*ಸಾಲ ಪಡೆದುಕೊಂಡಿದ್ದವನ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಉದ್ಯಮಿ*

ಪ್ರಗತಿವಾಹಿನಿ ಸುದ್ದಿ: ಕೊಟ್ಟ ಸಾಲ ವಾಪಸ್ ಕೊಡದಿದ್ದಕ್ಕೆ ಮನನೊಂದ ಉದ್ಯಮಿ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂದಿರುವ ಘಟನೆ ನಡೆದಿದೆ.
ಕೇರಳದ ವಯನಾಡ್ ನಲ್ಲಿ ಕೊಡಗು ಮೂಲದ ಉದ್ಯಮಿ ಸಜೀರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತ್ನಿ ಹಾಗೂ ಮಕ್ಕಳ ಸ್ಥಿತಿ ಗಂಭೀರವಾಗಿದೆ.
ಉದ್ಯಮಿ ಸಜೀರ್, ಕೇರಳದ ವಯನಾಡ್ ನ ಬಾಪು ಎಂಬುವವರಿಗೆ 20 ಲಕ್ಷ ಸಾಲ ಕೊಟ್ಟಿದ್ದರಂತೆ. ಹಣ ಪಡೆದಿದ್ದ ಬಾಪು ಸಜೀರ್ ಅವರಿಗೆ ಹಣ ವಾಪಸ್ ಕೊಡದೇ ಹಲವು ತಿಂಗಳಿಂದ ಸತಾಯಿಸುತ್ತಿದ್ದ. ಹಣ ಕೇಳಲು ಸಜೀರ್ ಬಾಪು ಅವರ ಮನೆಗೆ ಹೋಗಿದ್ದಾರೆ. ಆದರೂ ಹಣ ಕೊಟ್ಟಿಲ್ಲ.
ಇದರಿಂದ ಬೇಸತ್ತ ಸಜೀರ್ ತನ್ನ ಕುಟುಂಬ ಸಮೇತರಾಗಿ ಬಾಪು ಮನೆ ಬಳಿ ಕಾರಿನಲ್ಲಿ ತೆರಳಿ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ. ಬೆಂಕಿ ಕೆನ್ನಾಲಿಗೆಗೆ ಸಜೀರ್ ಕಾರಿನಲ್ಲಿಯೇ ಸಜೀವದಹನವಾಗಿದ್ದಾರೆ, ಕಾರಿನಲ್ಲಿದ್ದ ಅವರ ಪತ್ನಿ ಹಾಗೂ ಮಕ್ಕಳನ್ನು ರಕ್ಷಿಸಲಾಗಿದೆಯಾದರೂ ಅವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕಾಗಮಿಸಿ ಕೇರಳ ಪೊಲೀಸರು ತನಿಖೆ ನಡೆಸಿದ್ದಾರೆ.



