*ಪತ್ನಿಯನ್ನೇ ಕೊಲೆಗೈದು ಶವವನ್ನು ಬೆಡ್ ಶೀಟ್ ನಲ್ಲಿ ಸುತ್ತಿಟ್ಟು ಪರಾರಿಯಾದ ಪತಿ*

ಪ್ರಗತಿವಾಹಿನಿ ಸುದ್ದಿ: ಪತಿಮಹಾಶಯನೊಬ್ಬ ಪತ್ನಿಯನ್ನೇ ಹತ್ಯೆಗೈದು ಶವವನ್ನು ಬೆಡ್ ಶೀಟ್ ನಲ್ಲಿ ಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಗೇರುಪಾಳ್ಯದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ರಿಯಾಕುಮಾರಿ ಹತ್ಯೆಯಾದವರು. ಇವರ ಪತಿ ಧೀರಜ್ ಕುಮಾರ್ ಪರಾರಿಯಾಗಿದ್ದಾನೆ. ಈತನೇ ಕೃತ್ಯ ಎಸಗಿ ಎಸ್ಕೇಪ್ ಆಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್.ಆರ್.ನಗರ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಲೆ ಪ್ರಕರಣ ದಾಖಲಿಸಿ, ಆರೋಪಿಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೇರುಪಾಳ್ಯದಲ್ಲಿರುವ ಲಕ್ಷ್ಮಣ್ ಎಂಬವರ ಮನೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಬಿಹಾರದ ಧೀರಜ್ ಕುಮಾರ್ ಹಾಗೂ ರಿಯಾ ಕುಮಾರಿ ದಂಪತಿ ಬಾಡಿಗೆಗೆ ವಾಸವಾಗಿದ್ದರು. ರಿಯಾ ಕುಮಾರಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಧೀರಜ್ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಇತ್ತೀಚಿಗೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ವೈಮನಸ್ಸು ಮೂಡಿತ್ತು. ಸ್ನೇಹಿತರು ದಂಪತಿಯನ್ನು ಸಮಾಧಾನ ಮಾಡಿ ಬುದ್ದಿ ಹೇಳಿದ್ದರು. ಆದಾಗ್ಯೂ ಹೊಂದಾಣಿಕೆಯಾಗದೆ ಮುನಿಸು ಮುಂದುವರೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕ್ಷುಲ್ಲಕ ವಿಚಾರಕ್ಕಾಗಿ ಜಗಳ ನಡೆದು ಈ ವೇಳೆ ಧೀರಜ್ ಪತ್ನಿಯನ್ನು ಕೊಲೆ ಮಾಡಿ ಬೆಡ್ ಶೀಟ್ನಲ್ಲಿ ಸುತ್ತಿ ಮನೆಯೊಳಗಡೆ ಇಟ್ಟು ಬಳಿಕ ಬಾಗಿಲು ಮುಚ್ಚಿ ಪರಾರಿ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ನಿಟ್ತಿನಲ್ಲಿ ತನಿಖೆ ಕೈಗೊಳ್ಳಲಾಗಿದೆ.



