*ಧರ್ಮಸಂರಕ್ಷಣಾ ಯಾತ್ರೆ ಆಯೋಜಕನಿಂದಲೇ ಅಧರ್ಮದ ಕೆಲಸ: ಸೇವಾನಿರತೆಗೆ ಲೈಂಗಿಕ ಕಿರುಕುಳ*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳ ಹೆಸರು ಉಳಿಸಲು ಆಯೋಜಿಸಲಾಗಿದ್ದ ಧರ್ಮಸಂರಕ್ಷಣಾ ಯಾತ್ರೆ ಆಯೋಜಕನೇ ಧರ್ಮಸ್ಥಳ ಸ್ವಸಹಾಯ ಸಂಘದ ಸೇವಾನಿರತೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಶ್ರೀಕೋಟೆಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿಯ ನವೀನ್ ಚಂದ್ರ ಶೆಟ್ಟಿ, ಮಹಿಳೆಯನ್ನು ಮನೆಗೆ ಕರೆದು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಧರ್ಮಸ್ಥಳ ಹೆಸರು ಉಳಿಸಲು ನವೀನ್ ಶೆಟ್ಟಿ ಧರ್ಮಸಂರಕ್ಷಣಾ ಯಾತ್ರೆ ಆಯೋಜಿಸಿದ್ದರು. ಧರ್ಮಸಂರಕ್ಷಣಾ ಯಾತ್ರೆ ಬಗ್ಗೆ ಆಮಂತ್ರಣ ನೀಡುತ್ತಿದ್ದ ಸೇವಾ ನಿರತೆಗೆ ಕರೆ ಮಾಡಿ ಮಧ್ಯಾಹ್ನ ನೇರವಾಗಿ ಮನೆಗೆ ಬರುವಂತೆ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಸೇವಾನಿರತೆ ನವೀನ್ ಚಂದ್ರ ಶೆಟ್ಟಿ ಮನೆಗೆ ತೆರಳಿದ್ದರು. ಈ ವೇಳೆ ಸೇವಾನಿರತೆಗೆ ನವೀನ್ ಶೆಟ್ಟಿ ಬಲವಂತವಾಗಿ ಚುಂಬಿಸಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ರಟ್ಟಾಡಿ ಮಣಿಮಕ್ಕಿ ಮನೆಯಲ್ಲಿ ಈ ಕೃತ್ಯ ನಡೆಸಿದ್ದಾರೆ. ಆರೋಪಿ ನವೀನ್ ಶೆಟ್ತಿ ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ನೊಂದ ಮಹಿಳೆ ಅಮವಾಸ್ಯೆಬೈಲು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ಧರ್ಮಸಂರಕ್ಷಣಾ ಯಾತ್ರೆ ಆಯೋಜಕ ನವೀನ್ ಶೆಟ್ಟಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.