
ಪ್ರಗತಿವಾಹಿನಿ ಸುದ್ದಿ: ಚೀನಾ ಭಾರತದ ವಿರುದ್ಧ ಮತ್ತೆ ಕುತಂತ್ರ ಮಾಡಿದೆ. ಭಾರತದ ಅರುಣಾಚಲ ಪ್ರದೇಶದ ಕೆಲ ಸ್ಥಳಗಳಿಗೆ ತಾನು ಚೀನಾ ಮರುನಾಮಕರಣ ಮಾಡುವ ಪ್ರಯತ್ನ ಮಾಡಿದೆ. ಚೀನಾದ ಈ ಕೆಲಸಕ್ಕೆ ಭಾರತ ಖಡಕ್ ತಿರಿಗೇಟು ಕೊಟ್ಟಿದೆ.
ಚೀನಾದ ಇಂತಹ ಪ್ರಯತ್ನ ಸಹಿಸಲು ಸಾಧ್ಯವಿಲ್ಲ. ಅರುಣಾಚಲ ಪ್ರದೇಶ ಎಂದಿಗೂ ಭಾರತದ ಅವಿಭಾಜ್ಯ ಅಂಗ. ಚೀನಾ ವ್ಯರ್ಥ ಪ್ರಯತ್ನಕ್ಕೆ ಮುಂದಾದರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಚೀನಾ ಯತ್ನಗಳು ನಮ್ಮ ಗಮನಕ್ಕೆ ಬಂದಿವೆ. ಅರುಣಾಚಲ ಪ್ರದೇಶ ಭಾರತದ ರಾಜ್ಯ. ಚೀನಾದ ನಿಷ್ಪ್ರಯೋಜಕ, ಅಸಂಬದ್ಧ, ಅವಿವೇಕತನದ ಪ್ರಯತ್ನಗಳು ಸಫಲವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಅರುಣಾಚಲ ಪ್ರದೇಶ ಎಂದಿಗೂ ಭಾರತದ ಅವಿಭಾಜ್ಯ ಹಾಗೂ ಬೇರ್ಪಡಿಸಲಗದ ಭಾಗವಾಗಿದೆ. ವಾಸ್ತವವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದು ಖಡಕ್ ಹೇಳಿಕೆ ನೀಡಿದ್ದಾರೆ.