
ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ, ಸಿದ್ದರಾಮಯ್ಯ ಸಂಪುಟದ ಅತ್ಯಂತ ಪ್ರಭಾವಿ ಸಚಿವ, ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಅವರು ಮುಖ್ಯಮಂತ್ರಿಗಳ ರಾಜೀನಾಮೆ ನಿರ್ಧಾರದಿಂದ ಭಾವುಕರಾಗಿ ಮಾಧ್ಯಮಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತಿರುವ ಪ್ರಸಂಗ ನಡೆದಿದೆ.
ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಆಯೋಜಿಸಲಾಗಿದ್ದ ಕೊನೆಯ ವಿದಾಯದ ಉಪಹಾರ ಸಭೆಯಲ್ಲಿ ಸಿದ್ದರಾಮಯ್ಯ ಅವರು ಕಣ್ಣೀರಿಟ್ಟು ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದರು. ಸಭೆ ಮುಗಿದ ತಕ್ಷಣವೇ ಕಾವೇರಿ ನಿವಾಸದಿಂದ ಹೊರಬಂದ ಸಚಿವ ಸಂತೋಷ್ ಲಾಡ್ ಅವರ ಮುಖದಲ್ಲಿ ತೀವ್ರ ದುಃಖ ಆವರಿಸಿತ್ತು. ಅವರು ಧಾವಂತದಿಂದ ತಮ್ಮ ಅಧಿಕೃತ ಕಾರನ್ನು ಹತ್ತಿ ಕುಳಿತರು.
ಕಾರಿನೊಳಗೆ ಕುಳಿತ ಸಚಿವ ಸಂತೋಷ್ ಲಾಡ್ ಅವರನ್ನು ಮಾತನಾಡಿಸಲು ಮತ್ತು ಇಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಮುತ್ತಿಗೆ ಹಾಕಿದರು. ಈ ವೇಳೆ ಮೈಕ್ ಹಿಡಿಯುತ್ತಿದ್ದಂತೆಯೇ ಸಚಿವ ಸಂತೋಷ್ ಲಾಡ್ ಅವರ ದುಃಖ ಕಟ್ಟೆಯೊಡೆಯಿತು. ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಕಣ್ಣೀರು ಸುರಿಸುತ್ತಲೇ, “ದಯವಿಟ್ಟು ನನ್ನನ್ನು ಈಗ ಏನೂ ಕೇಳಬೇಡಿ… ಎಂದು ಕೈಮುಗಿದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.



