ಕಾಂಗ್ರೆಸ್ ಸೇರಲು ಉಮೇಶ ಕತ್ತಿಗೆ ಮನಸ್ಸಿಲ್ಲ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ರಮೇಶ ಕತ್ತಿ ಕಾಂಗ್ರೆಸ್ ಸೇರುವ ಸಾಧ್ಯತೆ ಹೆಚ್ಚಾಗಿದೆ.
ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಅವರು, ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಗೊತ್ತಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಪ್ರಕಾಶ ಹುಕ್ಕೇರಿ ವಿರುದ್ಧ ಕೇವಲ 3 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದ ರಮೇಶ ಕತ್ತಿ, ಈ ಬಾರಿಯ ಚುನಾವಣೆಯಲ್ಲಿ ತಮಗೇ ಟಿಕೆಟ್ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಟಿಕೆಟ್ ನೀಡಿದ್ದರಿಂದ ಅವರು ಆಕ್ರೋಶಗೊಂಡಿದ್ದಾರೆ. ಹಾಗಾಗಿ, ಅವರು ದಿಢೀರ್ ಬೆಂಗಳೂರಿಗೆ ತೆರಳಿದ್ದಾರೆ.
ಮಾಜಿ ಸಚಿವ ಉಮೇಶ ಕತ್ತಿ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಮಾತನಾಡಿ ಮರುಪರಿಶೀಲಿಸುವಂತೆ ಮನವಿ ಮಾಡಿದ್ದರು. ಅಲ್ಲದೆ, 4ನೇ ತಾರೀಖಿನವರೆಗೂ ಕಾದು ನೋಡುವುದಾಗಿ ತಿಳಿಸಿದ್ದರು.
ಆದರೆ ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ನಿರ್ಧರಿಸಿದ ರಮೇಶ ಕತ್ತಿ ನೇರವಾಗಿ ಕಾಂಗ್ರೆಸ್ ಕದ ತಟ್ಟಿದ್ದಾರೆ.
ಎರಡು ಸಾಧ್ಯತೆ:
ಬಿಜೆಪಿ ಟಿಕೆಟ್ ಬದಲಾವಣೆ ಸಾಧ್ಯತೆ ಕ್ಷೀಣಿಸಿದೆ. ಹಾಗಾಗಿ ರಮೇಶ ಕತ್ತಿ ಕಾಂಗ್ರೆಸ್ ಟಿಕೆಟ್ ನಿಂದ ಚುನಾವಣೆ ಕಣಕ್ಕೆ ಧುಮುಕುವ ಪ್ರಯತ್ನ ನಡೆಸಿದ್ದಾರೆ.
ಆದರೆ ಕಾಂಗ್ರೆಸ್ ಬೆಳಗಾವಿ ಮತ್ತು ಚಿಕ್ಕೋಡಿ ಎರಡ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದೆ. ಚಿಕ್ಕೋಡಿಗೆ ಪ್ರಕಾಶ ಹುಕ್ಕೇರಿ ಮತ್ತು ಬೆಳಗಾವಿಗೆ ವಿ.ಎಸ್.ಸಾಧುನವರ್ ಕಾಂಗ್ರೆಸ್ ಅಭ್ಯರ್ಥಿಗಳು.
ರಮೇಶ ಕತ್ತಿ ಚಿಕ್ಕೋಡಿ ಟಿಕೆಟ್ ಕೇಳಿದರೆ ಪ್ರಕಾಶ ಹುಕ್ಕೇರಿಗೆ ಬೆಳಗಾವಿ ಟಿಕೆಟ್ ಕೊಡಬಹುದು. ಪ್ರಕಾಶ ಹುಕ್ಕೇರಿ ಮೊದಲಿನಿಂದಲೂ ಚಿಕ್ಕೋಡಿಗಿಂತ ಬೆಳಗಾವಿ ಟಿಕೆಟ್ ಮೇಲೆ ಹೆಚ್ಚು ಆಸಕ್ತರಾಗಿದ್ದರು.
ಇನ್ನೊಂದ ಸಾಧ್ಯತೆ ಎಂದರೆ, ರಮೇಶ ಕತ್ತಿ ಬೆಳಗಾವಿ ಟಿಕೆಟ್ ಕೇಳಿದರೂ ಆಶ್ಚರ್ಯವಿಲ್ಲ. ಆಗ ವಿ.ಎಸ್.ಸಾಧುನವರ್ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.
ಒಂದು ಮೂಲದ ಪ್ರಕಾರ ಕಾಂಗ್ರೆಸ್ ಸೇರಲು ಉಮೇಶ ಕತ್ತಿಗೆ ಮನಸ್ಸಿಲ್ಲ. ಈ ಹಿಂದೆ, ಅವರ ರಾಜಕೀಯ ಜೀವನದಲ್ಲೇ ಒಂದು ಬಾರಿ ಅವರು ಸೋತಿದ್ದು ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾಗ. ಹಾಗಾಗಿ ಕಾಂಗ್ರೆಸ್ ಗೂ ನಮಗೂ ಆಗಿಬರುವುದಿಲ್ಲ ಎಂದು ಅವರು ಹೇಳುತ್ತಿರುತ್ತಾರೆ. ಆದರೆ ಟಿಕೆಟ್ ತಪ್ಪಿಸಿದ ಬಿಜೆಪಿ ಸಿಟ್ಟಿನಿಂದ ರಮೇಶ ಕತ್ತಿ ಕಾಂಗ್ರೆಸ್ ನತ್ತ ಮುಖಮಾಡಿದ್ದಾರೆ.
ಉಮೇಶ ಕತ್ತಿ ಭೇಟಿ ಮಾಡಿದ ಜೊಲ್ಲೆ:
ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ಶನಿವಾರ ಬೆಲ್ಲದ ಬಾಗೇವಾಡಿಯಲ್ಲಿ ಮಾಜಿ ಸಚಿವ ಉಮೇಶ ಕತ್ತಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
”ಯಾವುದೇ ಸಮಸ್ಯೆ ಇಲ್ಲ. ಬಿಜೆಪಿಯಲ್ಲೇ ಇರುವುದಾಗಿಯೂ, ಬಿಜೆಪಿ ಪರವಾಗಿ ಏನೇ ಕೆಲಸ ಹೇಳಿದರೂ ಮಾಡುವುದಾಗಿಯೂ ಉಮೇಶ ಕತ್ತಿ ತಿಳಿಸಿದ್ದಾರೆ. ಹಾಗಾಗಿ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನುವುದೆಲ್ಲ ಕೇವಲ ವದಂತಿ” ಎಂದು ಜೊಲ್ಲೆ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ರಮೇಶ ಕತ್ತಿ ಬೆಳಗಾವಿಯಲ್ಲೇ ಇದ್ದಾರೆ. ಅವರು ಬೆಂಗಳೂರಿಗೆ ಹೋಗಿಲ್ಲ. ತಲೆ ಕೆಡಿಸಿಕೊಳ್ಳುವಂತದ್ದು ಏನೂ ಇಲ್ಲ. ನಾವು ನಿರಾಳವಾಗಿ ಕೆಲಸ ಮಾಡುತ್ತಿದ್ದೇವೆ ಎಂದೂ ಅವರು ತಿಳಿಸಿದರು.
ಒಟ್ಟಾರೆ, ಬಿಜೆಪಿ ಮಾತುಕತೆಯ ಮೂಲಕ ಉಮೇಶ ಕತ್ತಿ ಮತ್ತು ರಮೇಶ ಕತ್ತಿಯವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಯಶಸ್ವಿಯಾಗುತ್ತದೆಯೋ ಅಥವಾ ಕತ್ತಿ ಸಹೋದರರು ಕಾಂಗ್ರೆಸ್ ಗೆ ಜಿಗಿಯುತ್ತಾರೋ ಕಾದು ನೋಡಬೇಕಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಹಾಗೂ ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)