*ಬಿಡದಿ ಟೌನ್ ಶಿಪ್: ರೈತರಿಗೆ ಭೂ ಪರಿಹಾರದ ಜೊತೆಗೆ ಜಮೀನಿನಲ್ಲಿರುವ ವಾಣಿಜ್ಯ ಬೆಳೆಗೂ ಪರಿಹಾರ: ಚೆಕ್ ವಿತರಣೆಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ: ತೀವ್ರ ವಿರೋಧದ ನಡುವೆಯೂ ಬಿಡದಿ ಟೌನ್ ಶಿಪ್ ಗೆ ರೈತರಿಂದ ಪಡೆದ ಭೂಮಿಗೆ ರಾಜ್ಯ ಸರ್ಕಾರ ಪರಿಹಾರ ವಿತರಣೆಗೆ ಚಾಲನೆ ನೀಡಿದೆ. ಒಂದೆಡೆ ಟೌನ್ ಶಿಪ್ ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ರೈತರಿಂದ ವಶಪಡಿಸಿಕೊಳ್ಳಲಾದ ಭೂಮಿಗೆ ಸರ್ಕಾರದಿಂದ ಪರಿಹಾರ ನೀಡುವ ಕಾರ್ಯ ಆರಂಭವಾಗಿದೆ.
ಬಿಡದಿ ಟೌನ್ಶಿಪ್ ಯೋಜನೆಗೆ ಸುಮಾರು 516 ಎಕರೆಗೂ ಹೆಚ್ಚು ವ್ಯಾಪ್ತಿಯ ಭೂಸ್ವಾಧೀನ ವಿರೋಧಿಸಿ ಭಾನುವಾರ ಜೆಡಿಎಸ್ ಹಾಗೂ ರೈತ ಸಂಘಟನೆಗಳು ಬೃಹತ್ ಪಾದಯಾತ್ರೆ ಹಮ್ಮಿಕೊಂಡಿವೆ. ಈ ನಡುವೆ, ಸರ್ಕಾರ ಟೌನ್ ಶಿಪ್ ಗೆ ಭೂಮಿ ನೀಡುವ ರೈತರಿಗೆ ಪರಿಹಾರದ ಚೆಕ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.
ರಾಮನಗರದ ಕಂದಾಯ ಭವನದಲ್ಲಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ ನೇತೃತ್ವದಲ್ಲಿ ರೈತರಿಗೆ ಚೆಕ್ ಹಸ್ತಾಂತರಿಲಾಯಿತು. ಕೆಂಪಯ್ಯನಪಾಳ್ಯ, ವಡೇರಹಳ್ಳಿ, ಮುಂಡಹಳ್ಳಿ ಈ 3 ಕಂದಾಯ ಗ್ರಾಮಗಳ ಪೈಕಿ ಈವರೆಗೆ 270 ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಮೊದಲ ಹಂತದಲ್ಲಿ ಕೆಂಪಯ್ಯನಪಾಳ್ಯದ 10ರೈತರಿಗೆ ಸಾಂಕೇತಿಕವಾಗಿ ಚೆಕ್ ನೀಡಲಾಯಿತು. ಕೆಂಪಯ್ಯನ ಪಾಳ್ಯದಲ್ಲಿ 1 ಎಕರೆ ಜಮೀನಿಗೆ 2,07,30,000 ರೂಪಾಯಿ ನಿಗದಿಪಡಿಸಿದೆ.
ಜಮೀನಿನಲ್ಲಿರುವ ವಾಣಿಜ್ಯ ಬೆಳೆಗೂ ಪರಿಹಾರ
ತೆಂಗಿನ ಮರಕ್ಕೆ – 40,446
ಮಾವಿನ ಮರ – 62,000
ಅಡಕೆ ಮರಕ್ಕೆ – 7,440
ಬಾಳೆ ಪ್ರತಿ ಎಕರೆಗೆ – 10.86ಲಕ್ಷ
ರೇಷ್ಮೆ ಪ್ರತಿ ಎಕರೆಗೆ – 14 ಲಕ್ಷ
ಪಪ್ಪಾಯ ಪ್ರತಿ ಎಕರೆಗೆ – 12ಲಕ್ಷ
ಹಲಸು ಪ್ರತಿ ಎಕರೆಗೆ – 42,750
ಹುಣಸೆ ಪ್ರತಿ ಎಕರೆಗೆ – 53,310
ಸಪೋಟ ಪ್ರತಿ ಎಕರೆಗೆ – 43,166 ರೂ ಪರಿಹಾರ ವಿತರಿಸಲಾಗುತ್ತಿದೆ.




