
ಪ್ರಗತಿವಾಹಿನಿ ಸುದ್ದಿ: ಹುಟ್ಟುಹಬ್ಬಕ್ಕೆ ಶುಭಕೋರುವುದಾಗಿ ಬಂದ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಚಾಕು ಇರಿದು ಪರಾರಿಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಇಲ್ಲಿನ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾರ್ತಿಕ್ ಎಂಬ ಪಕ್ಕದ ಮನೆಯ ಯುವಕನೇ ಯುವತಿಗೆ ಚಾಕು ಇರಿದಿದ್ದಾನೆ. ರಕ್ಷಿತಾ ಪೂಜಾರಿ (24) ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಯುವತಿ.
ರಕ್ಷಿತಾ ಹಾಗೂ ಕಾರ್ತಿಕ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಮದುವೆಗೆ ಮನೆಯಲ್ಲಿ ಒಪ್ಪುತ್ತಿರಲಿಲ್ಲ. ಕೆಲ ದಿಅಗಳ ಹಿಂದಷ್ಟೇ ರಕ್ಷಿತಾ ಮನೆಗೆ ಬಂದು ಮದುವೆಗೆ ಒಪ್ಪುವಂತೆ ಕಾರ್ತಿಕ್ ಮತ್ತೆ ಕೇಳಿದ್ದ. ಆದಾಗ್ಯೂ ಆಕೆಯ ಕುಟುಂಬದವರು ಒಪ್ಪಿರಲಿಲ್ಲ. ಮನೆಯಲ್ಲಿ ಆಕ್ಷೇಪಿಸುತ್ತಿದ್ದಾರೆ ಎಂಬ ಕಾರಣಕ್ಕೆ ರಕ್ಷಿತಾ, ಕಾರ್ತಿಕ್ ನಂಬರ್ ನ್ನು ಬ್ಲಾಕ್ ಮಾಡಿದ್ದಳು. ಇದರಿಂದ ಕಾರ್ತಿಕ್ ಕುಪಿತಗೊಂಡಿದ್ದ. ಇಂದು ರಕ್ಷಿತಾಳ ಹುಟ್ಟುಹಬ್ಬವಾಗಿತ್ತು. ಬೆಳಿಗ್ಗೆ ಆಕೆಗೆ ವಿಶ್ ಮಾಡಲೆಂದು ಮನೆಗೆ ಬಂದಿದ್ದಾನೆ. ಈ ವೇಳೆ ರಕ್ಷಿತಾ ಆತನ ವಿಶ್, ಗಿಫ್ಟ್ ನಿರಾಕರಿಸಿದ್ದಾಳೆ. ಇದರಿಂದ ಅವಮಾನಿತನಾದ ಕಾರ್ತಿಕ್ ಏಕಾಏಕಿ ರಕ್ಷಿತಾಳ ಕತ್ತಿಗೆ ಚಾಕು ಇರಿದಿದ್ದಾನೆ.ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಗಂಭೀರವಾಗಿ ಹಲ್ಲೆಗೊಳಗಾದ ರಕ್ಷಿತಾಳನ್ನು ಮಣಿಪಾಲ್ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿ ಸ್ಥಿತಿ ಗಂಭೀರವಾಗಿದೆ.