*ಸಹಕಾರಿ ಸಂಸ್ಥೆಗಳ ಏಳ್ಗೆಗೆ ಸರ್ಕಾರ ಬದ್ಧ: ಸಚಿವ ಸತೀಶ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಹಕಾರಿ ಸಂಸ್ಥೆಗಳ ಬೇಡಿಕೆಗೆ ಅನುಸಾರವಾಗಿ ನೀತಿ–ನಿಯಮ ರೂಪಿಸುತ್ತೇವೆ. ನಿಮ್ಮ ಏಳ್ಗೆಗೆ ಸರ್ಕಾರ ಬದ್ಧವಾಗಿದೆ ಎಂದು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಭರವಸೆ ನೀಡಿದರು.
ನಗರದ ಕೆ.ಎಲ್.ಇ. ಜಿರಗೆ ಭವನದಲ್ಲಿ ಭಾನುವಾರ 28 ರಂದು ಎಸ್ .ಎಸ್ . ಪಾಟೀಲ್ ವೇದಿಕೆಯ ಮೇಲೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವತಿಯಿಂದ ಆಯೋಜಿಸಲಾದ ಸೌಹಾರ್ದ ಸಹಕಾರಿ ಚಳುವಳಿಯ ರಜತ ಮಹೋತ್ಸವದ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ನಡೆಯುವ ಕಾರ್ಯಕ್ರಮದಲ್ಲಿ ನಿಮ್ಮ ಬೇಕು–ಬೇಡಿಕೆಗಳ ಬಗ್ಗೆ ಎಲ್ಲ ಚರ್ಚಿಸಿದ ಬಳಿಕ, ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನಿಮ್ಮನ್ನು ಭೇಟಿ ಮಾಡಿಸಿ, ಬೇಡಿಕೆ ಈಡೇರಿಸಲು ಪ್ರಯತ್ನಿಸುವೆ ಎಂದರು.
ಗ್ರಾಮೀಣ ಅಭಿವೃದ್ದಿಗೆ ಪೂರಕವಾಗಿ ಸಹಕಾರ ಸಂಘಗಳು ಬಹು ಸೇವಾ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ಜನರಲ್ಲಿ ಅತಿ ವಿಶ್ವಾಸವನ್ನು ಹೆಚ್ಚಿಸಿವೆ . ಇಂದು ಸಹಕಾರಿ ಕ್ಷೇತ್ರಕ್ಕೆ ಮಾನ್ಯತೆ ದೊರೆತಿದ್ದು, ಕೃಷಿ ಕ್ಷೇತ್ರದ ಬಲವರ್ಧನೆ ಮತ್ತು ರೈತರ ಅಭಿವೃದ್ಧಿಯತ್ತ ವಿಶೇಷ ಗಮನಹರಿಸಲಾಗುತ್ತಿದೆ. ವಿಶೇಷವಾಗಿ ನ್ಯಾಷನಲ್ ಬ್ಯಾಂಕ್ ಗಳಲ್ಲಿ ಜನರಿಗೆ ಹಣ ಪಡೆಯಲು ಸಾಕಷ್ಟು ಕಷ್ಟ ಆಗುತ್ತಿದ್ದು, ನಮ್ಮಲ್ಲಿರುವ ಸಹಕಾರಿ ಸಂಘಗಳು ಮನೆ ಮನೆಗೆ ಹಣ ತಲುಪಿಸುವ ಕಾರ್ಯ ಮಾಡುತ್ತಿವೆ. ಇಂತಹ ಸಹಕಾರಿ ಸಂಘಗಳು ಇನ್ನು ಬಹಳಷ್ಟು ಬೆಳೆಯಲಿ ಎಂದರು.
ಲಾಭದತ್ತ ಸಹಕಾರಿಗಳು: ದೇಶದ ಆರ್ಥಿಕತೆಗೆ ಸಹಕಾರ ಕ್ಷೇತ್ರದ ಕೊಡುಗೆ ಎಂಬುದು ಅತ್ಯಮುಲ್ಯವಾಗಿದೆ. ಸಹಕಾರ ಸಂಸ್ಥೆಗಳು ಎಲ್ಲ ವಲಯಗಳನ್ನು ವ್ಯಾಪಿಸಿದ್ದು ಗ್ರಾಮೀಣ ಅಭಿವೃದ್ದಿಗೆ ಪೂರಕವಾಗಿ ಸಹಕಾರ ಸಂಘಗಳು ಬಹು ಸೇವಾ ಕೇಂದ್ರಗಳಾಗಿ ಮಾರ್ಪಟ್ಟಿವೆ. ಸದ್ಯ ಈ ಸಹಕಾರಿ ಸಂಘಗಳು ಸಾಕಷ್ಟು ಲಾಭದತ್ತ ಮುನ್ನಡೆಯುತ್ತಿದ್ದು, ನಮ್ಮ ಜಿಲ್ಲೆಯಲ್ಲಿ ಇನ್ನಷ್ಟು ಸಹಕಾರಿಗಳು ಹೆಚ್ಚಲಿ ಎಂದರು.
ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಳರ್ ಅವರು ಮಾತನಾಡಿ, ಸಹಕಾರಿ ರಂಗದಲ್ಲಿ ಸೇವೆ ಮಾಡುವುದು ದೇವರ ಸೇವೆ ಮಾಡಿದಷ್ಟು ಸಮಾನ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಆರ್ಥಿಕತೆಯನ್ನು ಸುಧಾರಿಸಲು ಸಹಕಾರಿ ಕ್ಷೇತ್ರವು ಸಹಾಯಕವಾಗಿದೆ. ಸಹಕಾರಿ ಚಳುವಳಿ ಮತ್ತು ಸಹಕಾರಿ ಕ್ಷೇತ್ರ ಅಭಿವೃದ್ಧಿಯನ್ನು ಸಾಧಿಸಲಿ, ಬಡವರ ಆರ್ಥಿಕ ಏಳಿಗೆಗಾಗಿ ಸಂಯುಕ್ತ ಸಹಕಾರಿ ಕ್ಷೇತ್ರ ಶ್ರಮಿಸುತ್ತಿದೆ. ಸಾಕಷ್ಟು ಬಡವರು, ಸೈನಿಕರು ವೇತನದ ಹಣವನ್ನು ಬ್ಯಾಂಕ್ ನಲ್ಲಿ ಜಮಾ ಮಾಡಿರುತ್ತಾರೆ, ಅಂತಹ ಬಡ ಕುಟುಂಬಗಳಿಗೆ ಅನ್ಯಾಯ ಆಗದಂತೆ ನೋಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿ ಎಂದರು.
ಕೆ.ಎಲ್.ಇ. ಸಂಸ್ಥೆಕಾರ್ಯಾಧ್ಯಕ್ಷರಾದ ಪ್ರಭಾಕರ ಕೋರೆ ಅವರು ಮಾತನಾಡಿ, 120 ವರ್ಷಗಳ ಹಿಂದೆ ಸಹಕಾರ ರಂಗ ಆರಂಭವಾಯಿತು. ಈಗಲೂ ಸಹಕಾರ ಚಳವಳಿ ಜೀವಂತವಿರಲು ಅನೇಕರ ಶ್ರಮವಿದೆ. ಆದರೆ, ಸಹಕಾರಿ ಸಂಸ್ಥೆಗಳ ಸರ್ಕಾರದ ಸಂಪೂರ್ಣವಾಗಿ ನಿಯಂತ್ರಣ ಸಾಧಿಸುವುದು ಬೇಡ ಎಂದು ಹೇಳಿದರು.
ಶಾಸಕ ಲಕ್ಷ್ಮಣ ಸವದಿ ಅವರು ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಬಡವರನ್ನು ಆರ್ಥಿಕವಾಗಿ ಬೆಳೆಸುವ ಕಾರ್ಯವಾಗಬೇಕಿದೆ. ಅವರ ಅಭಿವೃದ್ಧಿಗಾಗಿ ಸಹಕಾರ ಕ್ಷೇತ್ರದ ವ್ಯಾಪ್ತಿಯಲ್ಲಿ ನಾವೆಲ್ಲರೂ ಶ್ರಮಿಸೋಣ. 25 ವರ್ಷಗಳ ಸಹಕಾರಿ ಕ್ಷೇತ್ರದ ಸಾಧನೆಯನ್ನು ಮೆಲಕು ಹಾಕಿ ಮುಂದೆ ಸಾಗಬೇಕಿದೆ. ಮಾಜಿ ಸಹಕಾರಿ ಸಚಿವರಾದ ಎಸ್. ಎಸ್ . ಪಾಟೀಲ್ ಅವರಿಗೆ ಗೌರವ ಸಲ್ಲಿಸಿದಾಗ ಸಂಯುಕ್ತ ಸಹಕಾರಿ ಕ್ಷೇತ್ರದ ಗೌರವ ಹೆಚ್ಚಾಗಲಿದೆ. ಅವರ ಕೆಲಸ , ಆಚಾರಗಳು ನಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು. ಸಹಕಾರಿ ಕ್ಷೇತ್ರದ ಉಳಿಸಿ, ಬೆಳೆಸಲು ನಾವೆಲ್ಲರೂ ನಿರಂತರ ಕೆಲಸ ಮಾಡೋಣ. ಶೇಕಡಾ 90% ಒಳ್ಳೆಯ ಸೌಹಾರ್ದ ಸಂಯುಕ್ತ ಸಹಕಾರಿ ಬ್ಯಾಂಕುಗಳು ಇವೆ ಎಂದರು.
ಈ ವೇಳೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವತಿಯಿಂದ ಹಮ್ಮಿಕೊಳ್ಳಲಾದ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು.
ಧ್ವಜಾರೋಹಣವನ್ನು ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಳರ್ ಅವರು ನೇರವೆರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ. ನಂಜನಗೌಡ ವಹಿಸಿದರು. ಮಾಜಿ ವಿಧಾನ ಪರಿಷತ್ ಸದಸ್ಯರು ಮಹಾಂತೇಶ ಕವಟಗಿಮಠ , ಮುಖ್ಯ ಅತಿಥಿಗಳಾಗಿ ಸಂಸದರಾದ ಜಗದೀಶ ಶೆಟ್ಟರ್ ಆಗಮಿಸಿದ್ದರು. ಶಾಸಕ ಆಸಿಫ್ (ರಾಜು) ಸೇಠ, ಮಾಜಿ ಸಹಕಾರಿ ಸಚಿವರಾದ ಎಸ್.ಎಸ್ ಪಾಟೀಲ, ನಿರ್ದೇಶಕರಾದ ಜಗದೀಶ ಕವಟಗಿಮಠ, ಪ್ರಾಂತಿಯ ವ್ಯವಸ್ಥಾಪಕರಾದ ಬಸವರಾಜ ಹೊಂಗಲ, ಪ್ರಥಮ ಅಧ್ಯಕ್ಷರಾದ ಮನೋಹರ ಮಸ್ಕಿ, ಎಸ್ ಆರ್. ಸತೀಶ್ಚಂದ್ರ , ಹೆಚ್ ವಿ. ರಾಜೀವ್ , ಯು. ಹೆಚ್ ರಾಮಪ್ಪ , ಸಿ ಎನ್. ಪರಶಿವಮೂರ್ತಿ , ಅನೂಪ ದೇಶಪಾಂಡೆ, ವಿಶ್ವನಾಥ ಚ. ಹಿರೇಮಠ, ಗುರುನಾಥ ಜ್ಯಾಂತಿಕರ, ಬಿ. ಹೆಚ್ . ಕೃಷ್ಣಾರೆಡ್ಡಿ, ಸಚಿನ್ ಪಾಟೀಲ್. ಎ. ಆರ್. ಪ್ರಸನ್ನಕುಮಾರ , ಶರಣಗೌಡ ಜಿ. ಪಾಟೀಲ್ , ಡಿಆರ್ ಸಿಎಸ್ ರವೀಂದ್ರ ಪಾಟೀಲ್ ಹಾಗೂ ಗಣ್ಯರು ಇತರರು ಇದ್ದರು.



