*ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ: 24 ಗಂಟೆಯಲ್ಲಿ ಆರೋಪಿ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವ್ಯಕ್ತಿಯೊಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದೇವಗಾಂವ ಗ್ರಾಮದಲ್ಲಿ ಬುಧವಾರ ನಡೆದಿದೆ.
ಮಹಾಂತೇಶ ನಿಂಗಪ್ಪ ಹಚ್ಚಣ್ಣವರ (52) ಕೊಲೆಯಾದ ವ್ಯಕ್ತಿ. ಆರೋಪಿ ಪ್ರಕಾಶ ಕಲ್ಲಪ್ಪ ಕಾಳಾರ (30) ಕೊಲೆಗೈದ ಆರೋಪಿ.
ಪ್ರಕಾಶ ಕಾಳಾರ ಒಬ್ಬನೇ ಮನೆಯಲ್ಲಿ ವಾಸವಿದ್ದ. ಅವನಿಲ್ಲದ ವೇಳೆ ಅವರ ಮನೆಗೆ ಹೋಗಿ ಮಹಾಂತೇಶ ಮಲಗಿದ್ದ. ಮನೆಗೆ ಬಂದ ಪ್ರಕಾಶ ಇಲ್ಲಿ ಯಾಕೆ ಮಲಗಿದ್ದಿಯಾ ಎಂದು ಕೇಳಿದ. ಹೀಗೆ ಮಾತಿಗೆ ಮಾತು ಬೆಳೆದು, ಜಗಳ ವಿಕೋಪಕ್ಕೆ ಹೋಗಿದೆ. ಹತ್ತಿರದಲ್ಲಿ ಬಿದ್ದಿದ್ದ ಕಲ್ಲನ್ನು ತಂದು ಮಹಾಂತೇಶನ ತಲೆಯ ಮೇಲೆ ಪ್ರಕಾಶ ಜಜ್ಜಿದ್ದಾನೆ. ತೀವ್ರ ಗಾಯಗೊಂಡ ಆತ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ನಂತರ ಮೃತದೇಹವನ್ನು ಎಳೆದು ತಂದು ರಸ್ತೆಗೆ ಹಾಕಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಕೆ ತಿಳಿಸಿದರು.
ದೇವಗಾಂವ ಗ್ರಾಮ ಸೇರಿ ಐದು ಗ್ರಾಮಗಳ ಗ್ರಾಮದೇವತೆಯ ಜಾತ್ರೆ ಸಂದರ್ಭದಲ್ಲಿಯೇ ಕೊಲೆಯಾಗಿದೆ. ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ಆಗುವ ನಿಟ್ಟಿನಲ್ಲಿ ವೈಜ್ಞಾನಿಕ ತನಿಖೆ ಕೈಗೊಂಡಿದ್ದೇವೆ ಎಂದರು.



