*ಶಾಲಾ ಸೌಂದರ್ಯೀಕರಣ ಮತ್ತು ಭಿತ್ತಿಚಿತ್ರ ಅಭಿಯಾನ ಯಶಸ್ವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶ್ರೀ ತಕ್ಷಶಿಲಾ ಗುರುಕುಲದ ವತಿಯಿಂದ ನಗರದ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸುಂದರೀಕರಣ, ಸ್ವಚ್ಛತಾ ಹಾಗೂ ಭಿತ್ತಿಚಿತ್ರ (Mural Painting) ಅಭಿಯಾನವನ್ನು ಮೇ 21 2026 ರಿಂದ ಮೇ 25 2026 ರವರೆಗೆ ಯಶಸ್ವಿಯಾಗಿ ಐದು ದಿನಗಳ ಕಾಲ ನಡೆಸಲಾಯಿತು.
ವಿದ್ಯಾರ್ಥಿನಿಯರಿಗೆ ಸ್ವಚ್ಛ, ಸುಂದರ ಹಾಗೂ ಪ್ರೇರಣಾದಾಯಕ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಕಾರ್ಯಕ್ರಮದ ಮೊದಲ ಹಂತದಲ್ಲಿ ಸ್ವಯಂಸೇವಕರು ಶಾಲೆಯ ಆವರಣ, ತರಗತಿ ಕೊಠಡಿಗಳು, ದಾರಿಗಳು ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು.
ಹಲವು ವರ್ಷಗಳಿಂದ ಸಂಗ್ರಹವಾಗಿದ್ದ ಧೂಳು, ಕಸ ಹಾಗೂ ಹಳೆಯ ಬಣ್ಣದ ಅವಶೇಷಗಳನ್ನು ತೆರವುಗೊಳಿಸಿ ಗೋಡೆಗಳನ್ನು ಚಿತ್ರಕಲೆಗೆ ಸಿದ್ದಪಡಿಸಲಾಯಿತು. ನಂತರ ಸ್ವಯಂಸೇವಕರು ಶಾಲೆಯ ವಿವಿಧ ಗೋಡೆಗಳ ಮೇಲೆ ಶೈಕ್ಷಣಿಕ ಚಿತ್ರಗಳು, ಕನ್ನಡ ಮತ್ತು ಇಂಗ್ಲಿಷ್ ಅಕ್ಷರಮಾಲೆ, ಸಂಖ್ಯೆಗಳು, ಪರಿಸರ ಜಾಗೃತಿ ಸಂದೇಶಗಳು ಹಾಗೂ ಪ್ರೇರಣಾದಾಯಕ ಕಲಾಕೃತಿಗಳನ್ನು ರಚಿಸಿದರು.
ಶಾಲೆಯ ಗೋಡೆಗಳಿಗೆ ಹೊಸ ಬಣ್ಣ ಹಚ್ಚುವ ಮೂಲಕ ಸಂಪೂರ್ಣ ಶಾಲೆಯ ವಾತಾವರಣವನ್ನು ಆಕರ್ಷಕವಾಗಿ ಪರಿವರ್ತಿಸಲಾಯಿತು. ಐದು ದಿನಗಳ ಕಾಲ ಸ್ವಯಂಸೇವಕರು ಬೆಳಗ್ಗೆಯಿಂದ ಸಂಜೆವರೆಗೆ ನಿರಂತರವಾಗಿ ಶ್ರಮಿಸಿ ತಮ್ಮ ಸಮಯ, ಶಕ್ತಿ ಮತ್ತು ಕಲಾತ್ಮಕ ಕೌಶಲ್ಯವನ್ನು ಸಮರ್ಪಿಸಿದರು. ಅವರ ಸಮರ್ಪಣೆ, ತಂಡದ ಕಾರ್ಯಪದ್ಧತಿ ಮತ್ತು ಸೇವಾ ಮನೋಭಾವದಿಂದ ಈ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿತು.
ಕಾರ್ಯಕ್ರಮದ ಅವಧಿಯಲ್ಲಿ ಎಲ್ಲಾ ಸ್ವಯಂಸೇವಕರಿಗೆ ಊಟ ಮತ್ತು ಅಗತ್ಯ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ 540ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಉತ್ತಮ, ಸ್ವಚ್ಛ ಹಾಗೂ ಪ್ರೇರಣಾದಾಯಕ ಕಲಿಕಾ ವಾತಾವರಣವನ್ನು ಒದಗಿಸುವ ಉದ್ದೇಶದಿಂದ ಈ ಅಭಿಯಾನ ಕೈಗೊಳ್ಳಲಾಯಿತು.
ಈ ಹೊಸ ವಾತಾವರಣವು ವಿದ್ಯಾರ್ಥಿನಿಯರಲ್ಲಿ ಕಲಿಕೆಯ ಆಸಕ್ತಿ, ಸೃಜನಶೀಲತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಸ್ವಯಂಸೇವಕರು, ದಾನಿಗಳು, ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸ್ಥಳೀಯ ಸಮುದಾಯದ ಸದಸ್ಯರಿಗೆ ಶ್ರೀ ತಕ್ಷಶಿಲಾ ಗುರುಕುಲ ಹೃತ್ತೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದೆ.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಸ್ವಯಂಸೇವಕರಿಗೆ ವಡಗಾವಿ ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ನಂ.5 ಪರವಾಗಿ ತುಂಬು ಹೃದಯದ ಕೃತಜ್ಜೆತೆಯನ್ನು ಸಲ್ಲಿಸಲಾಗಿದೆ.




