*ಭಾರತ್ ಜೋಡೋ ಯಾತ್ರೆ; ದೇಶದ ಜನಸಾಮಾನ್ಯರ ಸಂಕಷ್ಟಕ್ಕೆ ಸಿಕ್ಕ ಪರಿಹಾರ: ಸಿಎಂ ಡಿ.ಕೆ.ಶಿವಕುಮಾರ್ *

ಹೆಚ್.ಡಿ.ಕೆ ಬೆದರಿಕೆಗೆ ಹೆದರಲ್ಲ ಎಂದ ಸಿಎಂ
ಪ್ರಗತಿವಾಹಿನಿ ಸುದ್ದಿ: “ಭಾರತ್ ಜೋಡೋ ಯಾತ್ರೆ ದೇಶದ ಯುವಕರು, ಮಹಿಳೆಯರು, ರೈತರು, ಬಡವರ ಸಮಸ್ಯೆಗೆ ಪರಿಹಾರ ನೀಡಿತು. ಜನಸಾಮಾನ್ಯರ ಸಂಕಷ್ಟಕ್ಕೆ ಒದಗಿ ಬಂದ ಪರಿಹಾರ. ರಾಹುಲ್ ಗಾಂಧಿ ಅವರು ಕೇವಲ ಯಾತ್ರೆ ಮಾಡಲಿಲ್ಲ, ಎಲ್ಲಾ ವರ್ಗದ ಜನರ ಸಮಸ್ಯೆ ಆಲಿಸಿದರು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಬಣ್ಣಿಸಿದರು.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಬುಧವಾರ ನಡೆದ ಭಾರತ್ ಜೋಡೋ ಪಾದಯಾತ್ರೆಯ ಐದನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
“ಭಾರತ ಜೋಡೋ ಯಾತ್ರೆ ಕೇವಲ ಕಾಂಗ್ರೆಸ್ ಕಾರ್ಯಕ್ರಮ ಅಲ್ಲ. ದೇಶದ ಐಕ್ಯತೆ, ಸಮಗ್ರತೆಗಾಗಿ ಹಾಗೂ ನಮ್ಮ ರಾಜ್ಯದಲ್ಲಿ ಈ ಯಾತ್ರೆ ಚಾಮರಾಜನಗರ ಹಾಗೂ ರಾಯಚೂರಿನವರೆಗೆ ನಡೆದ ಯಾತ್ರೆ ದೇಶದಲ್ಲಿ ಬದಲಾವಣೆ ಗಾಳಿ ನೀಡಿದ ಸಂದೇಶ” ಎಂದರು.
“ನಮ್ಮ ರಾಜ್ಯದಲ್ಲಿ 21 ದಿನ 511 ಕಿ ಮೀ ಪಾದಯಾತ್ರೆ ನಡೆಯಿತು. ರಾಷ್ಟ್ರ ಮಟ್ಟದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4 ಸಾವಿರ ಕಿ.ಮೀ ಹೆಜ್ಜೆ ಹಾಕಲಾಯಿತು. ನಮ್ಮ ಯಾತ್ರೆ ವೇಳೆ ಚಿತ್ರದುರ್ಗದಲ್ಲಿ ಸಾಗುವಾಗ ಜೋರಾಗಿ ಮಳೆ ಬಂದಿತ್ತು. ನಮ್ಮ ಸ್ನೇಹಿತ ಸುಧಾಕರ್ ಅಂದು ಅವರು ಹಾಗೂ ಕಾರ್ಯಕರ್ತರು ಯಾತ್ರೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಪಟ್ಟ ಶ್ರಮ. ಆದರೆ ಸುಧಾಕರ್ ಅವರು ನಮ್ಮೊಂದಿಗೆ ಇಲ್ಲ. ಅವರ ಕೆಲಸ ಸಾಕ್ಷಿಯಾಗಿ ಉಳಿದಿದೆ. ಚಾಮರಾಜನಗರದಿಂದ ರಾಯಚೂರಿನವರೆಗೆ ಪಾದಯಾತ್ರೆ ನಡೆದ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಿದೆ” ಎಂದರು.
“ಸೋನಿಯಾ ಗಾಂಧಿ ಅವರು ದಸರಾ ಸಮಯದಲ್ಲಿ ಮೂರು ದಿನ ರಾಜ್ಯದಲ್ಲಿ ಉಳಿದು ಯಾತ್ರೆ ವೇಳೆ ಭಾಗವಹಿಸಿ ಹೆಜ್ಜೆ ಹಾಕಿದರು. ಈ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಅವರು ಹೆಜ್ಜೆ ಹಾಕಿದ್ದು ಕರ್ನಾಟಕದಲ್ಲಿ ಮಾತ್ರ. ಈ ಯಾತ್ರೆ ಸಂದರ್ಭದಲ್ಲೇ ನಡೆದ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಆಯ್ಕೆ ಮಾಡಲಾಯಿತು. ರಾಹುಲ್ ಗಾಂಧಿ ಅವರು ಬಳ್ಳಾರಿಯಲ್ಲಿ ಮತ ಚಲಾಯಿಸಿದರು. ನಿಜಲಿಂಗಪ್ಪ ಅವರ ನಂತರ ಕರ್ನಾಟಕದವರು ಈ ಸ್ಥಾನಕ್ಕೆ ಏರಿದರು” ಎಂದು ಹೇಳಿದರು.
“ಭಾರತ್ ಜೋಡೋ ಯಾತ್ರೆ ದೇಶದಲ್ಲಿ ಯಾವ ರೀತಿ ಪಾದಯಾತ್ರೆ ಮಾಡಬೇಕು ಎಂಬುದಕ್ಕೆ ಅಡಿಪಾಯ ಹಾಕಿಕೊಟ್ಟಿತು. ನಾನು ಅಧ್ಯಕ್ಷನಾಗಿದ್ದಾಗ ಈ ಯಾತ್ರೆ ನಡೆಯಿತು, 136 ಸೀಟು ಗೆದ್ದು ನೀವೆಲ್ಲ ಸರ್ಕಾರದ ಪಾಲುದಾರರಾಗಿದ್ದೀರಿ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ. ಅದೇ ಕಾರಣಕ್ಕೆ ಈ ಸಭಾಂಗಣಕ್ಕೆ ಭಾರತ ಜೋಡೋ ಎಂದು ಹೆಸರಿಡಲಾಗಿದೆ” ಎಂದರು.
“ನಾನು ರಾಹುಲ್ ಗಾಂಧಿ ಅವರಿಗೆ ಒಂದು ವಿಚಾರ ತಿಳಿಸಿ, ದಾಖಲೆ ಸಲ್ಲಿಸಿದ್ದೆ. ಅವರು ಮರೆತಿದ್ದಾರೆ ಎಂದು ಭಾವಿಸಿದ್ದೆ. ಆದರೆ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆ ವೇಣುಗೋಪಾಲ್ ಅವರ ಜತೆ ಚರ್ಚೆ ಮಾಡಿದ್ದಾರೆ. ಯಾತ್ರೆ ವೇಳೆ ನಾವು ಚಿತ್ರದುರ್ಗದ ಬಳಿ ಟೀ ಕುಡಿಯುತ್ತಿರುವಾಗ ಅಜ್ಜಿಯೊಬ್ಬರು ಬಂದು ರಾಹುಲ್ ಗಾಂಧಿ ಅವರಿಗೆ ಸೌತೆಕಾಯಿ ಕೊಟ್ಟರು. ಇದು ನಿಮ್ಮ ಅಜ್ಜಿ ಇಂದಿರಾ ಗಾಂಧಿ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದು” ಎಂದು ಹೇಳಿದರು.
“ದೇಶದಲ್ಲಿ ಉಳುವವನಿಗೆ ಭೂಮಿ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಚಾಲಕರು, ರೈತರು, ನೇಕಾರರು, ಯುವಕರು, ಮಹಿಳೆಯರು, ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿ ಅವರ ಸಮಸ್ಯೆ ಅರಿತು ನಾವು ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲು ಅಡಿಪಾಯ ಹಾಕಲಾಯಿತು. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ” ಎಂದರು.
“ಭಾರತ ಜೋಡೋ ಯಾತ್ರೆ ಮುಗಿಯುವುದಲ್ಲ. ಇದನ್ನು ಈ ಡಿ ಕೆ ಶಿವಕುಮಾರ್ ಇಲ್ಲಿಗೆ ನಿಲ್ಲಿಸುವುದಿಲ್ಲ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನ ಅಧಿಕಾರಕ್ಕೆ ಬಂದಂತೆ. ಈಗಾಗಲೇ ಭಾರತ ಜೋಡೋ ಭವನ ಟ್ರಸ್ಟ್ ಆರಂಭಿಸಿದ್ದು, ಈ ಟ್ರಸ್ಟ್ ನಿಂದ ಕಾಂಗ್ರೆಸ್ ಪಕ್ಷದ ಆಶಯ, ಸಿದ್ಧಾಂತದ ಬಗ್ಗೆ ತರಬೇತಿ ಕೇಂದ್ರ ನಿರ್ಮಿಸಲಾಗುವುದು. ಈ ವಿಚಾರವಾಗಿ ನಾನು, ಹರಿಪ್ರಸಾದ್ ಹಾಗೂ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡಿರುವೆ” ಎಂದು ತಿಳಿಸಿದರು.
“ನಾನು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಸಚಿವ ಸಂಪುಟದಲ್ಲಿ ಭಾರತ ಜೋಡೋ ಯುವಕರ ಸಂಘ ಸ್ಥಾಪನೆಗೆ ಅನುಮೋದನೆ ನೀಡಲಾಯಿತು. 16-35 ವರ್ಷಗಳ ಯುವಕರಿಗೆ ರಾಜ್ಯದಲ್ಲಿ 10 ಸಾವಿರ ಭಾರತ ಜೋಡೋ ಯುವಕರ ಸಂಘ ಮಾಡಲಾಗುತ್ತಿದೆ. ಕೇವಲ 2 ದಿನಗಳಲ್ಲಿ 7 ಲಕ್ಷ ಜನ ಆನ್ ಲೈನ್ ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ನಾವು ಸಧ್ಯದಲ್ಲೇ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುವುದು. ಇದು ಯುವಕರಲ್ಲಿನ ಪ್ರತಿಭೆ ಅನಾವರಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಅವರಿಗೆ ಅವಕಾಶ ಕಲ್ಪಿಸಿ, ಸಾಮಾಜಿಕ ಸಾಮರಸ್ಯ ಮೂಡಿಸಿ ನಮ್ಮ ಯುವ ಸಮುದಾಯವನ್ನು ನಶೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ. ಈ ಸಂಘದ ಸದಸ್ಯತ್ವಕ್ಕೆ 10 ರೂ. ಗೌರವ ಧನ ನಿಗದಿ ಮಾಡಲಾಗಿದೆ. ಪ್ರತಿ ಸಂಘದಲ್ಲಿ 150-200 ಸದಸ್ಯರು ನೇಂದಣಿಗೆ ಅವಕಾಶವಿದೆ. ಆಮೂಲಕ ರಾಜ್ಯದಲ್ಲಿ ಪ್ರತಿ ಸಂಘಕ್ಕೆ ವಾರ್ಷಿಕ 10 ಲಕ್ಷ ಅನುದಾನ ನೀಡಲಾಗುವುದು” ಎಂದರು.
ಪ್ರತಿ ಪಂಚಾಯ್ತಿಯಲ್ಲಿ 6 ಜನರ ಗ್ಯಾರಂಟಿ ಸಮಿತಿ
“ಕಾಂಗ್ರೆಸ್ ಕಾರ್ಯಕರ್ತರಿಗೆ ಶಕ್ತಿ ನೀಡಬೇಕು ಎಂದು ಪ್ರತಿ ಪಂಚಾಯ್ತಿಯಲ್ಲಿ 6 ಜನ ಗ್ಯಾರಂಟಿ ಸಮಿತಿ ರಚಿಸಲು ಆದೇಶ ನೀಡಲಾಗಿದೆ. ಮುಂದಿನ ವಾರದೊಳಗೆ ಈ ಸಮಿತಿ ರಚಿಸಲು ಶಾಸಕರಿಗೆ ಸೂಚಿಸಿದ್ದೇವೆ. ನೀವುಗಳಿದ್ದರೆ ನಾವು ನಿಮಗೆ ಶಕ್ತಿ ನೀಡಲು ಮುಂದಾಗಿದ್ದೇವೆ. ಪ್ರತಿ ತಾಲ್ಲೂಕಿನಲ್ಲಿ 250 ಜನರಿಗೆ ಶಕ್ತಿ ತುಂಬಲಾಗಿದೆ” ಎಂದರು.
“ಕಾಂಗ್ರೆಸ್ ಕಾರ್ಯಕರ್ತರಂತೆ ಬಿಜೆಪಿಗರು, ದಳದ ಕಾರ್ಯಕರ್ತರು ಈ ತ್ರಿವರ್ಣ ಧ್ವಜ ಹಾಕಲು ಸಾಧ್ಯವೇ? ತ್ಯಾಗದ ಮನೋಭಾವದ ಕಾಂಗ್ರೆಸ್ ಪಕ್ಷದಲ್ಲಿ ನೀವು ಸದಸ್ಯರಾಗಿದ್ದೀರಿ. ಸ್ವಾತಂತ್ರ್ಯಕ್ಕಾಗಿ ತ್ಯಾಗ, ದೇಶಕ್ಕಾಗಿ ಪ್ರಾಣ, ಅಧಿಕಾರ ತ್ಯಾಗ ಮಾಡಿರುವುದು ಕಾಂಗ್ರೆಸ್ ಪಕ್ಷ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಪ್ರಧಾನಮಂತ್ರಿಯಾಗುವ ಅವಕಾಶವಿತ್ತು. ಆದರೆ ಅವರು ದೇಶದ ಹಿತಾಸಕ್ತಿಗಾಗಿ ಅಧಿಕಾರವನ್ನು ತ್ಯಾಗ ಮಾಡಿದರು. ಇದು ಕಾಂಗ್ರೆಸ್ ಪಕ್ಷದ ಇತಿಹಾಸ. ನೆಹರೂ ಅವರು ಎಷ್ಟು ವರ್ಷ ಜೈಲುವಾಸ ಅನುಭವಿಸಿದ್ದಾರೆ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರು ಪ್ರಾಣತ್ಯಾಗ ಮಾಡಿದ್ದಾರೆ. ಬಿಜೆಪಿಯ ಯಾರಾದರೂ ದೇಶಕ್ಕೆ ತ್ಯಾಗ ಮಾಡಿದ್ದಾರಾ? ಈ ಇತಿಹಾಸವನ್ನು ಯಾವ ರೀತಿ ಉಳಿಸಿಕೊಂಡು ಹೋಗುತ್ತೀರಿ ನಿಮಗೆ ಬಿಟ್ಟ ವಿಚಾರ” ಎಂದರು.
“ರಾಜ್ಯದಲ್ಲಿ ಬರಗಾಲವಿದೆ. ಹೀಗಾಗಿ ನೂರು ದಿನಗಳ ಕಾರ್ಯಕ್ರಮವನ್ನು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾಡಲಾಗುತ್ತಿದೆ. ಬಿಜೆಪಿಯವರು ಎಷ್ಟು ಯಾತ್ರೆ ಮಾಡುತ್ತಾರೋ ಮಾಡಲಿ. ಅವರಿಗಿಂತ ನಾಲ್ಕು ಹೆಜ್ಜೆ ಹೆಚ್ಚು ಹಾಕುವ ಶಕ್ತಿ ನೀವು ನಮಗೆ ಕೊಟ್ಟಿದ್ದೀರಿ. ಬಿಜೆಪಿಯವರು ನಮ್ಮ ನಾಯಕರ ಮೇಲೆ ಎಷ್ಟೇ ಷಡ್ಯಂತ್ರ ಮಾಡಿದರೂ ಅದು ಹೆಚ್ಚು ದಿನ ನಿಲ್ಲುವುದಿಲ್ಲ” ಎಂದರು.
“ಯುವಕರಿಗಾಗಿ ರಾಜ್ಯದಲ್ಲಿ 72 ಸಾವಿರ ಸರ್ಕಾರಿ ಹುದ್ದೆ ಭರ್ತಿಗೆ ಮುಂದಾಗಿದ್ದೇವೆ. ಕೆಪಿಎಸ್ ಸಿ ಕರ್ಮಕಾಂಡವನ್ನು ನಮ್ಮದು ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದಕ್ಕೆ ಮೂಲ ಯಾರು? ನಮ್ಮಲ್ಲಿ ಹೆಚ್ಚು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಾಯಕರು ಗೆದ್ದಿದ್ದಾರೆ ಎಂದು ಅವರ ಮೇಲೆ ಬಿಜೆಪಿ ವಿಷ ಕಾರುತ್ತಿದೆ. ಹೀಗಾಗಿ ಪ್ರಿಯಾಂಕ್ ಖರ್ಗೆ ಅವರ ಮೇಲೂ ದಾಳಿ ಮಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಜನ ಗೆದ್ದಿದ್ದಾರೆ ಇದನ್ನು ಕಡಿಮೆ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದಾರೆ” ಎಂದರು.
2028, 2029ಕ್ಕೆ ನಮ್ಮದೇ ಸರ್ಕಾರ
“ಡಬಲ್ ಇಂಜಿನ್ ಸರ್ಕಾರ ಇದ್ದಾಗ ನಾವು 136 ಸೀಟು ಗೆಲ್ಲುತ್ತೇವೆ ಎಂದು ಹೇಳಿದ್ದೆ. ನಮ್ಮ ಲೆಕ್ಕ ತಪ್ಪಾಯಿತಾ? ಈಗ ಮತ್ತೆ ಹೇಳುತ್ತಿರುವೆ 2028ಕ್ಕೂ ನಮ್ಮದೇ ಸರ್ಕಾರ, 2029ಕ್ಕೂ ನಮ್ಮದೇ ಸರ್ಕಾರ. ನೀವು ಅದಕ್ಕೆ ಸಹಕಾರ ನೀಡಬೇಕು. ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯಲ್ಲಿ ನಾವು ವಿನಯ್ ಕಾರ್ತಿಕ್ ಅವರಿಗೆ ಐದನೇ ಅಭ್ಯರ್ಥಿ ಕಣಕ್ಕಿಳಿಸಿದೆವು. 12 ಜನ ಬಿಜೆಪಿ ಹಾಗೂ ದಳದ ಶಾಸಕರು ಅಡ್ಡಮತದಾನ ಮಾಡಿದ್ದಾರೆ. 80 ಜನರ ಪೈಕಿ 12 ಜನ ತಮ್ಮ ಆತ್ಮಸಾಕ್ಷಿ ಮತವನ್ನು ಕಾಂಗ್ರೆಸ್ ಗೆ ಹಾಕಿದ್ದಾರೆ. ಅವರ ಶಾಸಕರಿಗೆ ತಮ್ಮ ಪಕ್ಷಗಳ ಮೇಲೆ ವಿಶ್ವಾಸ ಇಲ್ಲ ಎಂದ ಮೇಲೆ ಹೇಗೆ” ಎಂದು ಹೇಳಿದರು.
ನಾನು ಬೆದರಿಕೆಗೆ ಹೆದರುವುದಿಲ್ಲ
“ಅಮೆರಿಕದಿಂದ ಬಂದು ಮಾಧ್ಯಮಗೋಷ್ಠಿ ನಡೆಸಿ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತೇನೆ ಎಂದು ಹೇಳಿದ್ದಾರೆ. ಈ ಡಿ ಕೆ ಶಿವಕುಮಾರ್, ಈ ಸರ್ಕಾರ ಇದಕ್ಕೆಲ್ಲಾ ಹೆದರುವುದಿಲ್ಲ. ರಾಹುಲ್ ಗಾಂಧಿ ಅನ್ಯಾಯ ಪ್ರಶ್ನೆ ಮಾಡಿದ್ದಕ್ಕೆ ಕೇಸ್ ಹಾಕಿದ್ದಾರೆ. ಅವರು ಇದಕ್ಕೆ ಹೆದರುತ್ತಾರಾ? ಇಂತಹ ಪರಿಸ್ಥಿತಿಯಲ್ಲಿ ನಾವು ನಿಮ್ಮ ಬ್ಲಾಕ್ ಮೇಲೆ ಗೆ ಹೆದರುವುದಿಲ್ಲ. ಇಲ್ಲಿ ಇರುವುದು ನಾನು ಮಾತ್ರವಲ್ಲ. ನಮ್ಮ ಹಿಂದೆ ಈ ಕಾರ್ಯಕರ್ತರ ಸೈನ್ಯವೇ ಇದೆ. ನಾವು ನೀವೆಲ್ಲ ಸೇರಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸೋಣ” ಎಂದರು.
“ನಾನು, ಹರಿಪ್ರಸಾದ್, ಸಿದ್ದರಾಮಯ್ಯ ಅವರು ಸೇರಿದಂತೆ ಕಾಂಗ್ರೆಸ್ ಪಕ್ಷದ ಸಚಿವರು ನಾಯಕರು ಎಲ್ಲರೂ ಒಟ್ಟಾಗಿ ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಎಲ್ಲಾ ವರ್ಗವನ್ನು ಒಗ್ಗೂಡಿಸೋಣ. ಕಾಂಗ್ರೆಸ್ ಪಕ್ಷವನ್ನು ಮತ್ತೆ ದೇಶದಲ್ಲಿ ಅಧಿಕಾರಕ್ಕೆ ತರೋಣ” ಎಂದು ಕರೆ ನೀಡಿದರು.




