*ಬೆಳಗಾವಿಯಲ್ಲಿ ತಲ್ವಾರನಿಂದ ಯುವಕನ ಭೀಕರ ಕೊಲೆ: ಐವರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜಿ ಸಂಧಾನಕ್ಕೆ ಕರೆದು ಯುವಕನೊಬ್ಬನನ್ನು ತಲ್ವಾರ್ನಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಕೊಲೆ ಪ್ರಕರಣದಲ್ಲಿ ಓರ್ವ ಅಪ್ರಾಪ್ತ ಸೇರಿದಂತೆ ಬೆಳಗಾವಿ ಗ್ರಾಮೀಣ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳಗಾವಿಯ ಮಜಗಾಂವ ಗ್ರಾಮದ ರಾಹುಲ್ ತಿಪ್ಪಣ್ಣ ತಳವಾರ (22) ಕೊಲೆಯಾದ ಯುವಕ. ಜಯನಗರ ಮಚ್ಚೆಯ ಸೂರಜ ರಾಮು ಸಿದ್ದಗೌಳಿ (26), ಯೋಗೇಶ್ ಬಾಬು ದೊಡಮನಿ (28), ಪೀರನವಾಡಿಯ ಮಂಜುನಾಥ ಸುರೇಶ್ ಮಳಕೂರ (21), ಮಜಗಾಂವದ ದೇಮಪ್ಪ ತಳವಾರ (26) ಹಾಗೂ ಅಪ್ರಾಪ್ತ ಬಾಲಕನ್ನು ಬೆಳಗಾವಿಯ ಗ್ರಾಮೀಣ ಪೊಲೀಸ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೇ.27ರಂದು ಹುಂಚ್ಯಾನಟ್ಟಿ ಗ್ರಾಮದ ರಾಮೇಶ್ವರ ನಗರದ ಹೊರವಲಯದಲ್ಲಿ ಗೋಡಂಬಿ ತೋಟದಲ್ಲಿ ಈಘಟನೆ ನಡೆದಿದೆ.
ವಿರೇಶ ಹಿರೇಮಠ ಅವರು ಆರೋಪಿ ಸೂರಜ ಸಿದ್ದಗೌಳಿ ಬಳಿ ಕಾರನ್ನು 2 ಲಕ್ಷ ರೂ.ಗೆ ಖರೀದಿಸಲು ಒಪ್ಪಂದ ಮಾಡಿಕೊಂಡು 1 ಲಕ್ಷ ರೂ.ಮುಂಗಡ ಹಣ ನೀಡಿದ್ದರು. ಬಳಿಕ ಕಾರು ಸರಿಯಾಗಿಲ್ಲವೆಂದು ಮರಳಿಸಿ, 70 ಸಾವಿರ ಹಣ ವಾಪಸ್ ನೀಡುವಂತೆ ಕೇಳಿದ್ದರು. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಹಣದ ತಕರಾರು ಉಂಟಾಗಿತ್ತು.
ಇದೆ ವಿಚಾರಕ್ಕೆ ರಾಜಿ ಸಂದಾನಕ್ಕೆ ಹೋಗಿದ್ದ ರಾಹುಲ್ ತಳವಾರ ಹಾಗೂ ಸ್ನೇಹಿತರ ಮೇಲೆ ತಲ್ವಾರ್ ಹಿಡಿದು 10ಕ್ಕೂ ಹೆಚ್ಚು ಜನ ಸ್ಥಳಕ್ಕೆ ಬಂದಿದ್ದಾರೆ.
ತಂಟೆ ಬಗೆಹರಿಸಲು ರಾಹುಲ್ ಆರೋಪಿತರನ್ನು ಪಕ್ಕಕ್ಕೆ ಕರೆದು ಮಾತನಾಡಿಸಲು ಮುಂದಾದ ವೇಳೆ, ಆರೋಪಿಗಳು ಆತನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ತಲ್ವಾರ್ನಿಂದ ಬೆನ್ನು, ತಲೆ ಹಾಗೂ ಕೈ ಭಾಗಗಳಿಗೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ರಾಹುಲ್ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇನ್ನೂ ಸುದ್ದಿ ತಿಳಿದ ನೂರಾರು ಯುವಕರು ಬಿಮ್ಸ್ ಆಸ್ಪತ್ರೆಯ ಶವಾಗಾರದ ಬಳಿಯಲ್ಲಿ ಧಾವಿಸಿದ್ರು. ಹೀಗೆ ಬಂದ ಯುವಕರು ಸೇಡಿನ ಮಾತುಗಳನ್ನು ಆಡಿದ್ರೆ. ಸ್ಥಳಕ್ಕೆ ಬಂದ ಡಿಸಿಪಿ ನಾರಾಯಣ ಭರಮನಿ ಆಮೇಷಕ್ಕೆ ಒಳಗಾಗಿ ಏನಾದ್ರು ಮಾಡಿದ್ರೆ ಹುಷಾರ್ ಎನ್ನುವ ಎಚ್ಚರಿಕೆಯನ್ನು ನೀಡಿದ್ರು.
ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರೋ ಪೊಲೀಸರು ತಂಡವನ್ನು ರಚಿಸಿ ಆರೋಪಿಗಳ ಉಳಿದ ಆರೋಪಿಗಳ ಪತ್ತೆಗೆ ಬೆನ್ನು ಬಿದ್ದಿದ್ದಾರೆ. ಇನ್ನೂಳಿದವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.




