
ಪ್ರಗತಿವಾಹಿನಿ ಸುದ್ದಿ: ರವಿವಾರ ತಮಿಳುನಾಡಿ ವಿರುಧುನಗರ ಜಿಲ್ಲೆಯ ಕತ್ತನಾರ್ಪಟ್ಟಿ ಬಳಿ ಇರುವ ಪಟಾಕಿ ಕಾರ್ಖಾನೆಯಲ್ಲಿನಡೆದ ಭೀಕರ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದ್ದು, ಮತ್ತಷ್ಟು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಪಟಾಕಿ ಘಟಕದಲ್ಲಿ ಭಾನುವಾರ ಈ ದುರಂತ ಸಂಭವಿಸಿದ್ದು ಮೃತಪಟ್ಟವರಲ್ಲಿ 22 ಮಹಿಳೆಯರು ಮತ್ತು ಮೂವರು ಪುರುಷರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನುಳಿದ ಎಂಟು ಮಂದಿ ಕಾರ್ಮಿಕರು ಶೇ. 60ರಷ್ಟು ಸುಟ್ಟಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ.
ಘಟನೆ ನಡೆದ ದಿನ ಸಂಜೆ ರಕ್ಷಣಾ ಕಾರ್ಯ ನಡೆಯುತ್ತಿದ್ದಾಗ ಸಂಭವಿಸಿದ ಎರಡನೇ ಸ್ಫೋಟದಲ್ಲಿ ಎಂಟು ಮಂದಿ ಪೊಲೀಸರು ಸೇರಿದಂತೆ ಒಟ್ಟು 12 ಮಂದಿಗೆ ಗಾಯಗಳಾಗಿವೆ. ಮಣ್ಣು ತೆಗೆಯುವ ಯಂತ್ರದ ಮೂಲಕ ಅವಶೇಷಗಳನ್ನು ತೆರವು ಮಾಡುತ್ತಿದ್ದಾಗ ಈ ಸ್ಪೋಟ ಸಂಭವಿಸಿದೆ.




