Latest

ಅನಾವಶ್ಯಕವಾಗಿ ಓಡಾಡುವ ವಾಹನಗಳ ಪರವಾನಗಿ ರದ್ದು

ಪ್ರಗತಿವಾಹಿನಿ ಸುದ್ದಿ, ಕಾರವಾರ -: ಕೋವಿಡ್-೧೯ ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇದನ್ನು ಉಲ್ಲಂಘಿಸಿ ಅನಗತ್ಯವಾಗಿ ವಾಹನಗಳನ್ನು ತೆಗೆದುಕೊಂಡು ಓಡಾಡುವವರ ವಾಹನದ ಪರವಾನಿಗೆ ಮತ್ತು ನೊಂದಣಿಯನ್ನು ರದ್ದುಗೊಳಿಸಲಾಗುವುದು ಎಂದು ಕಾರವಾರ ಜಿಲ್ಲಾಧಿಕರಿ ಡಾ.ಕೆ ಹರೀಶಕುಮಾರ ಅವರು ಎಚ್ಚರಿಕೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಬುಧವಾರ ಹಮ್ಮಿಕೊಂಡಿದ್ದ ವಾರ್ತಾ ಸ್ಪಂದನ-ನೇರ ಪೋನ್‌ಇನ್ ಕಾರ್ಯಕ್ರಮದಲ್ಲಿ ಪೋನ್ ಕರೆಗಳಿಗೆ ಉತ್ತರಿಸಿದ ಅವರು ಜನರ ಆರೋಗ್ಯದ ಹಿತದೃಷ್ಟಿಯಿಂದ ೨೧ ದಿನಗಳ ವರೆಗೆ ಜನರು ಮನೆಯಲ್ಲಿಯೇ ಇರುವಂತೆ ಸರಕಾರ ಈ ಕ್ರಮ ಕೈಗೊಂಡಿದ್ದು, ಜನರು ಸ್ವಯಂಪ್ರೇರಿತರಾಗಿ ತಮ್ಮ ರಕ್ಷಣೆಯೊಂದಿಗೆ ಇನ್ನೊಬ್ಬರ ಆರೋಗ್ಯದ ರಕ್ಷಣೆಗಾಗಿ ಅನಾವಶ್ಯಕವಾಗಿ ವಾಹನಗಳನ್ನ ತೆಗೆದುಕೊಂಡು ತಿರುಗಾಡದೆ ಮನೆಯಲ್ಲೇ ಇರಬೇಕೆಂದು ತಿಳಿಸಿದರು.
ಆರೋಗ್ಯವಂತ ವ್ಯಕ್ತಿ ಮತ್ತು ಮನೆಯಲ್ಲಿ ಇರುವವರಿಗೆ ಯಾವುದೇ ಮಾಸ್ಕ್‌ಗಳ ಅವಶ್ಯಕತೆ ಇರುವುದಿಲ್ಲಾ. ಶುಚಿತ್ವಕ್ಕೆ ಒತ್ತು ನೀಡಿದರೆ ಸಾಕು, ಅಕ್ಕ ಪಕ್ಕದ ಮನೆಗಳಿಗೆ ಹೊರಗಡೆಯಿಂದ ಬಂದವರನ್ನು ಅಸ್ಪ್ರಶ್ಯರಂತೆ ಕಾಣದೆ ೧೪ ದಿನಗಳವರೆಗೆ ನಿಗಾದಲ್ಲಿ ಇರುವಂತೆ ತಿಳುವಳಿಕೆ ನೀಡಿರಿ. ಜಿಲ್ಲೆಯಲ್ಲಿ ಜೀವನಾವಶ್ಯಕ ಸಾಮಗ್ರಿಗಳ ಸಂಗ್ರಹವಿದ್ದು, ಅಗತ್ಯ ಬಿದ್ದಲ್ಲಿ ಮನೆ ಮನೆಗೆ ಪೂರೈಸುವ ವ್ಯವಸ್ಥೆಯನ್ನು ಕೂಡಾ ಜಿಲ್ಲಾಡಳಿತ ಮಾಡುತ್ತಿದ್ದು ಜನರು ಯಾವುದೇ ಕಾರಣಕ್ಕೂ ಭಯಭೀತರಾಗಬಾರದು ಎಂದು ಹೇಳಿದರು.
ಜನತೆ ದುಸ್ಸಾಹಸ ಮಾಡಿಕೊಂಡು ಊರಿಗೆ ಹೋಗುವ ಯೋಚನೆ ಇಟ್ಟುಕೊಳ್ಳದೇ ಮನೆಯಲ್ಲಿಯೇ ಇರಬೇಕು. ಜಿಲ್ಲೆಯ ಜನರು ಪ್ರಜ್ಞಾವಂತರಾಗಿದ್ದು, ಸಂಯಮದಿಂದ ವರ್ತಿಸಿ ಹಾಗೂ ಇತರರಿಗೆ ತಿಳುವಳಿಕೆ ನೀಡುವಂತಹ ಕಾರ್ಯವಾಗಲಿ ಎಂದರು.
ಸಿದ್ದಾಪುರ ತಾಲೂಕಿನ ಕುರವಂತೆ,  ಬಿಳಗಿ ಗ್ರಾಮಗಲ್ಲಿ ಲಾಕ್‌ಡೌನ್ ಆಗುತ್ತಿಲ್ಲವೆಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ ರೋಶನ್ ಅವರು ಗ್ರಾಮೀಣ ಪ್ರದೇಶಗಳಿಗೂ ಕೂಡಾ ಲಾಕ್‌ಡೌನ್ ಅನ್ವಹಿಸುತ್ತಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ವಿವಿಧ ಪ್ರದೇಶದ ಜನರಿಂದ ಪೋನ್ ಕರೆ :

ಶಿರಸಿಯ ಅಭಿಶೇಕ್ ಶೆಟ್ಟಿ, ದಾಮೋದರ್ ನಾಯಕ್, ವೇಂಕಟೀಶ್ ಎಚ್, ವಿಶಾಖಾ ಭಟ್, ಕಾರವಾರದ ಶಾರದಾ ಕಟ್ಟಿಮನಿ, ಕಾವ್ಯ ಎಂ, ನಾಗೇಂದ್ರ, ಭಟ್ಕಳದ ಮಂಜು ನಾಯ್ಕ್, ಮಹೇಶ್ ಭಟ್, ಹುಸೇನ್ ಖಾನ್, ಕುಮಟಾದ ಸೋಮನಾಥ್ ಶೇಟ್, ವಿನೋದ್, ರಾಮಚಂದ್ರ ಗಜಾನನ ನಾಯ್ಕ್, ಗಣಪತಿ ನಾಯ್ಕ್, ಸಿದ್ದಾಪುರದ ಆದರ್ಶ ಪೈ ದಾಂಡೇಲಿಯ ತ್ರಿಮೂರ್ತಿ ಸೇರಿದಂತೆ ಇನ್ನೂ ಹಲವಾರು ಜರು ದೂರವಾಣಿ ಕರೆಮಾಡಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು.

ಪ್ರಶ್ನೆಗಳ ಸುರಿಮಳೆ :

ಇಪ್ಪತೈದಕ್ಕಿಂತ ಹೆಚ್ಚು ಪೋನ್ ಕರೆಗಳು ಬಂದಿದ್ದು, ಪ್ರಮುಖವಾಗಿ ಕೇಳಿ ಬಂದಂತಹ ಪ್ರಶ್ನೆಗಳೆಂದರೆ, ಜಿಲ್ಲೆಯಲ್ಲಿ ಚಿಕನ್ ಮಟನ್ ಶಾಪ್ ತೆರೆಯಲು ಏಕೆ ಅನುಮತಿ ನೀಡಿಲ್ಲಾ?, ಸಹಕಾರಿ ಸಂಘಗಳ ಸಾಲದ ಕಂತು ತುಂಬುವುದು ಹೇಗೆ, ಜೀವನಾವಶ್ಯಕ ವಸ್ತುಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡಲು ಅನುಮತಿ ಇದೆಯಾ? , ಜಿಲ್ಲೆಗೆ ಬರುವವರನ್ನು ತಡೆಯಲು ಏಕೆ ಕ್ರಮ ಕೈಗೊಂಡಿಲ್ಲ? , ಬೆಂಗಳೂರಿನಿಂದ ಬಂದವರಿಗೆ ಏನು ವ್ಯವಸ್ಥೆ ಮಾಡಬೇಕು? ಕ್ರಿಕೇಟ್ ಆಡಲು ಹೋಗುವ ಮಕ್ಕಳನ್ನು ಹೇಗೆ ತಡೆಹಿಡಿಯಬೇಕು? ಕೆಲವುಕಡೆ ಇನ್ನು ಲಾಕ್‌ಡೌನ್ ಆಗಿಲ್ಲಾ? ಮನೆಯಲ್ಲಿರುವವರಿಗೂ ಮಾಸ್ಕ್ ಅಗತ್ಯತೆ ಇದೆಯಾ ಎಂಬಂತಹ ಇತ್ಯಾದಿ ಪ್ರಶ್ನೆಗಳನ್ನು ಸಾರ್ವಜನಿಕರು ನೇರವಾಗಿ ಕೇಳುವ ಮೂಲಕ ಸಂದೇಹಗಳನ್ನು ಬಗೆ ಹರಿಸಿಕೊಂಡರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button