
ಮಳೆ ಕೊರತೆ ಮುನ್ಸೂಚನೆ:ಪರ್ಯಾಯ ಜಲ ಮೂಲ ಗುರುತಿಸಲು ಖಂಡ್ರೆ ಸೂಚನೆ
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಮಳೆ ಕೊರತೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಪರ್ಯಾಯ ಜಲ ಮೂಲಗಳನ್ನು ಗುರುತಿಸಿ, ನೀರಿನ ಪರೀಕ್ಷೆ ಮಾಡಿ ಸನ್ನದ್ಧ ಸ್ಥಿತಿಯಲ್ಲಿರುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾರ್ಯದರ್ಶಿಗಳಿಗೆ ಈ ಸಂಬಂಧ ಲಿಖಿತ ಸೂಚನೆ ನೀಡಿರುವ ಅವರು, ಜೂನ್ ಮಧ್ಯಭಾಗದ ಹೊತ್ತಿಗೆ ರಾಜ್ಯದಲ್ಲಿ ವಾಡಿಕೆಯಂತೆ ಆಗಬೇಕಿದ್ದ ಮಳೆ ಆಗಿಲ್ಲ, ಎಲ್ ನಿನೋ (El Nino) ಪ್ರಭಾವದಿಂದಾಗಿ ಮುಂಗಾರು ಮಳೆ ಕೊರತೆ ಉಂಟಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ, ಈ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಮಳೆಯ ಸರಾಸರಿ ಪ್ರಮಾಣ ಮತ್ತು ಸರಾಸರಿ ಮಳೆಯ ಅವಧಿ ಕಡಿಮೆ ಆಗುವ ಭೀತಿ ಎದುರಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಅಪಾಯವೂ ಇದೆ. ಈ ನಿಟ್ಟಿನಲ್ಲಿ ಎಲ್ಲ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಹಾಲಿ ನೀರು ಪೂರೈಕೆ ಮಾಡುತ್ತಿರುವ ಜಲ ಮೂಲಗಳ ಜೊತೆಗೆ ಪರ್ಯಾಯ ಜಲ ಮೂಲಗಳನ್ನು ಗುರುತಿಸಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಕ್ರಮ ವಹಿಸುವ ಅಗತ್ಯ ಮನಗಾಣಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಖಾಸಗಿ ತೆರೆದ ಬಾವಿ, ಕೊಳವೆ ಬಾವಿಗಳನ್ನು ಗುರುತಿಸಿ, ಆ ಬಾವಿಗಳ ನೀರಿನ ಪ್ರಮಾಣ, ಲಭ್ಯತೆ ಖಚಿತಪಡಿಸಿಕೊಂಡು ನೀರು ಕುಡಿಯಲು ಯೋಗ್ಯವಾಗಿದೆಯೇ ಇಲ್ಲವೇ ಎಂಬ ಬಗ್ಗೆ ಪರೀಕ್ಷೆ ನಡೆಸಿ, ಅಂತಹ ಖಾಸಗಿ ಜಲ ಮೂಲಗಳ ಮಾಲೀಕರೊಂದಿಗೆ ಮಾತನಾಡಿ, ಅಗತ್ಯ ಬಿದ್ದಲ್ಲಿ ನೀರು ಬಳಕೆ ಮಾಡುವ ಬಗ್ಗೆ ನಿಯಮಾನುಸಾರ ಒಡಂಬಡಿಕೆ ಮಾಡಿಕೊಂಡು ಸನ್ನದ್ಧ ಸ್ಥಿತಿಯಲ್ಲಿರುವಂತೆ ಅವರು ಸೂಚಿಸಿದ್ದಾರೆ.




