ಪಂಜಾಬ್ ಚುನಾವಣೆಯ ಗೆಲುವಿನ ಹಿನ್ನೆಲೆ: ಆಮ್ ಆದ್ಮಿ ಪಾರ್ಟಿ ಸೇರಲಿದ್ದಾರಾ ರಾಜ್ಯದ ಪ್ರಮುಖ ರಾಜಕೀಯ ಮುಖಂಡರು ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಅಭೂತಪೂರ್ವ ಜನ ಸಾಧಿಸಿದ ಬೆನ್ನಲ್ಲೇ ಕರ್ನಾಟಕದಲ್ಲೂ ಆಪ್ ಅಲೆ ಬೀಸಲಿದೆಯಾ ? ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಕೆಲ ರಾಜಿಕೀಯ ಪ್ರಮುಖರು ಆಪ್ ಸೇರಲಿದ್ದಾರಾ ? ಆಪ್ ಮುಖಂಡ ಪೃಥ್ವಿ ರೆಡ್ಡಿ ಅವರ ಹೇಳಿಕೆಯೊಂದು ಈ ಕುರಿತು ತೀವ್ರ ಕುತೂಹಲ ಹುಟ್ಟಿಸಿದೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪೃಥ್ವಿ ರೆಡ್ಡಿ, ಕರ್ನಾಟಕದ ಹಲವು ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು, ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ರಾಜಕೀಯಕ್ಕೆ ಬರಲು ಇಚ್ಛಿಸಿದವರು ಸಧ್ಯದಲ್ಲೇ ಆಮ್ ಆದ್ಮಿ ಪಾರ್ಟಿ ಸೇರಲಿದ್ದಾರೆ. ಇನ್ನು ೨-೩ ವಾರದ ಒಳಗೆ ಈ ವಿದ್ಯಮಾನ ನಡೆಯಲಿದೆ ಎಂದಿದ್ದಾರೆ. ಆದರೆ ಯಾವ್ಯಾವ ಮುಖಂಡರು ಆಪ್ ಸೇರುತ್ತಾರೆ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.
ದೆಹಲಿ ಮಾದರಿಯ ಆಡಳಿತ ದೆಹಲಿ ಹೊರತುಪಡಿಸಿ ಹೊರಗಡೆ ಸಾಧ್ಯವಿಲ್ಲ, ಹಾಗಾಗಿ ಆಪ್ ದೆಹಲಿಯಿಂದ ಹೊರಗೆ ಆಡಳಿತಕ್ಕೆ ಬರುವುದು ಕಷ್ಟ ಎಂಬ ವದಂತಿ ಇತ್ತು. ಆದರೆ ಪಂಜಾಬ್ ವಿಧಾನಸಭೆ ಚುನಾವಣೆಯ ಜಯಭೇರಿಯ ಬಳಿಕ ಈ ತಿಳುವಳಿಕೆ ಸುಳ್ಳು ಎಂಬುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಆಪ್ ಸಧ್ಯದಲ್ಲೇ ಕರ್ನಾಟಕದಲ್ಲೂ ಪಕ್ಷವನ್ನು ಗಟ್ಟಿಗೊಳಿಸಲಿದೆ. ಹಲವು ಪ್ರಮುಖ ವ್ಯಕ್ತಿಗಳು ಆಪ್ ಸೇರಲಿದ್ದಾರೆ ಎಂದು ಪ್ರಥ್ವಿ ರೆಡ್ಡಿ ತಿಳಿಸಿದ್ದಾರೆ.
ಮಧ್ಯಮ ವರ್ಗ ಮತ್ತು ಬಡವರೇ ಮತದಾರರು
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ತಮ್ಮ ಮತ ಬ್ಯಾಂಕ್ ಎಂದು ಪರಿಗಣಿಸಿದ್ದರೆ ಬಿಜೆಪಿ ಬಹುಸಂಖ್ಯಾತರನ್ನು ಮತದಾರರಾಗಿ ಗುರುತಿಸುತ್ತದೆ. ಆದರೆ ಆಮ್ ಆದ್ಮಿ ಪಾರ್ಟಿ ಜಾತಿ ಧರ್ಮ ಹೊರತುಪಡಿಸಿ ಎಲ್ಲ ಮಧ್ಯಮ ವರ್ಗ ಮತ್ತು ಬಡವರನ್ನು ಮತದಾರರಾಗಿ ಗುರುತಿಸಿ ಕಾರ್ಯಕ್ರಮ ರೂಪಿಸುತ್ತದೆ ಹಾಗಾಗಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಸಹ ಆಮ್ ಆದ್ಮಿ ಪಾರ್ಟಿ ಗಟ್ಟಿಯಾಗಿ ನೆಲೆಯೂರಲಿದೆ ಎಂದು ಅವರು ತಿಳಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್