
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಯುವಕನ ತಲೆ ಚಚ್ಚಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಐನಾಪುರ ಪಟ್ಟಣದ ಸಂತೋಷ ಸಿದ್ದಪ್ಪ ಕಮತೆ (33) ಕೊಲೆಯಾದ ದುರ್ದೈವಿ ಎಂದು ತಿಳಿದು ಬಂದಿದೆ.
ಸಂತೋಷ ಕಮತೆ ತಮ್ಮ ತೋಟದಲ್ಲಿ ಇದ್ದ ತೆಂಗಿನಕಾಯಿಯನ್ನು ತನ್ನ ಇಬ್ಬರು ಗೆಳೆಯರೊಂದಿಗೆ ಉಗಾರ ಪಟ್ಟಣಕ್ಕೆ ಹೋಗಿ ಮಾರಾಟ ಮಾಡಿದ್ದರು. ಬಳಿಕ ಮೂವರು ಸೇರಿ ಮದ್ಯಪಾನ ಮಾಡಿ ಐನಾಪುರಕ್ಕೆ ಹಿಂದಿರುಗುವ ವೇಳೆ, ಮಾರಾಟವಾದ ಹಣದ ಹಂಚಿಕೆ ವಿಚಾರವಾಗಿ ವಾದ ಆರಂಭಗೊಂಡಿದೆ. ಈ ವೇಳೆ ಇಬ್ಬರು ಗೆಳೆಯರು ಸಂತೋಷನ ತಲೆಗೆ ಕಲ್ಲಿನಿಂದ ಚಚ್ಚಿ ಕೊಲೆ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಥಣಿ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಸಿಪಿಐ ಸಂತೋಷ ಹಳ್ಳೂರ ಹಾಗೂ ಪಿಎಸ್ಐ ರಾಘವೇಂದ್ರ ಖೋತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ಸಂಬಂಧ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕ್ಷುಲ್ಲಕ ಕಾರಣಕ್ಕಾಗಿ ನಡೆದ ಈ ಕೊಲೆ ಘಟನೆ ಐನಾಪುರ ಹಾಗೂ ಉಗಾರ ಪರಿಸರದಲ್ಲಿ ಚರ್ಚೆಗೆ ಗ್ರಾಸವಾಗಿದೆ.




