*ಕಾಂಗ್ರೆಸ್ ಪಕ್ಷ ಬ್ರಿಟಿಷರಿಗೇ ಹೆದರಿಲ್ಲ; ಇನ್ನು ಬಿಜೆಪಿಯವರು ಯಾವ ಪುಟ್ಗೋಸಿ? ಸಚಿವ ಶಿವರಾಜ್ ತಂಗಡಗಿ ಕಿಡಿ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಪಕ್ಷ ಬ್ರಿಟಿಷರಿಗೇ ಹೆದರಿಲ್ಲ. ಇನ್ನು ಬಿಜೆಪಿಯವರು ಯಾವ ಪುಟ್ಗೋಸಿ? ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ಅವರು ಕಿಡಿ ಕಾರಿದ್ದಾರೆ.
ಬೆಂಗಳೂರಿನ ತಮ್ಮ ಗೃಹ ಕಚೇರಿ ಬಳಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಯಾರಿಗೂ ಹೆದರಿ ಬಿ.ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಪಕ್ಷಕ್ಕೆ ಮುಜುಗರವಾಗಬಾರದು ಹಾಗೂ ಸ್ವಾಭಿಮಾನಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ತಾಕತ್ತಿದ್ದರೆ ಜನತಾ ನ್ಯಾಯಾಲಯದ ಮುಂದೆ ಬರಲಿ ಎಂದು ನಾಗೇಂದ್ರ ಅವರು ಬಿಜೆಪಿ ಅವರಿಗೆ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಚುನಾವಣೆಗೆ ಹೆದರಲ್ಲ, ಚುನಾವಣೆಗೆ ಬರುವ ತಾಕತ್ತು ರಾಜ್ಯ ಬಿಜೆಪಿ ನಾಯಕರಿಗೆ ಇದೆಯೇ? ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಯಾವ ಯಾವ ಪ್ರಕರಣಗಳು ಇದೆ ಎಂಬುದು ಪ್ರಧಾನಿ ಅವರಿಗೆ ತಿಳಿದಿಲ್ಲವೇ? ಶಾಸಕ ಜನಾರ್ಧನ್ ರೆಡ್ಡಿ ಅವರ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಯಾವ ತೀರ್ಪು ನೀಡಿತ್ತು ಎಂಬುದು ತಿಳಿದಿಲ್ಲವೇ? ಬಿಜೆಪಿಯವರು ಇವರಿಬ್ಬರ ರಾಜೀನಾಮೆಯನ್ನು ಪಡೆಯುತ್ತಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಅಷ್ಟು ಮಾತ್ರವಲ್ಲ ದೇಶದಲ್ಲಿನ ಒಂದಿಬ್ಬರು ಬಿಜೆಪಿಗರ ಮೇಲೆ ಅಚ್ಯಾಚಾರದ ಆರೋಪ ಇದೆ ಎಂದು ಸಚಿವರು ಆರೋಪಿಸಿದರು.
ಬಿಜೆಪಿ ನಾಟಕ ಕಂಪನಿ ಇದ್ದಂತೆ:
ನಾಗೇಂದ್ರ ಅವರಿಗೆ ವಿಶೇಷ ತನಿಖಾ ತಂಡ ಕ್ಲೀನ್ ಚೀಟ್ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಪುನಃ ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳಲಾಗಿತ್ತು. ಆದರೆ ನೀಟ್ ವಿಚಾರದಲ್ಲಿ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಟ್ಟ ಕಾರಣಕ್ಕೆ ಜಿದ್ದಿನಿಂದ ರಾಜ್ಯದಲ್ಲಿ ಸದನ ನಡೆಯದಂತೆ ಬಿಜೆಪಿಯವರು ರಾಜಕೀಯ ನಾಟಕ ಮಾಡಿದರು.
ಕೇಂದ್ರದಿಂದ ಹಿಡಿದು ರಾಜ್ಯದವರೆಗಿನ ಎಲ್ಲಾ ಬಿಜೆಪಿಗರು ನಾಟಕ ಕಂಪನಿಯವರು. ನಾಯಕ ಸಮುದಾಯದವರು ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಬಿಜೆಪಿಗರು. ಇವರಿಂದ ನಾವು ಏನನ್ನು ನಿರೀಕ್ಷೆ ಮಾಡಲು ಸಾಧ್ಯ. ಬಿಜೆಪಿಯವರು ದಲಿತ ಸಮುದಾಯದ ಏಳ್ಗೆಯನ್ನು ಸಹಿಸಲ್ಲ. ನಾಗೇಂದ್ರ ವಿರುದ್ಧ ಅದೇ ನಡೆಯನ್ನು ಅನುಸರಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿದರು. ದಲಿತ ಸಮುದಾಯದವರ ಕಣ್ಣೊರೆಸುವ ಸಲುವಾಗಿ ಛಲವಾದಿ ನಾರಾಯಣ ಸ್ವಾಮಿ ಅವರನ್ನು ವಿಧಾನಪರಿಷತ್ ವಿಪಕ್ಷ ನಾಯಕನ್ನಾಗಿ ಮಾಡಿದ್ದಾರೆ. ಮುಂದೆ ನಾರಾಯಣ ಸ್ವಾಮಿ ಅವರ ಖುರ್ಚಿಯನ್ನು ಶುದ್ಧೀಕರಣ ಮಾಡುವುದರಲ್ಲಿ ಯಾವುದೇ ಆಶ್ಚರ್ಯ ನನಗಿಲ್ಲ ಎಂದರು.
ಪಶ್ಚಾತ್ತಾಪದ ಯಾತ್ರೆ:
ಮುಡಾ ಪ್ರಕರಣದಲ್ಲಿ ಬಿಜೆಪಿಯವರು ಪಾದಯಾತ್ರೆ ಕೈಗೊಂಡು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆಗೆ ಯತ್ನಿಸಿದರು. ಕೊನೆಗೆ ಪ್ರಕರಣ ಏನಾಯಿತು ಎಂಬುದು ರಾಜ್ಯದ ಜನತೆಗೆ ತಿಳಿದಿದೆ. ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರು ಗಣಿಲೂಟಿ ಮಾಡಿದವರು. ಇವರ ನೇತೃತ್ವದಲ್ಲಿ ಬಿಜೆಪಿ
ಪಾದಯಾತ್ರೆ ಕೈಗೊಂಡಿದ್ದು, ಇದು ನಿಜಕ್ಕೂ ಪಶ್ಚಾತ್ತಾಪದ ಯಾತ್ರೆ ಎಂದು ಲೇವಡಿ ಮಾಡಿದರು.
ಇನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವೇಗವನ್ನು ಬಿಜೆಪಿಯವರು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.




