ದರ್ಶನ್ ಬೆಂಬಲಿಗರಿಂದ ಬೆದರಿಕೆ; ಅಶ್ಲೀಲ ಸಂದೇಶ ರವಾನೆ; ಮತ್ತೆ ಕಿಡಿಕಾರಿದ ಇಂದ್ರಜಿತ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರತಿ 30 ಸೆಕೆಂಡ್ ಗೆ ಒಮ್ಮೆ ನಟ ದರ್ಶನ್ ಬೆಂಬಲಿಗರಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಅಶ್ಲೀಲ ಮೆಸೆಜ್ ಗಳನ್ನು ಕಳುಹಿಸಲಾಗುತ್ತಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದ್ರಜಿತ್ ಲಂಕೇಶ್, ದರ್ಶನ್ ಹಿಂಬಾಲಕರ ವಿರುದ್ಧ ಆರೋಪ ಮಾದಿದ್ದಾರೆ. ದರ್ಶನ್ ಹಿಂಬಾಲಕರಾಗಿರುವ 30 ಜನರ ಗ್ಯಾಂಗ್ ತನಗೆ ದಿನದ 24ಗಂಟೆಯೂ ಪ್ರತಿ 30 ಸೆಕೆಂಡ್ ಗೊಮ್ಮೆ ನಿರಂತರವಾಗಿ ಕರೆ ಮಾಡುತ್ತಿದ್ದು, ಕರೆ ಸ್ವೀಕರಿಸಿದ ತಕ್ಷಣ ಕಟ್ ಮಾಡುತ್ತಿದ್ದಾರೆ. ಬೆದರಿಕೆ ಕರೆಗಳ ಜೊತೆಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ಗೆ ದೂರು ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನಟ ದರ್ಶನ್ ಹಿಂಬಾಲಕರ ಈ ಕೃತ್ಯದಿಂದಲೇ ಅವರ ಸಂಸ್ಕೃತಿ ಎಂತಾದ್ದೆಂದು ಗೊತ್ತಾಗುತ್ತಿದೆ. ದರ್ಶನ್ ಮಾಧ್ಯಮದವರನ್ನು, ಪತ್ರಕರ್ತರನ್ನು ಕೆಟ್ಟ ಪದಗಳಿಂದ ಬೈದಿದ್ದಾರೆ. ಅವರು ಬಳಸಿದ ಪದ ಬಳಕೆಯನ್ನು ಪ್ರಕಟ ಮಾಡಲು ಸಾಧ್ಯವಾಗದಂತ ಪದಗಳನು ಬಳಸಿದ್ದಾರೆ. ನೇರವಾಗಿ ಮಾಧ್ಯದವರನ್ನು ಅಸಂಬದ್ಧ ಪದಗಳಿಂದ ನಿಂದಿಸಿದರೂ ಯಾರೂ ಏನೂ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿರುವುದು ದುರಂತವೇ ಸರಿ. ಅಂತವರಿಗೆ ತಕ್ಕ ಪಾಠ ಕಲಿಸಲೇಬೇಕು, ಎಲ್ಲವನ್ನೂ ನಾನು ಕಾನೂನು ಮೂಲಕ ಹೋರಾಡುತ್ತಿದ್ದೇನೆ ಎಂದು ಹೇಳಿದರು.




