
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಾನಾಪುರ ತಾಲ್ಲೂಕಿನ ಲಕ್ಕೇಬೈಲ ಗ್ರಾಮದಿಂದ ತೋಪಿನಕಟ್ಟಿ ಮಾರ್ಗವಾಗಿ ಬೆಳಗಾವಿಯತ್ತ ಹೊರಟಿದ್ದ ದ್ವಿಚಕ್ರ ವಾಹನಕ್ಕೆ ಎದುರಿನಿಂದ ವೇಗವಾಗಿ ಬಂದ ನಾಲ್ಕು ಚಕ್ರಗಳ ಅಪರಿಚಿತ ವಾಹನ ಡಿಕ್ಕಿ ಹೊಡಿದ ಪರಿಣಾಮ ದ್ವಿ ಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ತಂದೆ-ಮಗ ಇಬ್ಬರೂ ಸಾವನ್ನಪ್ಪಿದ ಘಟನೆ ಜಾಂಬೋಟಿ-ಜತ್ತ ರಾಜ್ಯ ಹೆದ್ದಾರಿಯ ಲೋಕೋಳಿ ಕ್ರಾಸ್ ಬಳಿ ಸಂಭವಿಸಿದೆ.
ಮೃತರನ್ನು ಲಕ್ಕೇಬೈಲ ಗ್ರಾಮದ ಅಶೋಕ ನಾಂದೂರಕರ (60) ಮತ್ತು ಅವರ ಪುತ್ರ ಪುಂಡಲೀಕ (23) ಎಂದು ಗುರುತಿಸಲಾಗಿದೆ. ಪುಂಡಲೀಕ ಬೆಳಗಾವಿಯ ಉದ್ಯಮಬಾಗದಲ್ಲಿ ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿದ್ದು, ಅವರ ತಂದೆ ಅಶೋಕ ಬೆಳಗಾವಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದರು.
ಎಂದಿನಂತೆ ಅಪ್ಪ-ಮಗ ಇಬ್ಬರೂ ಬೆಳಗಾವಿಗೆ ಕೆಲಸಕ್ಕೆ ಹೊರಟಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದ್ದು, ಅಪಘಾತದ ಬಳಿಕ ವಾಹನ ಸವಾರ ವಾಹನದ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಡಿಕ್ಕಿಯ ರಭಸಕ್ಕೆ ಪುಂಡಲೀಕ ಸ್ಥಳದಲ್ಲೇ ಮೃತಪಟ್ಟಿದ್ದು, ಅಶೋಕ ಬೆಳಗಾವಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




