
ಪ್ರಗತಿವಾಹಿನಿ ಸುದ್ದಿ: ತಮ್ಮನೊಬ್ಬ ಅಣ್ಣನ ಮೇಲಿನ ಕೋಪಕ್ಕೆ ಆತ ಸಾಕಿದ್ದ ನಾಯಿಯನ್ನು ಗುಂಡಿಟ್ಟು ಕೊಂದಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಹೋದರ ವೆಂಕಟೇಶ್ ಮೇಲೆ ಇದ್ದ ಕೋಪಕ್ಕೆ ತಮ್ಮ ನಾರಾಯಣಸ್ವಾಮಿ ಈ ಕೃತ್ಯ ಎಸಗಿದ್ದು, ಆಸ್ತಿ ವಿಚಾರವಾಗಿ ಸಹೋದರರ ನಡುವೆ ಹಲವು ದಿನಗಳಿಂದ ಜಗಳವಾಗಿತ್ತು. ಈ ನಡುವೆ ತಾನು ಹೂಕೋಸು ಬೆಳೆದಿದ್ದ ಜಮೀನಿನಲ್ಲಿ ವೆಂಕಟೇಶ್ ಸಾಕಿದ್ದ ನಾಯಿ ಯಾವಾಗಲೂ ಸುತ್ತಾಡುತ್ತೆ ಎಂದು ಆರೋಪಿಸಿ ಅಣ್ಣನ ಮನೆ ಬಳಿ ಬಂದ ನಾರಾಯಣಸ್ವಾಮಿ ಬಂದೂಕಿನಿಂದ ನಾಯಿಗೆ ಶೂಟ್ ಮಾಡಿದ್ದಾನೆ.
ಇವರಿಬ್ಬರೂ ಮಲತಾಯಿ ಮಕ್ಕಳಾಗಿದ್ದು, ಇಬ್ಬರ ನಡುವೆ ಹಳೆಯ ದ್ವೇಷವಿತ್ತು. ನಾರಾಯಣಸ್ವಾಮಿ ಯಾವಾಗಲೂ ಅಣ್ಣ ವೆಂಕಟೇಶ್ ಕುಟುಂಬವನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನಂತೆ. ಬೇಕಂತಲೇ ರಸ್ತೆಯಲ್ಲಿ ಹೋಗ್ತಿದ್ದ ನಾಯಿಗೆ ನಾರಾಯಣಸ್ವಾಮಿ ಕಲ್ಲು ಹೊಡೆದು ಓಡಿಸಿದ್ದಲ್ಲದೆ, ಅದರ ಮೇಲೆ ಫೈರಿಂಗ್ ಮಾಡಿದ್ದಾನೆ. ಪರಿಣಾಮ ಗುಂಡೇಟು ತಿಂದ ಸಾಕು ನಾಯಿ ಸ್ಥಳದಲ್ಲೇ ಸಾವನ್ನಪ್ಪಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೃತ ನಾಯಿಯ ಶವ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಲಾಗಿದೆ. ಘಟನೆ ಬಗ್ಗೆ ವೆಂಕಟೇಶ್ ನೀಡಿದ ದೂರಿನ ಅನ್ವಯ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.


