
ಸಿಎಂ ಬದಲಾವಣೆ ನಿಶ್ಚಿತ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಕೂಡ ಹೊರಕ್ಕೆ – ನಳೀನ್ ಕುಮಾರ್ ಕಟೀಲ್ ಆಡಿಯೋ ಬಹಿರಂಗ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಕೆಳಗಿಳಿಯುವುದು ನಿಶ್ಚಿತವಾಗಿದ್ದು ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ,ಈಶ್ವರಪ್ಪ ಅವರನ್ನು ಕೂಡ ಹೊರಗಿಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಮಾತನಾಡಿದ್ದಾರೆನ್ನಲಾದ ಆಡಿಯೋ ಒಂದು ಬಹಿರಂಗವಾಗಿದೆ.
ತಮ್ಮ ಅಪ್ತರ ಬಳಿ ತುಳು ಭಾಷೆಯಲ್ಲಿ ಮಾತುಕತೆ ನಡೆಸಿರುವ ನಳೀನ್ ಕುಮಾರ್ ಕಟೀಲ್ ಅವರು, ಈ ಸಂಗತಿಯನ್ನು ಬಹಿರಂಗಪಡಿಸಿರುವ ರೀತಿ ಯಡಿಯೂರಪ್ಪ ಅವರ ಪದಚ್ಯುತಿಯ ಸುಳಿವು ನೀಡಿದೆಯಲ್ಲದೆ ಸಧ್ಯದಲ್ಲೇ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಎಂಬುದನ್ನು ಖಚಿತಪಡಿಸಿದಂತಾಗಿದೆ.
ಈ ಸಂಬಂಧದ ಆಡಿಯೋ ಬಹಿರಂಗವಾಗಿದ್ದು,ಯಡಿಯೂರಪ್ಪ ಅವರ ಜಾಗಕ್ಕೆ ಮೂವರ ಪೈಕಿ ಒಬ್ಬರು ಬರಲಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ಸುಳಿವು ನೀಡಿದ್ದಾರೆ. ಆದರೆ ಆ ಮೂವರು ಯಾರು ಎನ್ನುವುದನ್ನು ಹೇಳಿಲ್ಲ. ಯಾರೇ ಆದರೂ ನಮ್ಮವರೇ ಆಗಲಿದ್ದಾರೆ ಎಂದೂ ಹೇಳಿದ್ದಾರೆ.
ತಮ್ಮ ಆಪ್ತರ ಬಳಿ ಕಟೀಲ್ ಅವರು ತುಳುವಿನಲ್ಲಿ ಮಾತನಾಡಿದ್ದು:ಯಾರಿಗೂ ಹೇಳಬೇಡ, ಶೆಟ್ಟರ್, ಈಶ್ವರಪ್ಪ ಮತ್ತವರ ಟೀಮು ಹೊರಬೀಳಲಿದ್ದು ಆನಂತರ ನಾವು ಹೇಳಿದಂತೆಯೇ ನಡೆಯಲಿದೆ.
ಯಾರೇ ಬಂದರೂ ನಮಗೆ ಬೇಕಾದವರೇ ಆಗಿರಲಿದ್ದು ಮೂರು ಜನರ ಹೆಸರು ಹೈಕಮಾಂಡ್ ಗಮನದಲ್ಲಿದೆ ಎಂದಿರುವ ನಳೀನ್ ಕುಮಾರ್ ಕಟೀಲ್ ಅವರು, ಆ ಮೂಲಕ ನಾಯಕತ್ವ ಬದಲಾವಣೆಯಿಲ್ಲ ಎಂಬ ಯಡಿಯೂರಪ್ಪ ಅವರ ಆತ್ಮವಿಶ್ವಾಸಕ್ಕೆ ಬಿಗ್ ಷಾಕ್ ನೀಡಿದ್ದಾರೆ.
ಅದೇ ಕಾಲಕ್ಕೆ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿರುವ ಮಾಜಿ ಮುಖ್ಯಮಂತ್ರಿ,ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್,ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಂಡ್ ಟೀಮು ಹೊರಬೀಳಲಿದೆ ಎಂಬ ಅಂಶವನ್ನೂ ಕಟೀಲ್ ಬಹಿರಂಗಪಡಿಸಿರುವುದು ಕುತೂಹಲಕಾರಿಯಾಗಿದೆ.
ಇದು ನಳಿನ್ ಕುಮಾರ ಕಟೀಲು ಅವರ ಧ್ವನಿಯೇ ಹೌದೇ ಎನ್ನುವುದು ಖಚಿತವಾಗಬೇಕಿದೆ.
ಆದರೆ, ಈ ಆಡಿಯೋ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ನಮ್ಮಲ್ಲಿ, ನನ್ನ ಹಂತದಲ್ಲಿ ಸಿಎಂ ಬದಲಾವಣೆ ಚರ್ಚೆಯೇ ಇಲ್ಲ ಎಂದು ನಳಿನ್ ಕುಮಾರ ಕಟೀಲು ತಿಳಿಸಿದ್ದಾರೆ.
ಇದಕ್ಕೂ , ನನಗೂ ಸಂಬಂಧವಿಲ್ಲ. ಇದರಲ್ಲಿ ನನ್ನ ಪಾತ್ರವಿಲ್ಲ. ತನಿಖೆಯಾಗಿ ಬಹಿರಂಗವಾಗಲಿ. ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಮ್ಮಲ್ಲಿ ಯಾವುದೇ ಚರ್ಚೆ ಇಲ್ಲ. ಕೆಲವರ ಬಗ್ಗೆ ಅನುಮಾನವಿದೆ. ಆದರೆ ಈ ಹಂತದಲ್ಲಿ ಬಹಿರಂಗ ಪಡಿಸುವುದು ಸರಿಯಲ್ಲ ಎಂದೂ ಕಟೀಲು ತಿಳಿಸಿದ್ದಾರೆ.