Latest

ಗೃಹ ಸಚಿವರಿಂದ ಪದೇ ಪದೇ ಯಡವಟ್ಟು; ತಪ್ಪೊಪ್ಪಿಕೊಂಡ ಅರಗ ಜ್ಞಾನೇಂದ್ರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಜೆ ಜೆ ನಗರದಲ್ಲಿ ನಡೆದ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉರ್ದು ಮಾತನಾಡಲು ಬರಲ್ಲ ಎಂದಿದ್ದಕ್ಕೆ ಹತ್ಯೆ ಮಾಡಲಾಗಿದೆ ಎಂದುಹೇಳಿಕೆ ನೀಡಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಉಲ್ಟಾ ಹೊಡೆದಿದ್ದು, ತಮ್ಮ ಹೇಳಿಕೆ ತಪ್ಪಾಗಿದೆ ಎಂದಿದ್ದಾರೆ.

ಉರ್ದು ಮಾತನಾಡಲು ಬರಲ್ಲ ಎಂದಿದ್ದಕ್ಕೆ ಜೆಜೆ ನಗರದಲ್ಲಿ ಯುವಕ ಚಂದ್ರು ಎಂಬಾತನನ್ನು ದುಷ್ಕರ್ಮಿಗಳು ಚೂರಿಯಿಂದ ಚುಚ್ಚಿ ಹತ್ಯೆ ಮಾಡಿದ್ದಾರೆ. ಆತ ಒಬ್ಬ ದಲಿತ ಯುವಕ ಎಂದು ಈ ಹಿಂದೆ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದರು. ಗೃಹ ಸಚಿವ ಬೇಜವಾಬ್ದಾರಿ ಹೇಳಿಕೆ ಮತೀಯ ಬಣ್ಣ ಬಳಿಯುವ ಉದ್ದೇಶ. ಸಮಾಜದಲ್ಲಿ ಸ್ವಾಸ್ಥ್ಯ ಕದಡಲು ಈಮೂಲಕ ಗೃಹ ಸಚಿವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತು.

ಮಾಜಿ ಸಿಎಂ ಕುಮಾರಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಅರಗ ಜ್ಞಾನೇಂದ್ರ ಗೃಹ ಸಚಿವರಾಗಲು ಅಸಮರ್ಥರು. ಇಂತಹ ಗೃಹಸಚಿವರಿದ್ದರೆ ಪೊಲೀಸ್ ಇಲಾಖೆಯಾದರೂ ಏನು ಮಾಡಲು ಸಾಧ್ಯ? ಎಂದು ಕಿಡಿಕಾರಿದ್ದರು.

ತಮ್ಮ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಈ ಹಿಂದೆ ನಾನು ನೀಡಿದ್ದ ಹೇಳಿಕೆ ತಪ್ಪಾಗಿದೆ. ತಕ್ಷಣಕ್ಕೆ ಬಂದ ಮಾಹಿತಿ ಮೇಲೆ ಉರ್ದು ಭಾಷೆ ಬರಲ್ಲ ಎಂದಿದ್ದಕ್ಕೆ ಕೊಲೆಯಾಗಿದೆ ಎಂದು ಹೇಳಿದ್ದೆ, ನನ್ನ ಪದ ಬಳಕೆಯಲ್ಲಿಯೂ ತಪ್ಪಾಗಿದೆ. ಕೆಲ ಸೋರ್ಸ್ ಇಂದ ಬಂದ ಮಾಹಿತಿಗಳನ್ನು ನಾನು ಹೇಳಿದೆ…ಅದು ತಪ್ಪಾಗಿದೆ. ಇದೀಗ ಪೊಲೀಸರಿಂದ ವಿಸ್ತೃತ ಮಾಹಿತಿ ಲಭ್ಯವಾಗಿದೆ. ಬೈಕ್ ಟಚ್ ಆಗಿ ಗಲಾಟೆ ಆರಂಭವಾಗಿ ಚಂದ್ರುವಿನ ಕೊಲೆಯಾಗಿದೆ. ಗಲಾಟೆ ವೇಳೆ ಆತನಿಗೆ ಚೂರಿ ಇರಿಯಲಾಗಿದೆ ಎಂದು ತಿಳಿಸಿದ್ದಾರೆ.
ಉರ್ದು ಮಾತಾಡೋಕೆ ಬರಲ್ಲ ಎಂದಿದ್ದಕ್ಕೆ ಯುವಕನ ಹತ್ಯೆ ಎಂದ ಗೃಹ ಸಚಿವ

Home add -Advt

Related Articles

Back to top button