Kannada NewsKarnataka NewsLatest

*ಇವತ್ತಿನ‌ ಸಮಾಜಕ್ಕೆ ಕತ್ತರಿಗಳಲ್ಲ, ಸೂಜಿಯ ಅಗತ್ಯವಿದೆ: ಕೆ.ವಿ.ಪ್ರಭಾಕರ್ ಅಭಿಮತ* 

ಪ್ರಗತಿವಾಹಿನಿ ಸುದ್ದಿ: ಇಂದು ಸಾಮಾಜಿಕ ಬೆಸುಗೆಯನ್ನು ಕತ್ತರಿಸುವ ಕತ್ತರಿಗಳು ಜನ‌ಸಮುದಾಯದ ಪ್ರಜ್ಞೆಯನ್ನು ರೂಪಿಸುತ್ತಿವೆ. ಇಂಥಾ ಹೊತ್ತಲ್ಲಿ ಸಮಾಜವನ್ನು ಪರಸ್ಪರ ಹೊಲಿಯುವ ಸೂಜಿಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ‌ ಇಲಾಖೆ, ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವ ವಿದ್ಯಾನಿಲಯ ಮತ್ತು ಬೆಂಗಳೂರು ವಿಶ್ವ ವಿದ್ಯಾನಿಲಯ ಆಯೋಜಿಸಿದ್ದ “ಮಾಧ್ಯಮ ಹಬ್ಬ-2026” ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಅರಳುವ ಹೂವಿನ ಒಳಗೆ ಮಕರಂದ ಬೆರೆತಿರುವ ಹಾಗೆ ಅರಳುವ ಪತ್ರಕರ್ತ, ಪತ್ರಕರ್ತೆಯ ಒಳಗೆ ಸಾಮಾಜಿಕ ಪ್ರಜ್ಞೆ ಮತ್ತು ನೈತಿಕ ಪ್ರಜ್ಞೆ ಬೆರೆತಿರಬೇಕು ಎಂದರು. 

ಜನ ಸಮುದಾಯದ ಪ್ರಜ್ಞೆಯನ್ನು ರೂಪಿಸುವುದು ಪತ್ರಕರ್ತರಾದವರ ಹೊಣೆ. ಜನ‌ ಸಮುದಾಯದ, ಸಮಾಜದ ಪ್ರಜ್ಞೆಯನ್ನು ರೂಪಿಸುವ ನಿಮ್ಮ‌ ಪ್ರಜ್ಞೆಯನ್ನು ಯಾರು ರೂಪಿಸುತ್ತಿದ್ದಾರೆ, ಯಾವುದು ರೂಪಿಸುತ್ತಿದೆ ಎನ್ನುವ ಸ್ಪಷ್ಟ ಎಚ್ಚರ ಇರಬೇಕಾಗುತ್ತದೆ. 

Home add -Advt

ಈ ಎಚ್ಚರ ಇದ್ದಾಗ ತಾನು ಬರೆದ ಪ್ರತೀ ವರದಿ, ತಾನು ತೋರಿಸಿದ ಪ್ರತೀ ಸುದ್ಧಿ, ಕ್ಯಾಮರಾ ಮುಂದೆ ತಾನು ಆಡಿದ ಪ್ರತೀ ಮಾತಿಗೂ  ಉತ್ತರದಾಯಿತ್ವ ಹೊಂದಿರುವ ಹೊಣೆಗಾರಿ ಪತ್ರಕರ್ತರು ರೂಪುಗೊಳ್ಳುತ್ತಾರೆ. 

ಈ ಸಾಮಾಜಿಕ ಎಚ್ಚರ ಬರುವುದು ನಮ್ಮ ನೋಟದಿಂದ. ಸಮಾಜವನ್ನು ನೋಡುವ ಕಣ್ಣುಗಳಿಂದ. ಯಾರ ಕಣ್ಣುಗಳಿಂದ ಹಾಗೂ ಯಾವ ಕಣ್ಣುಗಳಿಂದ ನಾವು ನೋಡುತ್ತಿದ್ದೇವೆ ಎನ್ನುವುದರ ಮೇಲೆ ನಮ್ಮ ನೋಟ, ನಮ್ಮ ಗ್ರಹಿಕೆ ರೂಪುಗೊಳ್ಳುತ್ತದೆ ಎಂದು ವಿವರಿಸಿದರು. 

ಹುಟ್ಟಿದ ಮಗು ಮಾತಿಗೆ ಮೊದಲು ನೋಡಿ ಕಲಿಯುತ್ತದೆ. ನೋಟದ ಮೂಲಕವೇ ತನ್ನ ಸುತ್ತಲನ್ನು ಗ್ರಹಿಸುತ್ತದೆ. ಸಮಾಜದ ಬಗ್ಗೆ ಸ್ಪಷ್ಟ ನೋಟ-ಗ್ರಹಿಕೆ ಇದ್ದಾಗ ಪರಿಣಾಮಕಾರಿ ಪತ್ರಕರ್ತ ಹುಟ್ಟುತ್ತಾನೆ. 

ಪತ್ರಕರ್ತರಾಗುವವರು ಪೂರ್ವಗ್ರಹ ಮುಕ್ತ ಮಗುವಿನ ಮನಸ್ಸಿನಿಂದ ಸಾಮಾಜಿಕ ವ್ಯವಸ್ಥೆಯನ್ನು, ಸಾಮಾಜಿಕ ತಾರತಮ್ಯಗಳನ್ನು “ಇರುವುದನ್ನು ಇರುವ ಹಾಗೆ ಗಮನಿಸಬೇಕು”. ಹೀಗಾದಾಗ ಮಾತ್ರ ಸಾಮಾಜಿಕ ಸಮಸ್ಯೆಗಳು ಮತ್ತು ಈ ಸಮಸ್ಯೆಗಳಿಗೆ ಕಾರಣವಾದ ಸಂಗತಿಗಳ ಬಗ್ಗೆ ಸ್ಪಷ್ಟ ಗ್ರಹಿಕೆ ಬರುತ್ತದೆ. ಈ ಸ್ಪಷ್ಟತೆಯೇ ಪರಿಣಾಮಕಾರಿ ಪತ್ರಕರ್ತನನ್ನು ರೂಪಿಸುತ್ತದೆ ಎಂದು ವಿವರಿಸಿದರು. 

ವೇದಿಕೆ ಮೇಲಿರುವ ದಿನೇಶ್‌ ಅಮೀನ್ ಮಟ್ಟು ಅವರು ಸೇರಿದಂತೆ ವಡ್ಡರ್ಸೆ ರಘುರಾಮ್ ಶೆಟ್ಟರು, ಪಿ.ಲಂಕೇಶ್, ಖಾದ್ರಿ ಶಾಮಣ್ಣ, ವೈಎನ್ ಕೆ, ಮೊಹರೆ ಹನುಮಂತರಾಯರು, ಡಿವಿಜಿ, ಟಿಎಸ್ ಆರ್ ರೀತಿಯ ಹಲವು ಹಿರಿಯರು ಸೂಜಿಗಳಾಗಿ, ದರ್ಜಿಗಳಾಗಿ, ನೇಕಾರರಾಗಿ ಪತ್ರಿಕಾ ವೃತ್ತಿಯ ಪ್ರಜ್ಞೆಯನ್ನು ರೂಪಿಸುವುದರ ಜೊತೆಗೆ ಸಾಮಾಜಿಕ‌ ಪ್ರಜ್ಞೆಯನ್ನೂ ರೂಪಿಸಿದ್ದಾರೆ. ಸಮಾಜವನ್ನು ಬೆಸೆಯುವ ಬೆಸುಗೆಗಳಾಗಿದ್ದಾರೆ ಎಂದು ಎಲ್ಲರಿಗೂ ಧನ್ಯತೆ ಅರ್ಪಿಸಿದರು. 

ಕೇವಲ ಕಾರ್ಯಾಗಾರದಲ್ಲಿ ಭಾಗವಹಿಸುವುದರಿಂದ ಪತ್ರಿಕೋದ್ಯಮದ‌ ಪಟ್ಟುಗಳನ್ನು ಕಲಿಯಲು ಸಾಧ್ಯವಿಲ್ಲ ಎಂಬುದರ ಬಗ್ಗೆಯೂ ವಿದ್ಯಾರ್ಥಿಗಳು ಸ್ಪಷ್ಡವಾಗಿ ತಿಳಿಯಬೇಕಿದೆ. ಓದು, ಸಂಘಟನೆ ಹಾಗೂ ಸ್ವತಂತ್ರ ಚಿಂತನೆಯಿಂದ ಮಾತ್ರ ಒಳನೋಟಗಳನ್ನು ಪಡೆಯಬಹುದು.‌ ಒಳನೋಟವೇ ಇಲ್ಲದವರಿಗೆ ಪತ್ರಿಕೋದ್ಯಮ ಕೈಹಿಡಿಯದು. ಹಾಗಾಗಿ ಈ ಒಳನೋಟಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ತಮ್ಮ ಒಳಗಣ್ಣುಗಳನ್ನು ತೆರೆದು ತಯಾರಿ ನಡೆಸಿಕೊಳ್ಳಬೇಕಿದೆ. ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್ ಕೂಡ ಪತ್ರಕರ್ತರಾಗಿದ್ದವರು. ಇವರೆಲ್ಲಾ ಪತ್ರಕರ್ತರಾಗಿದ್ದಾಗ ಪತ್ರಿಕೋದ್ಯಮಕ್ಕೆ ಹಣದ ಬಡತನವಿತ್ತು. ಸತ್ಯಕ್ಕೆ ಬಡತನ ಇರಲಿಲ್ಲ. ಈಗ ಹಣದ ಬಡತನದಿಂದ ಹೊರಗೆ ಬಂದಿರುವ ಪತ್ರಿಕೋದ್ಯಮ ಸತ್ಯದ ಬಡತನಕ್ಕೆ ಜಾರಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು. 

ಸತ್ಯಕ್ಕೆ ಹಲವು‌ ಮುಖಗಳು ಇರುತ್ತವೆ. ಆ ಎಲ್ಲ‌ ಮುಖಗಳನ್ನು ನಿರ್ಭಿಡೆಯಾಗಿ ಅನಾವರಣಗೊಳಿಸಲು ಎಲ್ಲ ಜಾತಿ, ಮತ, ಧರ್ಮ, ಆಚಾರ, ವಿಚಾರಗಳನ್ನು ಹೊಂದಿರುವವರು ಮಾಧ್ಯಮ ಕ್ಷೇತ್ರದಲ್ಲಿ ಇದ್ದಷ್ಟು ಮಾಧ್ಯಮ ಕ್ಷೇತ್ರ ಸದೃಢಗೊಳ್ಳುತ್ತದೆ. 

ಸ್ವಾತಂತ್ರ್ಯ ಹೋರಾಟದಲ್ಲಿ “ಒಗ್ಗಟ್ಟು” ದೇಶದ ಮೌಲ್ಯವಾಗಿತ್ತು. ಸ್ವಾತಂತ್ರ್ಯಾ ನಂತರ “ವಿವಿಧತೆಯಲ್ಲಿ ಏಕತೆ” ದೇಶದ ಮೌಲ್ಯವಾಗಿತ್ತು. ಭಾರತವನ್ನು ರೂಪಿಸಿದ ಈ ಎರಡೂ ಮೌಲ್ಯಗಳನ್ನೂ ಹಾಳುಗೆಡವುತ್ತಿರುವ ಈ ಹೊತ್ತಲ್ಲಿ “ಬಹುತ್ವ” ನಮ್ಮ ನೆಲದ ಮಂತ್ರವಾಗಿದೆ, ಮೌಲ್ಯವಾಗಿದೆ. ಇದು ಕಾಪಾಡುವ ಹೊಣೆಗಾರಿಕೆ ಹಾಲಿ ಮತ್ತು ಭಾವಿ ಪತ್ರಕರ್ತರ ಮೇಲಿದೆ ಎಂದರು. 

ಮಾಧ್ಯಮಗಳಲ್ಲಿ ಆಯಾ ಕಟ್ಟಿನ ಹುದ್ದೆಯಲ್ಲಿರುವವರು ಒಂದೇ ವರ್ಗಕ್ಕೆ ಸೇರಿದರೆ, ಬಹುತ್ವವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ. ಇಂದು ಮೊಬೈಲ್ ನಲ್ಲಿ ಹರಿದಾಡುವ ಲಕ್ಷಾಂತರ ಕಟೆಂಟ್ ಗಳು ಬಹುತ್ವದ ನೆಲೆಯಲ್ಲಿಯೇ ಸೃಷ್ಟಿಯಾಗಿವೆ.  ಮಾಹಿತಿ ಸಾಗರ ಪತ್ರಿಕೋದ್ಯಮಕ್ಕೆ ಬೆದರಿಕೆಯೆಂದು ಭಾವಿಸಬೇಕಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ  ಇಲ್ಲೊಂದು ಸಂಗತಿಯನ್ನು ಮಾಧ್ಯಮ ಕ್ಷೇತ್ರ ಸ್ಷಷ್ಡವಾಗಿ ಅಳವಡಿಸಿಕೊಳ್ಳಬೇಕಿದೆ. ಅದೇನೆಂದರೆ ಒಂದು ಸಮುದಾಯ, ಒಂದು ಭಾಷೆ, ಒಂದು ಜಾತಿಯ ದನಿಗಳನ್ನಷ್ಟೆ ಕೇಳುತ್ತಿದ್ದ ಕಾಲಘಟ್ಟದಲ್ಲಿ‌ ಕಟೆಂಟ್ ಸುರಿಮಳೆಯಲ್ಲಿ ನಾನಾ ಮಣ್ಣಿಗೆ ಸೇರಿದ ವಿಭಿನ್ನ ದನಿಗಳಿವೆ. 

ಈ‌ ಎಲ್ಲಾ ದನಿಗಳಿಂದ ಡಿಜಿಟಲ್ ಮಾಧ್ಯಮ ವರ್ಣಮಯವಾಗಿದೆ ಮತ್ತು ವಿಭಿನ್ನ ದನಿಗಳ‌ ಕಾರಣಕ್ಕೆ ಜನರನ್ನು ಹಿಡಿದಿಡುತ್ತಿದೆ ಎಂದರು. 

ಪತ್ರಿಕೆಗಳಲ್ಲಿ ಮೊದಲೆಲ್ಲ ಪ್ರೂಫ್ ರೀಡರ್ ಇರುತ್ತಿದ್ದರು. ಕ್ರಮೇಣ  ಆ ಪರಂಪರೆ  ಇಲ್ಲವಾಯಿತು. ವಿಷಯ ತಪ್ಪಿಲ್ಲದ ಹಾಗೆ  ಅಚ್ಚಿಗೆ ಹೋಗಲು ಪ್ರೂಪ್ ರೀಡರ್ ಹೇಗೆ ಮುಖ್ಯವಾಗುತ್ತಿದ್ದರೋ ಪ್ರಸ್ತುತ ಎಲ್ಲ ಬಗೆಯ ಮಾಧ್ಯಮಗಳಿಗೂ ಬೇಕಿರುವುದು ಫ್ಯಾಕ್ಟ್ ಚೆಕರ್ಸ್. 

ಸುಳ್ಳುಗಳ‌ ನಡುವೆ ಸತ್ಯವನ್ನು, ನೈಜ‌ ಸುದ್ದಿಯನ್ನು ಹೆಕ್ಕಿ, ಜನರ ಮುಂದೆ ಪರಿಣಾಮಕಾರಿಯಾಗಿ ಇಡಬಲ್ಲವರು ಮಾತ್ರ ಪರಿಣಾಮಕಾರಿ ಪತ್ರಕರ್ತರಾಗಿ ಮಂಚೂಣಿಗೆ ಬರಲು ಸಾಧ್ಯವಿದೆ. 

ಸಾವಿರ ಸುಳ್ಳಿನ ಕಟೆಂಟ್ ಗಳ ನಡುವೆ ಸತ್ಯ ಹೇಳುವ ಕಟೆಂಟ್ ಗಳಿಗೆ ಆರಂಭದಲ್ಲಿ ಹಿನ್ನಡೆಯಾದರೂ ಅದು ಗೆಲ್ಲುತ್ತದೆ. ಆ ಭರವಸೆಯಲ್ಲಿ ಪತ್ರಕರ್ತರು ಸತ್ಯವನ್ನು ಹುಡುಕಬೇಕಿದೆ. ಈ ಸತ್ಯವನ್ನು ಹುಡುಕುವ ಕಣ್ಣುಗಳನ್ನು, ನೋಟವನ್ನು, ಗ್ರಹಿಕೆಯನ್ನು ಕೊಡುವ ಮೂಲಕ “ಸಾಮಾಜಿಕ ಪ್ರಜ್ಞೆ-ನೈತಿಕ ಪ್ರಜ್ಞೆ ಬೆರೆತ ಪತ್ರಕರ್ತರು ರೂಪುಗೊಳ್ಳಲು ಈ ಕಾರ್ಯಾಗಾರ ನೆರವಾಗಲಿ ಎಂದು ಆಶಿಸಿದರು. 

ಹಿರಿಯ ಸಮಾಜವಾದಿ ಚಿಂತಕರೂ, ಪತ್ರಕರ್ತರೂ ಆದ ದಿನೇಶ್ ಅಮೀನ್ ಮಟ್ಟು ಅವರು ಮಾತನಾಡಿ, ” ಬರೆಯುವುದಕ್ಕಿಂತ ಹೆಚ್ಚಾಗಿ ಓದಬೇಕು.  ಪತ್ರಕರ್ತರಾಗುವವರಿಗೆ ಓದಿನ‌ ಹಸಿವು ಮತ್ತು ಸಾಮಾಜಿಕ ಜವಾಬ್ದಾರಿ ಇರಬೇಕು. ಸಾಮಾಜಿಕ ಜವಾಬ್ದಾರಿ ಇಲ್ಲದ ಯಾವುದೇ ವೃತ್ತಿ ಸಾಮಾಜಿಕ ಪಾಪ. ಪಾತಕ, ಮೂಡನಂಬಿಕೆಗಳನ್ನು ವಿಜ್ರಂಭಿಸುವವರು ಒಳ್ಳೆ ಪತ್ರಕರ್ತ ಇರಲಿ, ಒಬ್ಬ ಜವಾಬ್ದಾರಿಯುತ ನಾಗರಿಕ ಕೂಡ ಆಗಿರಲು ಸಾಧ್ಯವಿಲ್ಲ. ಅಜ್ಞಾನ, ಅಸೂಕ್ಷ್ಮ ಆಗಿರುವವರು ಪತ್ರಕರ್ತ ಎನ್ನಿಸಲು ಸಾಧ್ಯವೇ ಇಲ್ಲ ಎಂದರು. 

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಮಾಧ್ಯಮ‌ ಅಕಾಡೆಮಿ‌ ಅಧ್ಯಕ್ಷೆ ಆಯೆಷಾ ಖಾನುಂ, ಕುಲಪತಿ ಪ್ರೊ.ರಮೇಶ್ ಬಿ, ಕುಲಸಚಿವ ನೀವೀನ್ ಜೋಸೆಫ್, ವಾರ್ತಾ ಇಲಾಖೆ ಉಪನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Related Articles

Back to top button