*ಬೆಳಗಾವಿಯಲ್ಲಿ ಕಾರ್ಮಿಕ ರಾಜ್ಯ ವಿಮಾ ಸಂಸ್ಥೆಯ ಕಚೇರಿ ಸ್ಥಾಪಿಸುವಂತೆ ಕೇಂದ್ರ ಸಚಿವರಿಗೆ ಮನವಿ*

ಪ್ರಗತಿವಾಹಿನಿ ಸುದ್ದಿ: ಕಾರ್ಮಿಕ ರಾಜ್ಯ ವಿಮಾ ಸಂಸ್ಥೆಯ ವಿಭಾಗೀಯ/ಉಪ-ಪ್ರಾದೇಶಿಕ ಕಚೇರಿಯನ್ನು ಬೆಳಗಾವಿಯಲ್ಲಿ ಸ್ಥಾಪಿಸುವಂತೆ ಸಂಸದ ಜಗದೀಶ್ ಶೆಟ್ಟರ್ ಅವರು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ನವದೆಹಲಿಯ ಸಂಸದ ಭವನದಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದ ಜಗದೀಶ್ ಶೆಟ್ಟರ್, ಸ್ಥಾಪನಾ ಘಟಕಗಳು ಬೆಂಗಳೂರು ನಗರ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿದು ಬಂದಿದೆ. ಬೆಳಗಾವಿಯಲ್ಲಿ ಸುಮಾರು ಒಂದು ಲಕ್ಷ ಕಾರ್ಮಿಕ ವಿಮಾದಾರರು ಇದ್ದು, ಸದ್ಯ ಬೆಳಗಾವಿ ಕಾರ್ಮಿಕ ರಾಜ್ಯ ವಿಮಾ ಸಂಸ್ಥೆಯ ವ್ಯಾಪ್ತಿಯು ಹುಬ್ಬಳ್ಳಿ ಕಛೇರಿ ವ್ಯಾಪ್ತಿಗೆ ಬರುತ್ತಿದ್ದು, ಹೀಗಾಗಿ ಕಾರ್ಮಿಕರ ಕುಂದು ಕೊರತೆಗಳ ಪರಿಹಾರಕ್ಕಾಗಿ ಸುಮಾರು 120 ಕಿ.ಮೀ ದೂರದ ಹುಬ್ಬಳ್ಳಿಯ ಕಛೇರಿಗೆ ಭೇಟಿ ನೀಡಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆ ಕಾರ್ಮಿಕರ ಅನುಕೂಲಕ್ಕಾಗಿ ರಾಜ್ಯ ವಿಮಾ ಸಂಸ್ಥೆಯ ವಿಭಾಗೀಯ/ಉಪ-ಪ್ರಾದೇಶಿಕ ಕಚೇರಿಯನ್ನು ಬೆಳಗಾವಿಯಲ್ಲಿ ಸ್ಥಾಪಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಮ್ಮ ಬೇಡಿಕೆಯನ್ನು ಆಲಿಸಿದ ಕೇಂದ್ರ ಸಚಿವರು ಶೀಘ್ರದಲ್ಲಿ ಈ ವಿಷಯದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಜಗದೀಶ್ ಶೆಟ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




