Kannada NewsKarnataka News
ಬಸ್ ಢಿಕ್ಕಿಯಾಗಿ ಐದು ವರ್ಷದ ಬಾಲಕಿ ಸಾವು

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಖಾಸಗಿ ಶಾಲಾ ಬಸ್ ಢಿಕ್ಕಿಯಾಗಿ ಐದು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ಚಿಕ್ಕೋಡಿ ಪಟ್ಟಣದ ಮೆಹಬೂಬ್ ನಗರ ಬಳಿ ಅಪಘಾತ ಸಂಭವಿಸಿದೆ. ಐದು ವರ್ಷದ ರಾಜನಂದಿನಿ ಎಂಬ ಬಾಲಕಿ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.
ಅನುಜಾ ಹಾಗೂ ಪರಶುರಾಮ ಯಾದವ ದಂಪತಿಯ ಪುತ್ರಿ ರಾಜನಂದಿನಿ ತಾಯಿ ಮತ್ತು ಸೋದರ ಮಾವನೊಂದಿಗೆ ಬೈಕ್ ನಲ್ಲಿ ಹೊರಟಿದ್ದ ವೇಳೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದಳು.
ಸಹೋದರನೊಂದಿಗೆ ಹೊರಟಿದ್ದ ಅನುಜಾ (೨೮), ಪರಶುರಾಮ ನಿರ್ಮಳ (೨೫), ೬ ವರ್ಷದ ವಿವೇಕಾ ಳಿಗೆ ಗಂಭೀರ ಗಾಯವಾಗಿದೆ.
ಸೇಂಟ್ ಫ್ರಾನ್ಸಿಸ್ ಪ್ರಾಥಮಿಕ ಶಾಲೆಯ ಬಸ್ ನ್ನು ಬಸ್ ಚಾಲಕ ತಿರುವಿನಲ್ಲಿ ಅತಿವೇಗವಾಗಿ ಬಸ್ ಚಲಾವಣೆ ಮಾಡಿದ್ದೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.
ಬಸ್ ಹಿಂಬದಿಯಲ್ಲಿ ಬುಲೆಟ್ ಸಿಲುಕಿ ಬಾಲಕಿ ರಾಜನಂದಿನಿ ಸಾವಿಗೀಡಾದಳು. ದೀಪಾವಳಿ ಹಬ್ಬದ ನಿಮಿತ್ಯ ತವರೂರು ಕಲ್ಲೋಳ ಗ್ರಾಮಕ್ಕೆ ಮಕ್ಕಳೊಂದಿಗೆ ಬಂದಿದ್ದ ಅನುಜಾ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಘಾರಗುಟಗಿ ಗ್ರಾಮಕ್ಕೆ ತೆರಳುವಾಗ ಅಪಘಾತವಾಗಿದೆ.
ಚಿಕ್ಕೋಡಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




