ಬಿಜೆಪಿ ಚುನಾವಣೆ ರಣಕಹಳೆ: 12ರಂದು ಬೆಳಗಾವಿಗೆ ಬರಲಿದ್ದಾರೆ ಘಟಾನುಘಟಿ ನಾಯಕರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – 2023ಕ್ಕೆ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಇದೇ 12ರಿಂದಲೇ ರಣಕಹಳೆ ಮೊಳಗಿಸಲಿದೆ. ಒಂದು ವರ್ಷ ಮೊದಲೇ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, 3 ತಂಡಗಳಲ್ಲಿ ಘಟಾನುಘಟಿ ನಾಯಕರು ಪ್ರವಾಸ ಹಮ್ಮಿಕೊಂಡಿದ್ದಾರೆ.

ರಾಜ್ಯ ಉಸ್ತುವಾರಿ ಅರುಣ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲು ನೇತೃತ್ವದಲ್ಲಿ ತಂಡಗಳು ಒಂದೊಂದು ವಿಭಾಗದಲ್ಲಿ ಪ್ರವಾಸ ಮಾಡಲಿವೆ.

Home add -Advt

ಏಪ್ರಿಲ್ 12ರಂದು ಅರುಣ ಸಿಂಗ್ ನೇತೃತ್ವದ ತಂಡ ಬೆಳಗಾವಿಗೆ ಆಗಮಿಸಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ತಂಡದಲ್ಲಿದ್ದಾರೆ. 2 ದಿನ ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಚುನಾವಣೆ ಸಿದ್ಧತೆ ಕುರಿತು ಸಮಾಲೋಚನೆ ನಡೆಸಲಿದೆ.

ಅರುಣ್ ಸಿಂಗ್ ತಂಡದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಗೋವಿಂದ್ ಕಾರಜೋಳ, ಆರ್.ಅಶೋಕ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಉಪಾಧ್ಯಕ್ಷರಾದ  ಮಾಲಿಕಯ್ಯ ಗುತ್ತೇದಾರ್, ಎಂ.ಶಂಕರಪ್ಪ ಮತ್ತು ಎಂ.ಬಿ.ನಂದೀಶ್ ಇದ್ದಾರೆ. ಈ ತಂಡ ಬೆಳಗಾವಿ, ದಾವಣಗೆರೆ ಮತ್ತು ಬೆಂಗಳೂರು ಗ್ರಾಮಾಂತರ ವಿಭಾಗಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ರಾಜ್ಯ ಕಾರ್ಯದರ್ಶಿ ಕೆ.ಎಸ್ .ನವೀನ್‌ ತಂಡದ ಸಂಯೋಜಕರು.

ನಳಿನ್ ಕುಮಾರ್ ಕಟೀಲ್ ತಂಡದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರಾದ ಕೆ.ಎಸ್.ಈಶ್ವರಪ್ಪ, ಸೋಮಣ್ಣ, ಪ್ರತಾಪ್ ಸಿಂಹ, ರಾಜ್ಯ ಉಪಾಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್ ಹಾಗೂ ಎಂ.ರಾಜೇಂದ್ರ ಇದ್ದಾರೆ. ಈ ತಂಡ ಮೈಸೂರು, ಬಳ್ಳಾರಿ, ಧಾರವಾಡ ಹಾಗೂ ಬೆಂಗಳೂರು ಸಂಚರಿಸಲಿದೆ. ರಾಜ್ಯ ಕಾರ್ಯದರ್ಶಿ ತುಳಸಿ ಮುನಿರಾಜುಗೌಡ ಅವರು ಈ ತಂಡದ ಸಂಯೋಜಕರಾಗಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಂಡದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ,   ಶ್ರೀರಾಮುಲು, ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್‌ಕುಮಾರ್‌ ಸುರಾನಾ, ಲಕ್ಷ್ಮಣ ಸವದಿ, ಬಿ.ವೈ.ವಿಜಯೇಂದ್ರ ಹಾಗೂ ನಯನಾ ಗಣೇಶ್ ಇದ್ದಾರೆ. ಈ ತಂಡ ಮಂಗಳೂರು, ಶಿವಮೊಗ್ಗ ಮತ್ತು ಕಲಬುರ್ಗಿ ವಿಭಾಗಗಳಲ್ಲಿ ಸಂಚರಿಸಲಿದೆ. ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ ಸಂಯೋಜಕರಾಗಿದ್ದಾರೆ.

IPS ಹೇಮಂತ ನಿಂಬಾಳಕರ್ 2 ವರ್ಷ ಸುದೀರ್ಘ ರಜೆ, ಕಾರಣ ಬಹಿರಂಗಪಡಿಸಿದ MLA ಅಂಜಲಿ ನಿಂಬಾಳಕರ್

 

Related Articles

Back to top button