Latest

ಅಂಬರೀಶ್ ಹೆಂಡ್ತಿ ಎಂಬ ಕಾರಣಕ್ಕೆ ಸಂಸದರಾಗಿ ಆಯ್ಕೆ; ವೈಯಕ್ತಿಕ ವರ್ಚಸ್ಸಿಂದ ಗೆದ್ದಿಲ್ಲ; ಸುಮಲತಾ ವಿರುದ್ಧ ಶಾಸಕ ಪುಟ್ಟರಾಜು ಕಿಡಿ

ಪ್ರಗತಿವಾಹಿನಿ ಸುದ್ದಿ; ಮೇಲುಕೋಟೆ: ಜೆಡಿಎಸ್ ಶಾಸಕರು ಬರಿ ಧಮ್ಕಿ ಹಾಕುತ್ತಾ, ಗೂಂಡಾಗಿರಿ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಹೊರತು ಯಾವುದೇ ಒಂದು ಸಭೆಗೂ ಬರುತ್ತಿಲ್ಲ. ಸುಮಲತಾ ಅವರನ್ನು ಟಾರ್ಗೆಟ್ ಮಾಡಲೆಂದು ಆಯ್ಕೆಯಾಗಿದ್ದಾರಾ ಎಂಬ ಸಂಸದೆ ಸುಮಲತಾ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಪುಟ್ಟರಾಜು, ಲಘುವಾಗಿ ಮಾತನಾಡುವುದು ಸಂಸದೆ ಸುಮಲತಾ ಅವರಿಗೆ ಶೋಭೆತರಲ್ಲ ಎಂದು ಗುಡುಗಿದ್ದಾರೆ.

ಮೇಲುಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕ ಪುಟ್ಟರಾಜು, ಮೂಡಾ ಸೈಟ್ ಹಗರಣದ ಬಗ್ಗೆಯೂ ಸುಮಲತಾ ಆರೋಪಿಸಿದ್ದಾರೆ. ಶಾಸಕರನ್ನು ಲಘುವಾಗಿ ಟೀಕಿಸುವುದು ಸರಿಯಲ್ಲ. ಚಲುವನಾರಾಯಣನ ಸನ್ನಿದಿಯಲ್ಲಿ ನಿಂತು ಮಾತನಾಡುತ್ತಿದ್ದೇನೆ. ಮೂಡಾ ಸೈಟ್ ಹಗರಣದಲ್ಲಿ ನನ್ನ ಪಾತ್ರವಿಲ್ಲ. ಅವರ ಬಳಿ ದಾಖಲೆ ಇದ್ದರೆ ತಂದು ತೋರಿಸಲಿ. ಈ ವಿಚಾರದಲ್ಲಿ ನಾನು ಚರ್ಚೆಗೆ ಸಿದ್ಧ. ದಿನಾಂಕ, ಸ್ಥಳ ನಿಗದಿ ಮಾಡಲಿ. ನಾನು ದಾಖಲೆ ಸಮೇತ ಬರುತ್ತೇನೆ ಎಂದು ಹೇಳಿದರು.

ನನ್ನ ಕ್ಷೇತ್ರದಲ್ಲಿ ನಾನು ದುಡಿದ ದುಡ್ಡಿನಲ್ಲಿ ಕೆಲಸ ಮಾಡಿಸುತ್ತಿದ್ದೇನೆ. ರಾಜಕೀಯದಿಂದ ಹಣ ಸಂಪಾದಿಸಿಲ್ಲ. ರಾಜಕೀಯದಲ್ಲಿ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಸುಮಲತಾ ಅವರು ನಟ ಅಂಬರೀಶ್ ಹೆಂಡ್ತಿ ಎಂಬ ಕಾರಣಕ್ಕೆ ಸಂಸದರಾಗಿ ಆಯ್ಕೆಯಾಗಿದ್ದಾರೆ ಹೊರತು ಅವರ ವೈಯಕ್ತಿಕ ವರ್ಚಸ್ಸಿಂದ ಗೆದ್ದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆಯ್ಕೆಯಾದ ಮೇಲೆ ಜನರ ಕೆಲಸ ಮಾಡಬೇಕು. ಬರಿ ಗಾಳಿಯಲ್ಲಿ ಗುಂಡು ಹೊಡೆಯುವುದಲ್ಲ ಎಂದು ವಾಗ್ದಾಳಿ ನಡೆಸಿದರು.

ಕಳೆದ ಮೂರುವರೆ ವರ್ಷದಿಂದ ಸುಮಲತಾ ಏನು ಮಾಡಿದ್ದಾರೆ ತೋರಿಸಲಿ. ಸಂಸತ್ ಗೆ ಹೋಗಿ ಕುಳಿತರೆ ಸಾಕಾ? ಕ್ಷೇತ್ರದಲ್ಲಿ ಜನರ ಕೆಲಸ ಮಾಡುವವರು ಯಾರು? ಗಾಳಿಯಲ್ಲಿ ಗುಂಡು ಹೊಡೆಯುವುದು, ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದಲ್ಲ, ಹೊಡೆದರೆ ಎದೆಗೆ ಗುಂಡು ಹೊಡೆಯಬೇಕು ಅದೇನು ದಾಖಲೆ ತರುತ್ತಾರೆ ತರಲಿ ನಾನು ಚರ್ಚೆಗೆ ಸಿದ್ಧನಿದ್ದೇನೆ ಎಂದು ಹೇಳಿದರು.

Home add -Advt

ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ನಟಿ

https://pragati.taskdun.com/latest/actress-deepasuicidetamilnadu/

Related Articles

Back to top button