*ಹೆತ್ತ ತಾಯಿ ಅಂತ್ಯಕ್ರಿಯೆಗೆ ಬಾರದ ಮಕ್ಕಳು: ಮಾನವೀಯತೆ ಮೆರೆದ ಸಮಾಜ ಸೇವಕರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಬ್ಬರು ಮಕ್ಕಳಿದ್ದರೂ ತಾಯಿ ಅಂತ್ಯಕ್ರಿಯೆ ನೆರವೇರಿಸಲು ಬಾರದ ಹಿನ್ನೆಲೆಯಲ್ಲಿ ಸಮಾಜಸೇವಕರು ತಾವೇ ಮುಂದೆ ನಿಂತು ಮೃತ ವೃದ್ಧೆಯ ಅಂತ್ಯಕ್ರಿಯೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇನ್ನು ತಾಯಿ ಅಂತಿಮ ದರ್ಶನ ಪಡೆಯಲು ಬಾರದ ಪಾಪಿ ಮಕ್ಕಳ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ. ಈ ಘಟನೆ ನಡೆದಿರುವುದು ಬೆಳಗಾವಿ ನಗರದಲ್ಲಿ.
ಮೂಲತಃ ಬೆಳಗಾವಿ ತಾಲ್ಲೂಕಿನ ಮಾರಿಹಾಳ ಗ್ರಾಮದ ಅಂಜನಾ ಧಾಮೊನೆ ಎಂಬ ವೃದ್ಧೆ ಶಾಹುನಗರದ ವೃದ್ಧಾಶ್ರಮದಲ್ಲಿ ವಾಸವಿದ್ದರು. ವಯೋಸಹ ಕಾಯಿಲೆಯಿಂದ ಅವರು ನಿಧನರಾಗಿದ್ದರು. ಇಬ್ಬರು ಮಕ್ಕಳಿದ್ದರೂ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಲಾಗಿತ್ತು. ಆಗ ವೃದ್ಧಾಶ್ರಮದವರು ನಿಮ್ಮ ತಾಯಿ ಮೃತಪಟ್ಟಿದ್ದಾರೆ ಅಂತಾ ಅವರ ಇಬ್ಬರು ಮಕ್ಕಳಿಗೆ ವಿಷಯ ತಲುಪಿಸಿದ್ದಾರೆ.
ಆದರೂ, ಆ ಮಕ್ಕಳು ಯಾವುದೇ ರೀತಿ ದುಃಖ ವ್ಯಕ್ತಪಡಿಸಿಲ್ಲ. ಅಲ್ಲದೇ ನೀವೇ ಅಂತ್ಯಕ್ರಿಯೆ ಮಾಡುವಂತೆ ಕಾಲ್ ಕಟ್ ಮಾಡಿದ್ದಾರೆ.
ಏನು ಮಾಡಬೇಕು ಅಂತಾ ಯೋಚಿಸುತ್ತಿದ್ದ ವೃದ್ಧಾಶ್ರಮದವರು, ನಗರಸೇವಕ ಶಂಕರ ಪಾಟೀಲ ಮತ್ತು ಸಮಾಜಸೇವಕ ಗಂಗಾಧರ ಪಾಟೀಲ ಅವರಿಗೆ ವಿಷಯ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಈ ಇಬ್ಬರು, ಮೃತ ಅಜ್ಜಿಯ ಅಂತ್ಯಕ್ರಿಯೆಯನ್ನು ತಾವೇ ನೆರವೇರಿಸಿದ್ದಾರೆ. ಇವರಿಗೆ ನಿಖಿಲ್ ಅಪ್ಪುಗೋಳ, ಸ್ಮಶಾನ ಭೂಮಿ ಸಿಬ್ಬಂದಿ ನಿಸ್ಸಾರ ಅವರು ಸಾಥ್ ನೀಡಿದರು.
ಒಂದು ಕಡೆ ಇಂಥ ಪಾಪಿ ಮಕ್ಕಳು ಈ ಭೂಮಿ ಮೇಲೆ ಇದ್ದಾರಾ ಎಂಬ ಪ್ರಶ್ನೆ ಮೂಡಿದರೆ, ಮತ್ತೊಂದೆಡೆ ಹೀಗೆ ತಮಗೆ ಸಂಬಂಧವೇ ಇಲ್ಲದವರ ಅಂತ್ಯಕ್ರಿಯೆ ಮಾಡುವವ ಅಂತಃಕರಣ ಇರುವವರು ನಮ್ಮ ಜೊತೆಗಿದ್ದಾರೆ ಎಂಬ ಸಂದೇಶವನ್ನು ಈ ಘಟನೆ ನೀಡಿದೆ. ತಾನೇ ಜನ್ಮ ಕೊಟ್ಟ ಮಕ್ಕಳು ತಾಯಿಯ ಅಂತ್ಯಕ್ರಿಯೆಗೆ ಬರಲಿಲ್ಲ. ಆದರೆ, ಸಂಬಂಧವೂ ಇಲ್ಲದ ಯಾರದೋ ಮಕ್ಕಳು ಅಂತ್ಯಕ್ರಿಯೆ ಮಾಡಿದ್ದು, ನಿಜಕ್ಕೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
