
ಪ್ರಗತಿವಾಹಿನಿ ಸುದ್ದಿ; ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಸಂರಕ್ಷಣೆಯ ಕರೆಗೆ ಓಗೊಟ್ಟಿರುವ ಮಹಾರಾಷ್ಟ್ರ ಸಿಎಂ ದೆವೇಂದ್ರ ಫಡ್ನವಿಸ್ ಮುಂಬೈನ ವಿಧಾನ ಭವನಕ್ಕೆ ಮೋಟಾರ್ ಸೈಕಲ್ ಏರಿ ಬರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ತಮ್ಮ ಅಧಿಕೃತ ನಿವಾಸ ‘ವರ್ಷಾದಿಂದ ದಕ್ಷಿಣ ಮುಂಬೈನ ವಿಧಾನ ಭವನಕ್ಕೆ ಬುಲೆಟ್ನಲ್ಲಿ ಸವಾರಿ ಮಾಡಿದ ಫಡ್ನವಿಸ್ ಅವರಿಗೆ ಬಿಜೆಪಿ ನಾಯಕ ಹಾಗೂ ಸಚಿವ ಆಶಿಶ್ ಶೆಲಾರ್ ಸಾಥ್ ನೀಡಿದರು. ವಿಧಾನ ಪರಿಷತ್ತಿನ ನೂತನ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅವರು ಈ ವಿಶೇಷ ರೀತಿಯಲ್ಲಿ ಆಗಮಿಸಿದರು.
ಇದೇ ಹಾದಿಯಲ್ಲಿ ಸಚಿವ ನಿತೇಶ್ ರಾಣೆ ಅವರು ಕೂಡ ಮಿತವ್ಯಯಕ್ಕೆ ಆದ್ಯತೆ ನೀಡಿದ್ದು, ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸಲು ಸಚಿವಾಲಯಕ್ಕೆ ನಡೆದುಕೊಂಡೇ ಬಂದಿರುವುದು ವಿಶೇಷವಾಗಿತ್ತು.
ಇಂಧನ ಹಾಗೂ ವಿದೇಶಿ ವಿನಿಮಯವನ್ನು ಉಳಿಸುವಂತೆ ಪ್ರಧಾನಿ ಮೋದಿ ಜನರಲ್ಲಿ ಮನವಿ ಮಾಡಿದ್ದರು. ಪ್ರಧಾನಿಯವರ ಈ ಕರೆಗೆ ಸ್ಪಂದಿಸಿರುವ ಫಡ್ನವಿಸ್ ಸರ್ಕಾರ, ರಾಜ್ಯದಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.
ತಮ್ಮ ಸರ್ಕಾರದಲ್ಲಿ ಹಲವು ಮಿತವ್ಯಯ ಕ್ರಮಗಳನ್ನು ಘೋಷಿಸಿರುವ ಅವರು, ಸಚಿವರ ಬೆಂಗಾವಲು ಪಡೆಗಳ ವಾಹನಗಳ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಲು ಆದೇಶಿಸಿದ್ದಾರೆ. ಅಲ್ಲದೆ ಸಚಿವರು ಮತ್ತು ಅಧಿಕಾರಿಗಳ ವಿದೇಶಿ ಪ್ರವಾಸಗಳನ್ನು ರದ್ದುಗೊಳಿಸಲಾಗಿದೆ. ಪ್ರವಾಸದ ಸಮಯದಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ವಾಹನಗಳು ಬೆಂಗಾವಲಿನಲ್ಲಿ ಇರದಂತೆ ನೋಡಿಕೊಳ್ಳಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.




