Film & EntertainmentKannada NewsKarnataka NewsNational
*ಕನ್ನಡ ಚಿತ್ರರಂಗದ ಸಹ ನಿರ್ದೇಶಕ ನಂದೀಶ ಹೃದಯಾಘಾತದಿಂದ ಸಾವು*

ಪ್ರಗತಿವಾಹಿನಿ ಸುದ್ದಿ: ಕನ್ನಡ ಚಿತ್ರರಂಗದ ಯುವ ಬರಹಗಾರ ಹಾಗೂ ಸಹ ನಿರ್ದೇಶಕ ನಂದೀಶ ಜಿ.ಟಿ (37) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರಿನ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರಲ್ಲಿ ನಿಪುಣರಾಗಿದ್ದ ನಂದೀಶ್, ಹಲವು ಜನಪ್ರಿಯ ಸಿನಿಮಾಗಳು ಹಾಗೂ ಸೂಪರ್ ಹಿಟ್ ಧಾರಾವಾಹಿಗಳಿಗೆ ತಂತ್ರಜ್ಞರಾಗಿ ಕೆಲಸ ಮಾಡಿ ಭರವಸೆ ಮೂಡಿಸಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದು ಇವರ ಹಠಾತ್ ನಿಧನದಿಂದ ಮಾಳೂರು ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಮೃತರ ಅಂತ್ಯಸಂಸ್ಕಾರವು ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅವರ ಸ್ವಗ್ರಾಮದಲ್ಲೇ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೇವಲ 37ನೇ ವಯಸ್ಸಿಗೆ ಇಹಲೋಕ ತ್ಯಜಿಸಿರುವ ಇವರ ಅಕಾಲಿಕ ನಿಧನಕ್ಕೆ ಚಲನಚಿತ್ರ ಸಾಹಿತಿ ಕವಿರಾಜ್ ಸೇರಿದಂತೆ ಚಿತ್ರರಂಗದ ಪ್ರಮುಖ ಗಣ್ಯರು ಹಾಗೂ ಸಹೋದ್ಯೋಗಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

