
ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ದೆಹಲಿಗೆ ಭೇಟಿ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ದೆಹಲಿಗೆ ಹೋಗಿದ್ವಿ, ಬಂದ್ವಿ. ಅದರಲ್ಲಿ ಏನೂ ವಿಶೇಷತೆ ಇಲ್ಲ ಎಂದು ತಿಳಿಸಿದ್ದಾರೆ.
ಗೋಕಾಕ್ ನಲ್ಲಿ ಮಾತನಾಡಿದ ಸಚಿವರು, ಸೆಪ್ಟೆಂಬರ್ ನಲ್ಲಿ ರಾಜ್ಯದಲ್ಲಿ ರಾಜಕೀಯ ಕ್ರಾಂತಿಯಾಗಲಿದೆ ಎಂಬ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ, ಅವರೂ ಹೇಳಿದ್ದಾರೆ, ನಾವೂ ಹೇಳಿದ್ದೇವೆ, ಅಲ್ಲಿಗೆ ಅದು ಮುಗಿಯಿತು. ವರಿಷ್ಠರಿದ್ದಾರೆ, ಅವರು ನೋಡ್ತಾರೆ. ಕ್ರಾಂತಿ ಮಾಡೋದು ಬಿಡೋದು ವರಿಷ್ಠರ ಕೈಯಲ್ಲಿದೆ ಎಂದರು.
ಏನೇ ಮಾಡಿದರೂ ಸಹ ವರಿಷ್ಠರು ಮಾಡಬೇಕು. ನಾವು ಅದರಲ್ಲಿ ಒಂದು ಪಾರ್ಟ್ ಅಷ್ಟೆ ಎಂದರು. ರಾಜಣ್ಣ ಅವರು ಮುಂದಿನ ಕೆಪಿಸಿಸಿ ಅಧ್ಯಕ್ಷ ಸತೀಶ್ ಎಂದು ಹೇಳಿಕೆ ನೀಡಿರುವ ವಿಚಾರವಾಗಿ, ಅದು ಅವರ ವೈಯಕ್ತಿಕ ವಿಚಾರ, ಅವರು ಈಗಷ್ಟೆ ಅಲ್ಲ, ಹಲವು ಬಾರಿ ಹೇಳಿದ್ದಾರೆ. ನೋಡೋಣ ಎಂದರು.
ಈಗಿನ ಅಧ್ಯಕ್ಷರಿಗೆ ಸಚಿವ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡೂ ಇದೆ. ಹಾಗೆ ನಿಮಗೂ ಸಿಗುತ್ತಾ ಎಂದು ಕೇಳಿದಾಗ, ಅದರ ಪ್ರಶ್ನೆ ಈಗ ಉದ್ಭವಿಸಲ್ಲ, ಆದ ಮೇಲೆ ವಿಚಾರ ಮಾಡೋಣ ಎಂದು ಹೇಳಿದರು.