
ಪ್ರಗತಿವಾಹಿನಿ ಸುದ್ದಿ: ಎರಡು ದಿನಗಳ ಹಿಂದೆಯಷ್ಟೇ ಜನಿಸಿದ್ದ ನವಜಾತ ಶಿಶುವನ್ನು ಬಿಟ್ಟು ತಾಯಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರದಲ್ಲಿ ಈ ಘಟನೆ ಅನ್ಡೆದಿದೆ. ದೇವನಹಳ್ಳಿಯ ಖಾಸಗಿ ಆಸ್ಪತ್ರೆಯೊಂದರದಲ್ಲಿ ಶುಕ್ರವಾರ ಹೆರಿಗೆಗೆ ಅಂತ ಬಂದಿದ್ದ ಮಹಿಳೆಗೆ ಗಂಡು ಮಗು ಜನನವಾಗಿತ್ತು. ಮಗುವಿನ ತೂಕ ಕಡಿಮೆ ಹಾಗೂ ಉಸಿರಾಟದ ಸಮಸ್ಯೆಯಿದ್ದ ಹಿನ್ನೆಲೆ ದೇವಹಳ್ಳಿಯಿಂದ ಅಂಬ್ಯುಲೆನ್ಸ್ ಮೂಲಕ ತಾಯಿ ಹಾಗೂ ಕೇರ್ ಟೇಕರ್ ನರ್ಸ್ ಮೂಲಕ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಆದರೆ ಚಿಕ್ಕಬಳ್ಳಾಪುರಕ್ಕೆ ಬಂದ ತಾಯಿ, ಮಗುವಿನ ಚಿಕಿತ್ಸೆಗೆ ಹಣ ತರ್ತೀನಿ ಅಂತ ಹೇಳಿ ಹೋದವಳು ವಾಪಸ್ ಆಗಿಲ್ಲ. ಇತ್ತ ತಾಯಿ ಇಲ್ಲದೆ ನವಜಾತ ಶಿಶು ಅನಾಥವಾಗಿದೆ.
ಸದ್ಯ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯ ಎನ್ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ವೈದ್ಯರು ಮಗುವಿನ ಬಗ್ಗೆ ಮಾಹಿತಿ ತಿಳಿಯಲು ತಂದೆ, ತಾಯಿ ಎಲ್ಲಿ ಅಂದಾಗ ಕೇರ್ ಟೇಕರ್ ಹಣ ತರಲು ಹೋಗಿದ್ದಾರೆ, ವಾಪಸ್ ಬಂದಿಲ್ಲ ಅಂದಿದ್ದಾಳೆ. ಇದರಿಂದ ಅನುಮಾನಗೊಂಡ ಚಿಕ್ಕಬಳ್ಳಾಪುರ ಖಾಸಗಿ ಆಸ್ಪತ್ರೆಯ ವೈದ್ಯರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿ ಆಧರಿಸಿ ಆಸ್ಪತ್ರೆಗೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ದೇವನಹಳ್ಳಿ ಖಾಸಗಿ ಆಸ್ಪತ್ರೆಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆಸ್ಪತ್ರೆಯಲ್ಲಿ ಮಹಿಳೆ ನೀಡಿರುವ ಆಧಾರ್ ಕಾರ್ಡ್ನಲ್ಲಿ ಹಾವೇರಿ ಮೂಲದ ವಿಳಾಸ ಪತ್ತೆಯಾಗಿದೆ. ಹೀಗಾಗಿ ಮಹಿಳೆಯನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕಿದೆ. ಸದ್ಯ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.



