
ಪ್ರಗತಿವಾಹಿನಿ ಸುದ್ದಿ : ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಇಂದು ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕಾರವಾರ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಒಳನಾಡಿನ ಬಹುತೇಕ ಭಾಗಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದೆ.
ಒಂದೆಡೆ ಕರಾವಳಿಯಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದರೆ, ಮತ್ತೊಂದೆಡೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಕೊರತೆ ಎದುರಾಗಿದೆ. ವಿಶೇಷವಾಗಿ ಕೊಡಗು, ಮಂಡ್ಯ ಹಾಗೂ ಮೈಸೂರು ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಕೊಡಗಿನಲ್ಲಿ ಮಳೆ ಕ್ಷೀಣಿಸಿರುವುದರಿಂದ ಕಾವೇರಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು ರಾಜ್ಯದ ಪ್ರಮುಖ ಪ್ರದೇಶಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗುವ ಆತಂಕ ಎದುರಾಗಿದೆ.
ಇಂದಿನ ತಾಪಮಾನದ ಸ್ಥಿತಿಗತಿಯನ್ನು ಗಮನಿಸುವುದಾದರೆ, ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 28 ಡಿಗ್ರಿ ಮತ್ತು ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಬಹುದು. ಕರಾವಳಿ ಪ್ರದೇಶಗಳಾದ ಮಂಗಳೂರಿನಲ್ಲಿ 29-26 ಡಿಗ್ರಿ, ಉಡುಪಿಯಲ್ಲಿ 28-26 ಡಿಗ್ರಿ ಹಾಗೂ ಕಾರವಾರದಲ್ಲಿ 28-27 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
ಮಲೆನಾಡು ಹಾಗೂ ಸುತ್ತಮುತ್ತಲಿನ ಭಾಗಗಳಾದ ಚಿಕ್ಕಮಗಳೂರಿನಲ್ಲಿ ಅತ್ಯಂತ ತಂಪಾದ ವಾತಾವರಣವಿದ್ದು 23-19 ಡಿಗ್ರಿ, ಮಡಿಕೇರಿಯಲ್ಲಿ 23-21 ಡಿಗ್ರಿ, ಶಿವಮೊಗ್ಗದಲ್ಲಿ 27-23 ಡಿಗ್ರಿ ಹಾಗೂ ಹಾಸನದಲ್ಲಿ 26-21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆಯಿದೆ.
ಉತ್ತರ ಕರ್ನಾಟಕ ಹಾಗೂ ಒಳನಾಡಿನ ಪ್ರಮುಖ ನಗರಗಳ ಪೈಕಿ ಬೆಳಗಾವಿಯಲ್ಲಿ 24-22 ಡಿಗ್ರಿ, ಹುಬ್ಬಳ್ಳಿಯಲ್ಲಿ 26-23 ಡಿಗ್ರಿ, ಹಾವೇರಿ ಹಾಗೂ ಗದಗದಲ್ಲಿ 27-23 ಡಿಗ್ರಿ. ವಿಜಯಪುರ, ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ 29-24 ಡಿಗ್ರಿ ತಾಪಮಾನ ಕಂಡುಬರಲಿದೆ. ಬಳ್ಳಾರಿ ಮತ್ತು ರಾಯಚೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ವರೆಗೆ ತಲುಪಲಿದ್ದು ಕಲಬುರಗಿಯಲ್ಲಿ 30-24 ಡಿಗ್ರಿ, ಯಾದಗಿರಿಯಲ್ಲಿ 31-25 ಡಿಗ್ರಿ ಹಾಗೂ ಕೊಪ್ಪಳದಲ್ಲಿ 30-24 ಡಿಗ್ರಿ ಸೆಲ್ಸಿಯಸ್ ವಾತಾವರಣ ಇರಲಿದೆ.
ದಕ್ಷಿಣ ಒಳನಾಡಿನ ಮೈಸೂರು ಹಾಗೂ ಚಾಮರಾಜನಗರದಲ್ಲಿ 29-23 ಡಿಗ್ರಿ, ಮಂಡ್ಯ ಹಾಗೂ ರಾಮನಗರದಲ್ಲಿ 30-23 ಡಿಗ್ರಿ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ 29-22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ವರದಿಯಾಗಿದೆ.




