*ಸೇತುವೆ ಪಕ್ಕದಲ್ಲೇ ಭೂಕುಸಿತ: ರಸ್ತೆಯಲ್ಲೇ ನಿರ್ಮಾಣವಾದ ಬೃಹತ್ ಹೊಂಡ: ಗ್ರಾಮಸ್ಥರು ಕಂಗಾಲು*

ಪ್ರಗತಿವಾಹಿನಿ ಸುದ್ದಿ, ಜೋಯಿಡಾ: ಭಾರಿ ಮಳೆ ನಡುವೆ ಭೂಕುಸಿತ ಪ್ರಕರಣಗಳು ಹೆಚ್ಚುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಉಳವಿ ಮಾರ್ಗದ ಕೈಟಾದಲ್ಲಿ ಸೇತುವೆ ಬಳಿಯೇ ಭಾರಿ ಕುಸಿತ ಸಂಭವಿಸಿದ್ದು, ರಸ್ತೆಬಳಿ ಹೊಂಡ ನಿರ್ಮಾಣವಾಗಿದೆ.

ಜೋಯಿಡಾ ತಾಲೂಕಿನ ಕೇಂದ್ರ ದಿಂದ ಎಂಟು ಕಿ ಮೀ ದಲ್ಲಿರುವ, ಗುಂದ, ಉಳವಿ ಮಾರ್ಗದ ಕೈಟಾ ಎಂಬಲ್ಲಿ ಸೇತುವೆ ಪಕ್ಕದಲ್ಲಿ ರಸ್ತೆ ಬಳಿ ಭೂಕುಸಿತವಾಗಿದೆ, ಭಾರಿ ಮಳೆಗೆ ಘಟಾರದ ನೀರೆಲ್ಲ ರಸ್ತೆಗೆ ಬಂದು ಈ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಓದಾಡುವವರಿಗೆ ಆತಂಕ ಮನೆ ಮಾಡಿದೆ.
ಲೋಕೋಪಯೋಗಿ ಇಲಾಖೆಯ ರಸ್ತೆ ಇದಾಗಿದ್ದು, ಗುಂದ, ಉಳವಿ, ಸಾರಿಗೆ, ದಾಂಡೇಲಿ, ಶಿರಸಿ, ಬೈಲಹೊಂಗಲ, ಬೆಳಗಾವಿಯ ಬಸ್ ಗಳು ಇದೇ ಮಾರ್ಗದಲ್ಲಿ ಓಡಾಡುತ್ತವೆ. ಲೋಕೋಪಯೋಗಿ ಇಲಾಖೆಯ ಗಮನಕ್ಕೆ ಬಂದಿದ್ದು, ಅಗತ್ಯ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಳೆದ ವರ್ಷ ಕೂಡ ಇದೇ ರಸ್ತೆಯ ಅವುರ್ಲಿ ಎಂಬಲ್ಲಿ ಸೇತುವೆ ಕುಸಿದು ಆರು ತಿಂಗಳುಗಳ ಕಾಲ ವಾಹನ ಸಂಚಾರ ಬಂದ್ ಆಗಿ ಜನಸಾಮಾನ್ಯರು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದರು. ಆಗ ಬದಲಿ ಮಾರ್ಗವಾಗಿ ಜೋಯಿಡಾ ಕುಂಬಾರವಾಡಾ ಉಳವಿ ಮಾರ್ಗದಲ್ಲಿ ಗುಂದ ಪಂಚಾಯತಕ್ಕೆ ಸಂಪರ್ಕ ಕಲ್ಪಿಸಲಾಗಿತ್ತು. ಈಗ ಕುಸಿಯುವ ಹಂತದಲ್ಲಿರುವ ಕೈಟಾ ಸೇತುವೆಗೆ ಕೂಡಲೇ ಕಾಯಕಲ್ಪವನ್ನು ಮಾಡಲು ಲೋಕೋಪಯೋಗಿ ಇಲಾಖೆ ಮುಂದಾಗಲು, ಸಾರ್ವಜನಿಕರು ಒತ್ತಾಯಿಸಿದ್ದಾರೆ. ನಂದಿಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷರೂ ಈ ಬಗ್ಗೆ ಒತ್ತಾಯಿಸಿದ್ದಾರೆ.