ರೂಪಿಸಲು ಎಲ್ಲ ಖಾಸಗಿ ವಲಯಗಳ ಕಂಪನಿಗಳು ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಸಂವಾದ ಕಾರ್ಯಾಗಾರದಲ್ಲಿ ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ರೋಹಿಣಿ ಸಿಂಧೂರಿ, ಕಾರ್ಮಿಕ ಆಯುಕ್ತರಾದ ಡಾ. ಗೋಪಾಲಕೃಷ್ಣ, ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳಾದ ಡಿ ಭಾರತಿ, ಅಪರ ಕಾರ್ಮಿಕ ಆಯುಕ್ತರಾದ ಡಾ ಜಿ ಮಂಜುನಾಥ, ಉಪ ಕಾರ್ಮಿಕ ಆಯುಕ್ತರಾದ ರವಿ ಕುಮಾರ್, ಜಂಟಿ ಕಾರ್ಯದರ್ಶಿಗಳಾದ ಸಂಗಪ್ಪ ಉಪಾಸೆ, ಉದ್ಯೋಗದಾತರ ಪ್ರತಿನಿಧಿಗಳು, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಮಂಡಳಿಯ ಸದಸ್ಯರು ಭಾಗವಹಿಸಿದ್ದರು.