*ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಿ ದಾಳಿ; ರಮೇಶ್ ಜಾರಕಿಹೊಳಿ, ಲಖನ್ ಮನೆ ಮೇಲೆ ಯಾಕೆ ಇಡಿ ದಾಳಿ ಇಲ್ಲ? ಬಿ.ಕೆ.ಹರಿಪ್ರಸಾದ್ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಬಿಜೆಪಿ ಇಡಿ, ಐಟಿಯಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಎಸ್ ಟಿ ನಾಯಕರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುತ್ತಿದೆ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ನಡೆದ ಇಡಿ ದಾಳಿ ವಿಚಾರವಾಗಿ ಮಾತನಾಡಿದ ಹರಿಪ್ರಸಾದ್, ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ. ಇದರಲ್ಲಿ ಅಚ್ಚರಿ ಏನೂ ಇಲ್ಲ ಎಂದರು.
ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ. ಅವರ ಮೇಲೆ ದಾಳಿ ನಡೆದಿರುವುದರಲ್ಲಿ ನಮಗೇನು ಆಶ್ಚರ್ಯ ಇಲ್ಲ. ಬಿಜೆಪಿ ನಮಗೆ ಬೆದರಿಕೆ ಹಾಕಲು ಈ ರೀತಿ ಮಾಡುತ್ತಿದೆ ಎಂದರು.
ಸತೀಶ್ ಜಾರಕಿಹೊಳಿ ಅವರ ಪುತ್ರಿ ಸಂಸದರಾಗಿದ್ದಾರೆ. ಎಂಪಿ ಮನೆಯ ಮೇಲೆ ದಾಳಿ ನಡೆಸುವಾಗ ಸ್ಪೀಕರ್ ಅವರ ಅನುಮತಿ ತಗೊಂಡಿದ್ದಾರಾ ಇಲ್ವಾ ಅಂತ ಕೇಳಬೇಕಾಗುತ್ತದೆ. ಸತೀಶ್ ಜಾರಕಿಹೊಳಿ ಅವರಿಗೆ ಮಾತ್ರ ಬ್ರದರ್ ಇನ್ ಲಾ ಅಲ್ಲ, ಮಂಜುನಾಥ್. ಮಂಜುನಾಥ್ ಅವರ ತಂದೆ ದೇವೇಂದ್ರಪ್ಪ, ಬಿಜೆಪಿಯ ಸಂಸದರಾಗಿದ್ದರು. ಅವರ ಮನೆ ಯಾಕೆ ರೇಡ್ ಮಾಡಿಲ್ಲ? ಎಂದು ಪ್ರಶ್ನಿಸಿದರು.
ಸತೀಶ್ ಜಾರಕಿಹೊಳಿ ಅವರ ಸಹೋದರರು, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಲಕ್ಕನ್ ಇವರೆಲ್ಲರೂ ಸಹ ವಿಧಾನ ಪರಿಷತ್ ಮತ್ತು ವಿಧಾನಸಭೆಯ ಸದಸ್ಯರಾಗಿದ್ದಾರೆ. ಅವರ ನಿವಾಸದ ಮೇಲೆ ದಾಳಿ ಏಕೆ ಮಾಡಿಲ್ಲ? ಎಂದು ಕೇಳಿದರು.
ಕೇವಲ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಇವರು ದ್ವೇಷ ಸಾಧನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಮನೆ ಮೇಲೆ ಮಾತ್ರ ಇಡಿ ದಾಳಿಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.




