Kannada NewsKarnataka News

*ಇಳಿವಯಸ್ಸಿನಲ್ಲಿ 3ನೇ ಪತ್ನಿ ಕೊಂದು ಲಗೇಜ್ ಎಂದು ಬಸ್ ಗೆ ಹಾಕಿ ಪರಾರಿಯಾಗಿದ್ದ ಪತಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಮೂರನೇ ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಶವವನ್ನು ಲಗೇಜ್ ಎಂದು ಬಸ್ ನಲ್ಲಿ ಕಳುಹಿಸಿ ಪರಾರಿಯಾಗಿದ್ದ ಆರೋಪಿ ಪತಿಯನ್ನು 75ರ ಇಳಿವಯಸ್ಸಿನಲ್ಲಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

23 ವರ್ಷಗಳ ಬಳಿಕ ಕೊಲೆ ಆರೋಪಿಯನ್ನು ರಾಯಚೂರಿನ ಮಾನ್ವಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು 75 ವರ್ಷದ ಹುಸೇನಪ್ಪ ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಸಹಾಯಕನಾಗಿದ್ದ ಹುಸೇನಪ್ಪ ಮೊದಲ ಪತ್ನಿ ಸಾವಿನ ಬಳಿಕ ಎರಡನೇ ಮದುವೆಯಾಗಿದ್ದ. ಆದರೆ ಆಕೆ ಹುಸೇನಪ್ಪ ಜೊತೆ ಜಗಳ ಮಾಡಿಕೊಂಡು ಮನೆಬಿಟ್ಟು ಹೋಗಿದ್ದಳು ಬಳಿಕ ತಾನು ಸರ್ಕಾರಿ ನೌಕರ ಎಂದು ಹೇಳಿಕೊಂಡು ಕೊಪ್ಪಳ ತಾಲೂಕಿನ ಇಂದಗಿ ನಿವಾಸಿ ರೇಣುಕಾ ಎಂಬುವವರನ್ನು ವಿವಾಹವಾಗಿದ್ದ. ಗಂಗಾವತಿಯ ಲಕ್ಷ್ಮೀ ಕ್ಯಾಂಪ್ ನಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ. ಆರಂಭದಲ್ಲಿ ಎಲ್ಲವೂ ಚನ್ನಾಗೇ ಇತ್ತು.

ಆದರೆ 2003 ರಲ್ಲಿ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿದ್ದ ಹುಸೇನಪ್ಪ ಮೃತದೇಹವನ್ನು ಮೂಟೆ ಕಟ್ಟಿ ಲಗೇಜ್ ಎಂದು ಕಂಪ್ಲಿ ಬಸ್ ನಲ್ಲಿ ಕಳುಹಿಸಿದ್ದ. ಬಳಿಕ ಪರಾರಿಯಾಗಿ ತಲೆಮರೆಸಿಕೊಂಡಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಹುಡುಕಾಟದಲ್ಲಿದ್ದರೂ ಸಿಕ್ಕಿರಲಿಲ್ಲ. ಕಳೆದ ಆರು ತಿಂಗಳ ಹಿಂದೆ ತನ್ನ ಸ್ವಗ್ರಾಮಕ್ಕೆ ಬಂದಿದ್ದ ಹುಸೇನಪ್ಪನ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದರು. ಆತನ ಜಾಡು ಹಿಡಿದ ಪೊಲೀಸರು ಇದೀಗ ಮಾನ್ವಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Home add -Advt


Related Articles

Back to top button