*ವಜ್ರಾ ಜಲಪಾತ ವೀಕ್ಷಣೆಗೆ ಹೊರಟಿದ್ದ ಯುವಕರ ಬೈಕ್ ಅಪಘಾತ: ಚಾಲಕ ಸಾವು*

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಪಾರವಾಡ ಗ್ರಾಮದ ಬಳಿಯ ವಜ್ರಾ ಜಲಪಾತ ವೀಕ್ಷಣೆಗೆ ತೆರಳುತ್ತಿದ್ದ ಯುವಕರ ಬೈಕ್ಗೆ ೪೦೭ ಗೂಡ್ಸ್ ವಾಹನ ಡಿಕ್ಕಿ ಹೆಡೆದ ಪರಿಣಾಮ ಬೈಕ್ ಚಾಲಕ ಮೃತಪಟ್ಟು ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ-ಚೋರ್ಲಾ ಹೆದ್ದಾರಿಯ ಅಮಟೆ ಕ್ರಾಸ್ ಬಳಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಹುಬ್ಬಳ್ಳಿ ತಾಲೂಕು ರೇವಡಿಹಾಳ ನಿವಾಸಿ ದರ್ಶನ ಮೌನೇಶ ಚವಾಣ (೨೩) ತಮ್ಮ ಸ್ನೇಹಿತ ರಾಘು ಕಲ್ಲಪ್ಪ ಶಿರಕೋಳ (೨೫) ಜೊತೆ ಭಾನುವಾರ ಜಲಪಾತ ವೀಕ್ಷಣೆಗೆಂದು ಹುಬ್ಬಳ್ಳಿಯಿಂದ ಬೈಕ್ನಲ್ಲಿ ಹೊರಟಿದ್ದರು.
ಜಲಪಾತ ತಲುಪಲು ೧೦ ಕಿಮೀ ಇರುವಾಗಲೇ ತಾಲೂಕಿನ ಅಮಟೆ ಕ್ರಾಸ್ ಬಳಿ ಎದುರಿನಿಂದ ಬಂದ ಗೂಡ್ಸ್ ವಾಹನಕ್ಕೆ ಇವರಿದ್ದ ಬೈಕ್ ಅಪ್ಪಳಿಸಿದ್ದರಿಂದ ದರ್ಶನ ಸ್ಥಳದಲ್ಲೇ ಮೃತಪಟ್ಟರು. ರಾಘು ತಲೆಗೆ ಪಟ್ಟಾಗಿದ್ದರಿಂದ ಅಂಬ್ಯುಲನ್ಸ್ ಮೂಲಕ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಖಾನಾಪುರ ಪೊಲೀಸರು ಭೇಟಿ ನೀಡಿದ್ದು, ಗೂಡ್ಸ್ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.