
ಪ್ರಗತಿವಾಹಿನಿ ಸುದ್ದಿ: ಭಾರತೀಯ ಸೇನೆ ಉಗ್ರರ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಇಡೇ ದೇಶವೇ ಶ್ಲಾಘಿಸುತ್ತಿದೆ. ಹೆಮ್ಮೆ ಪಡುತ್ತಿದೆ. ಆದರೆ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಮಾತ್ರ ಅನುಮಾನ ವ್ಯಕ್ತಪಡಿಸಿದ್ದು, ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಕೋಲಾರದಲ್ಲಿ ಮಾತನಾಡಿದ ಶಾಸಕ ಮಂಜುನಾಥ್, ನಾಲ್ಕು ಫ್ಲೈಟ್ ಕಳುಹಿಸಿದ್ದು ಬಿಟ್ರೆ ಇವರೇನೂ ಮಾಡಿಲ್ಲ. 26 ಜನ ಮಹಿಳೆಯರ ಅರಿಷಿಣ ಕುಂಕುಮಕ್ಕೆ ಬೆಲೆ ಇಷ್ಟೇನಾ? ಆ ಹೆಣ್ಣುಮಕ್ಕಳಿಗೆ ಸಿಕ್ಕ ಪರಿಹಾರ ಇದೇನಾ? ನಮ್ಮ ದೇಶಕ್ಕೆ ನುಗ್ಗಿ ಪತ್ನಿಯರ ಎದುರೇ ಗಂಡಂದಿರನ್ನು ಹೊಡೆದ್ರೆ ಹೇಗೆ ಸಹಿಸುವುದು? ಇಂತಹ ಕೃತ್ಯಕ್ಕೆ ಪರಿಹಾರ ಇದಲ್ಲ. ಬೇರಿಂದ ಕೊಂಬೆತನಕ ಎಲ್ಲವನ್ನೂ ಹೊಡೆಯಬೇಕು. ಭಾರತಕ್ಕೆ ಒಳ್ಳೆಯ ಅವಕಾಶವಿದ್ದರೂ ಏನೂ ಮಾಡಿಲ್ಲ ಎಂದು ಹೇಳಿದ್ದಾರೆ
ಅಷ್ಟೇ ಅಲ್ಲ ಆಪರೇಷನ್ ಸಿಂಧೂರ್ ಹೆಸರಲ್ಲಿ ನೂರು ಉಗ್ರರನ್ನು ಹೊಡೆದ್ವಿ, ಅಷ್ಟು ಜನ ಉಗ್ರರನ್ನು ಹತ್ಯೆ ಮಾಡಿದ್ದೇವೆ ಅಂತಾರೆ. ಆದ್ರೆ ಇಲ್ಲಿಯವರೆಗೂ ಎಲ್ಲೂ ಕನ್ಫರ್ಮ್ ಆಗಿಲ್ಲ. ಮಾಧ್ಯಮಗಳಲ್ಲಿ ಬಂದಿದ್ದು ಬಿಟ್ರೆ ಬೇರೆಲ್ಲೂ ನೋಡಿಲ್ಲ. ಉಗ್ರರ ವಿರುದ್ಧ ಭಾರತ ಕೊಟ್ಟ ಉತ್ತರ ಸಮಾಧಾನಕರವಾಗಿಲ್ಲ ಎಂದು ಹೇಳಿದ್ದಾರೆ.