
ಪ್ರಗತಿವಾಹಿನಿ ಸುದ್ದಿ: ಪಂ.ಕುಮಾರ ಗಂಧರ್ವರು ನಮ್ಮ ದೇಶದ ಹೆಮ್ಮೆಯ ಗಾಯಕ ಎಂದು ಡಾ.ಪ್ರಭಾಕರ ಕೋರೆಯವರು ಇಂದಿಲ್ಲಿ ಅಭಿಪ್ರಾಯ ಪಟ್ಟರು. ಅವರು ಕೆ.ಎಲ್.ಇ. ಸಂಸ್ಥೆ ಬೆಳಗಾವಿ ಹಾಗೂ ಕುಮಾರಗಂಧರ್ವ ಪ್ರತಿಷ್ಠಾನ ದೇವಾಸ್ (ಮ.ಪ್ರ.) ಇವರ ಸಂಯಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕುಮಾರ ಗಂಧರ್ವ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಂ.ಕುಮಾರ ಗಂಧರ್ವರು ತಮ್ಮ ಅಪ್ರತಿಮ ಗಾಯನದಿಂದ ಜಗತ್ತಿನ ಗಮನ ಸೆಳೆದ ಕಲಾವಿದರು. ಇಂಥ ಸರ್ವಶ್ರೇಷ್ಠ ಗಾಯಕ ಬೆಳಗಾವಿ ಜಿಲ್ಲೆಯ ಸೂಳೆಭಾವಿಯಲ್ಲಿ ಜನಿಸಿದ್ದಾರೆ ಎಂಬುದೇ ನಮಗೆ ಹೆಮ್ಮೆಯ ಸಂಗತಿ. ಭಾರತ ಮಾತ್ರವಲ್ಲದೆ ದೇಶವಿದೇಶಗಳಲ್ಲಿ ತಮ್ಮ ಸಂಗೀತ ಕಾರ್ಯಕ್ರಮಗಳಿಂದ ಅವರು ನಮ್ಮ ದೇಶದ ಹಾಗೂ ಕನ್ನಡ ಸಂಸ್ಕೃತಿಯ ಪರಿಚಯ ಮಾಡಿಸಿದ್ದಾರೆ. ಅವರ ಶತಮಾನೋತ್ಸವ ಬೆಳಗಾವಿಯಲ್ಲಿ ಸಂಯೋಜನೆಗೊಂಡಿರುವುದು ಸ್ತುತ್ಯವಾಗಿದೆ ಎಂದು ಡಾ. ಪ್ರಭಾಕರ ಕೋರೆ ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ ಗದುಗಿನ ತೋಂಟದಾರ್ಯ ಡಾ.ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಕುಮಾರಗಂಧರ್ವರು ಸಂಗೀತ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾದುದು. ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತಗಳನ್ನು ಸಮಾನಪ್ರೌಢಿಮೆಯಿಂದ ಹಾಡಬಲ್ಲ ಅಪರೂಪದ ಗಾಯಕ ಅವರಾಗಿದ್ದರು ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕುಮಾರಗಂಧರ್ವರ ಮಗಳು ಕಲಾಪಿನಿ ಕೋಮಕಾಳಿಯವರು ಬೆಳಗಾವಿಯಲ್ಲಿ ಕೆ.ಎಲ್.ಇ. ಸಂಸ್ಥೆಯ ಸಹಕಾರದೊಂದಿಗೆ ಆಯೋಜನೆಗೊಂಡಿರುವುದು ಸಂತೋಷದ ಸಂಗತಿ ಎಂದರು. ಶಿರೀಷ ಜೋಶಿಯವರು ಕುಮಾರ ಗಂಧರ್ವರ ಜೀವನ ಮತ್ತು ಸಾಧನೆಗಳ ಕುರಿತು ಮಾತನಾಡಿ ಅವರಿಗೆ ಮರಣೋತ್ತರ ‘ಭಾರತರತ್ನ ಪ್ರಶಸ್ತಿ’ ದೊರೆಯಬೇಕು ಎಂದು ಆಗ್ರಹಿಸಿದರು.
ನಂತರ ದಿನವಿಡೀ ನಡೆದ ಸಂಗೀತಕಾರ್ಯಕ್ರಮದಲ್ಲಿ ಸಿದ್ಧಾರ್ಥ ಬೆಳ್ಳಮಣ್ಣು ಅವರ ಅಹಿರ ಭೈರವ, ಕಲಾಪಿನಿ ಕೋಮಕಾಳಿಯವರ ಮಿಯಾ ಕಿ ತೋಡಿ,. ಸುಧಾಕರ ಚವ್ಹಾಣರ ಭೀಮಪಲಾಸ, ಅಂಕಿತಾ ಜೋಶಿಯವರ ಪೂರಿಯಾ ಧನಶ್ರೀ, ಕುಮಾರಗಂಧರ್ವರ ಮೊಮ್ಮಗ ಭುವನೇಶ ಕೋಮಕಾಳಿ ನಂದ ರಾಗಗಳನ್ನು ಪ್ರಸ್ತುತ ಪಡಿಸಿ ಕೇಳುಗರ ಮನಸೂರೆಗೊಂಡರು. ಪ್ರವೀಣ ಗೋಡಖಿಂಡಿ ಕೊಳಲಿನಲ್ಲಿ ನುಡಿಸಿದ ಶುದ್ಧಕಲ್ಯಾಣ ರಾಗ ಮತ್ತು ವಿಶ್ವಮೋಹನ ಭಟ್ ಮೋಹನ ವೀಣಾ ವಾದನ ಕೇಳುಗರನ್ನು ರಂಜಿಸಿದುವು. ಡಾ.ಸುಧಾಂಶು ಕುಲಕರ್ಣಿ, ಸಾರಂಗ ಕುಲಕರ್ಣಿ, ಸ್ವಾನಂದ ಕುಲಕರ್ಣಿ, ಇವರು ಸಂವಾದಿನಿ ಮತ್ತು ಶ್ರೀಧರ ಮಾಂಡ್ರೆ, ಅರವಿಂದಕುಮಾರ ಆಝಾದ್, ಮಯಂಕ ಬೇಡೆಕರ್ ತಬಲಾ ಸಾಥ್ ನೀಡಿದರು.
ಗಾಯಕ ಶ್ರೀಧರ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿ, ಕಲಾವಿದರನ್ನು ಪರಿಚಯಿಸಿದರು. ಉದ್ಯಮಿ ಗರಗಟ್ಟಿಯವರು, ಗಾಯಕ ಗುರುರಾಜ ಕುಲಕರ್ಣಿ, ಕೆ.ಎಲ್.ಇ. ಸಂಗೀತ ವಿದ್ಯಾಲಯದ ಮುಖ್ಯಸ್ಥ ಅಂಬರಡೆಕರ್, ಗಾಯಕಿಯರಾದ ಸುನೀತಾ ಪಾಟೀಲ, ರೋಹಿಣಿ ಗಣಫುಲೆ, ಮಂಜೂಷಾ ಖೋತ, ಹಾಗೂ ವಿಜಯ ಬಾಂದೇವಾಡಿಕರ್ ಮುಂತಾದವರು ಉಪಸ್ಥಿತರಿದ್ದರು.