ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿಶ್ವೇಶ್ವರಯ್ಯ ತಾ೦ತ್ರಿಕ ವಿಶ್ವವಿದ್ಯಾಲಯದಲ್ಲಿ ಇಂದು ಮತ್ತು ನಾಳೆ ೪೮ನೇ ಐಎಸ್ಟಿಇ ರಾಷ್ಟ್ರೀಯ ವಾರ್ಷಿಕ ಭೋಧಕರ ಸಮ್ಮೇಳನವನ್ನು ಏರ್ಪಡಿಸಲಾಗಿದೆ. ಟೆಕ್ನಿಕಲ್ ಎಜ್ಯುಕೇಷನ್ ಫಾರ್ ಸ್ಮಾರ್ಟ್ ಸೊಸೈಟಿ ಸಮ್ಮೇಳನದ ಮುಖ್ಯ ವಿಷಯವಾಗಿದೆ.
ಸಮ್ಮೇಳನದ ಉದ್ಘಾಟನಾ ಸಮಾರ೦ಭವು ಇಂದು ಜರುಗಿತು. ಡಾ. ಪ್ರತಾಪಸಿನ್ಹಾ ಕೆ. ದೇಸಾಯಿ, ಅಧ್ಯಕ್ಷರು, ಐಎಸ್ಟಿಇ, ನವದೆಹಲಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಐಎಸ್ಟಿಇ, ಶಿಕ್ಷಣ ತಜ್ಞರು, ನೀತಿ ನಿರೂಪಕರಿಗೆ ಹಾಗೂ ಸಂಬಂಧಿಸಿದ ಎಲ್ಲ ಸಹಭಾಗೀದಾರರಿಗೆ ತಾಂತ್ರಿಕ ಶಿಕ್ಷಣದ ಮುಂದಿರುವ ಸವಾಲುಗಳ ಬಗ್ಗೆ ಚರ್ಚಿಸಲು ವೇದಿಕೆಯಾಗಿದೆ. ಪ್ರಸ್ತುತ ಕೈಗಾರಿಕೆಗಳನ್ನು ಸ್ಥಾಪಿಸಲು ತಾಂತ್ರಿಕತೆ ಅತ್ಯವಶ್ಯಕವಾಗಿದ್ದು, ಕೈಗಾರಿಕೆಗಳ ಬೆಳವಣಿಗೆಗಳ ಅವಶ್ಯಕತೆಗಾಗಿ ತಂತ್ರಜ್ಞಾನ ಅತ್ಯಂತ ವೇಗಗತಿಯಲ್ಲಿ ಬದಲಾವಣೆಯಾಗುತ್ತಿದೆ. ನಮ್ಮ ದೇಶದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಗುಣಮಟ್ಟ ಅತ್ಯುತ್ತಮವಾಗಿದ್ದು, ಅವರನ್ನು ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವಂತೆ ನಮ್ಮ ಭೋದಕರು ಪ್ರೇರೇಪಿಸಬೇಕಾಗಿದೆ ಎಂದು ಹೇಳಿದರು.
ಡಾ. ಬಿ. ಆರ್. ಶರ್ಮಾ, ಉಪಾಧ್ಯಕ್ಷರು, ಐಎಸ್ಟಿಇ, ನವದೆಹಲಿ ಇವರು ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ರೂಪಿಸುವಲ್ಲಿ ಭೋದಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿತಾವಿ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಮಾತನಾಡಿ, ಭೋದಕರು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಸಿಕೊಂಡು ನಿರಂತರ ಅಧ್ಯಯನ ಮಾಡಿ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಬೇಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಉತ್ತೇಜನ ನೀಡಬೇಕು ಎಂದು ಹೇಳಿದರು.
ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಭೋದನೆಗಾಗಿ ಅವಶ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳಗಳನ್ನು ಒದಗಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಡಾ. ಜಗದೀಶ ಪಟೇಲ, ಐಎಸ್ಟಿಇ ಗುಜರಾತ ವಿಭಾಗ, ಹೆಚ್. ಯು. ತಳವಾರ, ನಿರ್ದೇಶಕರು ತಾಂತ್ರಿಕ ಶಿಕ್ಷಣ ಮಂಡಳಿ, ಕರ್ನಾಟಕ ಸರ್ಕಾರ ಹಾಗೂ ಡಾ. ಎಸ್. ಶಶಿಧರ, ಕಾರ್ಯಕಾರಿ ಮಡಳಿ ಸದಸ್ಯರು, ಐಎಸ್ಟಿಇ ಇವರಿಗೆ ಐಎಸ್ಟಿಇ ಫೆಲೋಷಿಪ್ ನೀಡಿ ಗೌರವಿಸಲಾಯಿತು.
ಹೆಚ್. ಯು ತಳವಾರ ಮಾತನಾಡಿ, ಐಎಸ್ಟಿಇ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಪ್ರೋ ಸಂಸ್ಥೆಯ ಸೂರ್ಯ ಪ್ರಕಾಶ ಮಹಾಪಾತ್ರಾ, ಮುಖ್ಯ ಭಾಷಣ ಮಾಡಿದರು. ಡಾ. ಸಿ. ಕೆ. ಸುಬ್ರರಾಯ, ಛೇರ್ಮನ್, ಐಎಸ್ಟಿಇ ಕರ್ನಾಟಕ ವಿಭಾಗ ಸ್ವಾಗತಿಸಿದರು. ವಿತಾವಿ ಪ್ರಭಾರಿ ಕುಲಸಚಿವರಾದ ಡಾ. ಸತೀಶ ಅಣ್ಣಿಗೇರಿ, ಐಎಸ್ಟಿಇ ಕಾರ್ಯಕಾರಿ ಕಾರ್ಯದರ್ಶಿಗಳಾದ ಡಾ. ವಿಜಯ ಡಿ. ವೈದ್ಯ, ಐಎಸ್ಟಿಇ ಖಜಾಂಚಿ ಡಾ. ಟಿ. ಎಸ್. ಇಂದುಮತಿ ಹಾಗೂ ಸಮ್ಮೇಳನದ ಕಾರ್ಯದರ್ಶಿಗಳಾದ ಡಾ. ಆನಂದ ವಿ. ಶಿವಾಪುರ ಮತ್ತು ಡಾ. ಎನ್. ಡಿ. ಬಿರ್ಜೆ ವೇದಿಕೆ ಮೇಲಿದ್ದರು.
ವಿತಾವಿ ಕಾರ್ಯಕಾರಿ ಮಂಡಳಿ ಹಾಗೂ ವಿದ್ಯಾ ವಿದಾನ ಮಂಡಳಿ ಸದಸ್ಯರು, ಐಎಸ್ಟಿಇ ಕಾರ್ಯಕಾರಿ ಮಂಡಳಿ ಸದಸ್ಯರು, ತಾಂತ್ರಿಕ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ಉದ್ಯಮ ರಂಗದ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿದ್ದರು.
ಈ ಸಂದರ್ಭದಲ್ಲಿ ಐಎಸ್ಟಿಇ ವತಿಯಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ೨೦೧೮ರ ಸಾಲಿನ ಅತ್ಯುತ್ತಮ ತಾಂತ್ರಿಕ ವಿಶ್ವವಿದ್ಯಾಯವೆಂದು ಗುರುತಿಸಿ ಕೆಐಐಟಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎರಡು ದಿನಗಳ ವರೆಗೆ ನಡೆಯುವ ಸಮ್ಮೇಳನದಲ್ಲಿ ಗುಂಪು ಚರ್ಚೆ, ಪ್ರಬಂಧ ಮಂಡನೆ, ಆಹ್ವಾನಿತ ಉಪನ್ಯಾಸಗಳು ನಡೆಯಲಿವೆ. ದೇಶದ ವಿವಿಧ ಭಾಗಗಳಿಂದ ಅಂದಾಜು ಸಾವಿರ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.