*ಕೋಮುದ್ವೇಷಕ್ಕೆ ಸಾವನ್ನಪ್ಪಿದ ಕುಟುಂಬದವರಿಗೆ ಪರಿಹಾರ ವಿತರಿಸಿದ ಸಿಎಂ ಸಿದ್ದರಾಮಯ್ಯ*


ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೋಮುದ್ವೇಷದ ಸಂಘರ್ಷದಲ್ಲಿ ಸಾವನ್ನಪ್ಪಿದ ಕುಟುಂಬ ಸದಸ್ಯರಿಗೆ ರಾಜ್ಯ ಸರ್ಕಾರ ಪರಿಹಾರ ವಿತರಣೆ ಮಾಡಿದೆ.
ಕೋಮುದ್ವೇಷಕ್ಕೆ ಬಲಿಯಾದ ಕುಟುಂಬದವರಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಪರಿಹಾರ ಧನದ ಚೆಕ್ ವಿತರಿಸಿದರು. ಮಸೂದ್, ಫಾಜಿಲ್, ಸಮೀರ್, ಜಲೀಲ್ ಹಾಗೂ ದೀಪಕ್ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಗಲಭೆಯಲ್ಲಿ ಮೃತಪಟ್ಟವರಿಗೆ ಬಿಜೆಪಿಯವರು 25 ಲಕ್ಷ ಪರಿಹಾರ ನೀಡಿದ್ದಾರೆ. ಆದರೆ ಎಲ್ಲರಿಗೂ ಪರಿಹಾರ ನೀಡಿಲ್ಲ. ಪ್ರವೀಣ್ ನೆಟ್ಟಾರು, ಹರ್ಷ ಮೃತಪಟ್ಟಾಗ 25 ಲಕ್ಷ ಪರಿಹಾರ ನೀಡಿದ್ದರು. ಆದರೆ ಉಳಿದವರಿಗೆ ನೀಡಿರಲಿಲ್ಲ. ಯಾವುದೇ ಸರ್ಕಾರವಿರಲಿ ಎಲ್ಲರನ್ನು ಒಂದೇ ರೀತಿ ನೋಡಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರನ್ನೂ ಒಂದೇ ರೀತಿ ಕಾಣಬೇಕು. ಸರ್ಕಾರದ ದುಡ್ಡು ಅಂದರೆ ಅದು ತೆರಿಗೆ ಹಣ, ಜನರ ದುಡ್ದು. ಈ ನಿಟ್ಟಿನಲ್ಲಿ ಗಲಭೆಯಲ್ಲಿ ಮೃತಪಟ್ಟಿದ್ದ ಪರಿಹಾರ ಸಿಗದ ಕುಟುಂಬದವರಿಗೆ ಇಂದು ಪರಿಹಾರ ನೀಡಲಾಗಿದೆ ಎಂದು ಹೇಳಿದರು.

ಈ ವೇಳೆ ಸಚಿವರಾದ ಚಲುವರಾಯಸ್ವಾಮಿ, ಜಮೀರ್ ಅಹ್ಮದ್, ಶಾಸಕ ತನ್ವೀರ್ ಸೇಠ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.




