Belagavi NewsBelgaum NewsKannada NewsKarnataka NewsPolitics
*ಸಿದ್ದರಾಮಯ್ಯ ಅವರ ಶಾಪ ಸತೀಶ್ಗೆ ತಟ್ಟಿದೆ: ಬಸನಗೌಡ ಪಾಟೀಲ್ ಯತ್ನಾಳ್*

ಪ್ರಗತಿವಾಹಿನಿ ಸುದ್ದಿ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಸಂಬಂಧ 36 ಶಾಸಕರ ಸಹಿ ಸಂಗ್ರಹಿಸಿ ನೀಡಿದವರಲ್ಲಿ ಸತೀಶ್ ಜಾರಕಿಹೊಳಿ ಪ್ರಮುಖರು ಎಂದು ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಸಿದ್ದರಾಮಯ್ಯ ಅವರನ್ನು ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಹಾಗೂ ಜಮೀರ್ ಅಹ್ಮದ್ ಬೆಂಬಲಿಸಲಿಲ್ಲ ಎಂದು ಯತ್ನಾಳ್ ಆರೋಪಿಸಿದರು. ಸತೀಶ್ಗೆ ರಾಜಕೀಯವಾಗಿ ನೆರವಾಗಬೇಕೆಂಬ ಉದ್ದೇಶ ಸಿದ್ದರಾಮಯ್ಯ ಅವರಿಗಿತ್ತು. ಆದರೆ ಅವರಿಗೆ ವಿರುದ್ಧವಾಗಿ ನಡೆದುಕೊಂಡ ಕಾರಣವೇ ಇದೀಗ ಸಂಕಷ್ಟ ಎದುರಾಗುತ್ತಿದೆ ಎಂದು ಟೀಕಿಸಿದರು.
ಸತೀಶ್ ಜಾರಕಿಹೊಳಿ ವಿರುದ್ಧದ ಇಡಿ ದಾಳಿಯ ಹಿಂದೆ ಕಾಂಗ್ರೆಸ್ನವರೇ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ ಯತ್ನಾಳ್, ಪಕ್ಷದೊಳಗೆ ಅವರ ವಿರುದ್ಧ ಅಸಮಾಧಾನವಿದೆ, ವಾಲ್ಮೀಕಿ ಸಮುದಾಯದಿಂದ ಹೊಸ ನಾಯಕತ್ವ ಬೆಳೆಯುತ್ತಿರುವುದನ್ನು ಕೆಲವರು ಸಹಿಸದೆ ಇಂತಹ ಬೆಳವಣಿಗೆಗಳಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.


