ಕೊರೊನಾ ವೈರಸ್ ತಡೆಗೆ ಕೇಂದ್ರದಿಂದ ಹಣ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೋನಾ ವೈರಸ್​ ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿರುವ ಕೇಂದ್ರ ಸರ್ಕಾರ ವೈರಸ್ ತಡೆಗೆ 84 ಕೋಟಿ ರೂ. ಅನುದಾನ ಘೋಷಿಸಿದೆ ಎಂದು ಕಂದಾಯ ಸಚಿವ ಆರ್​. ಅಶೋಕ್ ತಿಳಿಸಿದ್ದಾರೆ.

ಕೊರೋನಾ ಸೋಂಕಿನ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಪ್ರಕೃತಿ ವಿಕೋಪ ನಿಧಿಯಿಂದ ಮೀಸಲಿಟ್ಟಿರುವ ಹಣವನ್ನು ನೀಡುತ್ತಿದೆ. ಈ ಪೈಕಿ ರಾಜ್ಯಕ್ಕೆ 84 ಕೋಟಿ ರೂ ಸಂದಾಯವಾಗಿದೆ. ಈ ಹಣವನ್ನು ಕರೋನಾ ನಿಯಂತ್ರಣಕ್ಕೆ ಬೇಕಾದ ಔಷಧ, ಸ್ವಚ್ಚತೆ, ಸ್ಯಾನಿಟೇಷನ್, ಉಪಕರಣಗಳ ಖರೀದಿ, ಪೊಲೀಸ್ ಭದ್ರತೆ ಹಾಗೂ ಅಗ್ನಿಶಾಮಕ ಇಲಾಖೆಗೆ ಬಳಕೆ ಮಾಡುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಇಂತಹ ಸಂದರ್ಭದಲ್ಲಿ ಯಾವಾಗಲೂ ರಾಜ್ಯ ಸರ್ಕಾರವೇ ಹಣ ಖರ್ಚು ಮಾಡಬೇಕಿತ್ತು. ಆದರೆ, ಮೊದಲ ಬಾರಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಎಸ್​ಡಿಆರ್​ಎಫ್​ ಮೀಸಲು ಹಣದಲ್ಲಿ ಶೇ.25 ರಷ್ಟು ಹಣ ಬಳಸಲು ಕೇಂದ್ರ ಅನುಮತಿ ನೀಡಿದೆ. ಕರೋನಾ ವೈರಸ್ ರಾಷ್ಟ್ರೀಯ ವಿಪತ್ತು ಎಂಬ ಕಾರಣಕ್ಕೆ ಕೇಂದ್ರದ ಹಣ ಬಳಕೆಗೆ ಅನುಮತಿ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಜತೆ ಸಭೆ ನಡೆಸಿ ಹಣ ಬಳಕೆ ಕುರಿತು ಎಲ್ಲಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button